ಕರ್ನಾಟಕ

karnataka

By ETV Bharat Karnataka Team

Published : Oct 18, 2023, 5:48 PM IST

ETV Bharat / state

ಬಿಜೆಪಿ, ಜೆಡಿಎಸ್​ನಿಂದ ಐಟಿ ದಾಳಿ ಹೆಸರಿನಲ್ಲಿ ಅನಾವಶ್ಯಕ ಭ್ರಷ್ಟಾಚಾರದ ಆರೋಪ: ಕಾಂಗ್ರೆಸ್ ಪ್ರತಿಭಟನೆ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್​ ಪಕ್ಷಗಳು ಕಾಂಗ್ರೆಸ್​ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ ಎಂದು ಕಾಂಗ್ರೆಸ್​ ವಾಗ್ದಾಳಿ ಮಾಡಿದೆ.

Protest by Congress party
ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

ಬೆಂಗಳೂರು: ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಅನಾವಶ್ಯಕವಾಗಿ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ಮೇಲೆ ಐಟಿ ದಾಳಿಯ ನೆಪವೊಡ್ಡಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ರೇಸ್ ಕೋರ್ಸ್ ರಸ್ತೆ ಬಳಿಯ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ನಾಯಕರು ವಿನೂತನ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್, ಭಾರತೀಯ ಜನತಾ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಈ ಹಿಂದೆ ಬಿಜೆಪಿ ಸರ್ಕಾರದ ಮಂತ್ರಿಗಳನ್ನು ಬ್ಲ್ಯಾಕ್​ಮೇಲ್​ ಮಾಡಿ ಒಳಒಪ್ಪಂದ ಮಾಡಿಕೊಂಡು ಲಾಭ ಪಡೆದಿರುವುದು ಎಲ್ಲರಿಗೂ ತಿಳಿದಿದೆ. ಈಗ ಬಿಜೆಪಿಯೊಂದಿಗೆ ಕೈಜೋಡಿಸಿ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮಂತ್ರಿಗಳ ವಿರುದ್ಧ ಬ್ಲ್ಯಾಕ್​ಮೇಲ್​ ತಂತ್ರ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಒಬ್ಬ ನೈಜ ಬ್ಲ್ಯಾಕ್​ಮೇಲ್ ರಾಜಕಾರಣಿ ಎಂದು ರಾಜ್ಯದ ಜನತೆಗೆ ಈಗಾಗಲೇ ಗೊತ್ತಾಗಿದೆ ಎಂದು ಟೀಕಿಸಿದರು.

ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ನಡೆಸಿದ ಅವರು ಇಂದು ಅದನ್ನು ಮರೆಮಾಚಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಕುಗ್ಗಿಸಲು ಜೆಡಿಎಸ್​ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಎಷ್ಟು ಮೂರ್ಖರು ಎಂದು ಈಗ ಜನತೆಗೆ ತಿಳಿದಿದೆ. ಕೇಂದ್ರ ಸರ್ಕಾರದ ಆಧೀನದಲ್ಲಿರುವ ಆದಾಯ ತೆರಿಗೆ, ಇಡಿ, ಸಿಬಿಐ, ಇಲಾಖೆಗಳು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದು ಗೊತ್ತಾಗಿದೆ ಎಂದು ಕಿಡಿ ಕಾರಿದರು.

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿದ ಹಣ ಯಾವ ಮೂಲದ್ದು ಎಂದು ಅಧಿಕಾರಿಗಳೇ ಪತ್ರಿಕಾ ಹೇಳಿಕೆ ಮೂಲಕ ಬಹಿರಂಗಪಡಿಸಿದ್ದಾರೆ. ಇಷ್ಟಾದರೂ ಸಾಮಾನ್ಯ ಪ್ರಜ್ಞೆ ಇಲ್ಲದ ಬಿಜೆಪಿ ಜೆಡಿಎಸ್​ನವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೂಟಿ ಮಾಡಿರುವ ಹಣದಲ್ಲಿ ಬಿಜೆಪಿ, ಜೆಡಿಎಸ್ ಇಂದು ಹೋರಾಟ ನಡೆಸುತ್ತಿದೆ. ಯಾರ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದರು, ಬಿಜೆಪಿ ಯಾರ ವಿರುದ್ಧ ಹೋರಾಟ ನಡೆಸಿತು, ಅದನ್ನೆಲ್ಲ ಮರೆತು ಭ್ರಷ್ಟಾಚಾರದ ಮೂಲಕ ಇಂದು ಒಂದಾಗಿದ್ದಾರೆ. ರಾಜ್ಯದ ಜನತೆಗೆ ಭ್ರಷ್ಟ ಬಿಜೆಪಿ ಹಾಗೂ ಜನತಾದಳದ ರಾಜಕೀಯ ಲಾಭದ ಹೋರಾಟವನ್ನು ತಿಳಿಸಲು ಈ ವಿನೂತನ ಪ್ರತಿಭಟನೆಯನ್ನು ಇಂದು ನಡೆಸಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಜಿ. ಜನಾರ್ದನ್, ಸುಧಾಕರ್, ಪರಿಸರ ರಾಮಕೃಷ್ಣ, ಈ. ಶೇಖರ್, ಪ್ರಕಾಶ್, ಹೇಮರಾಜ್, ಶ್ರೀಧರ್, ಆನಂದ್, ಕೆ.ಟಿ. ನವೀನ್, ಚಿನ್ನಿಪ್ರಕಾಶ್, ಓಬಳೇಶ್ ಹಾಗೂ ಉಮೇಶ್, ಪುಟ್ಟರಾಜು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ಪಂಚರಾಜ್ಯ ಚುನಾವಣೆಗೆ ಕರ್ನಾಟಕ ಎಟಿಎಂ: ಕಾಂಗ್ರೆಸ್‌ ವಿರುದ್ಧ ಕಟೀಲ್ ವಾಗ್ದಾಳಿ

ABOUT THE AUTHOR

...view details