ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆ ಜನರು ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ಆದರೆ, ಬಸ್ ದರ ಕೇಳಿ ಅವರಿಗೆಲ್ಲ ಶಾಕ್ ಎದುರಾಗಿರುವುದು ಖಂಡಿತ ಎನ್ನುವಂತಿದೆ. ಹಬ್ಬಕ್ಕಾಗಿ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದು, ಕಳೆದ ಎರಡು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಶೇ. 30 ರಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ಟಿಕೆಟ್ಗೆ ಡಿಮ್ಯಾಂಡ್ ಇದೆ. ಖಾಸಗಿ ಬಸ್ಗಳ ಟಿಕೆಟ್ ದರದಲ್ಲಿ ಹೆಚ್ಚಳ ಕಂಡುಬಂದಿದೆ.
ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಿಗೆ ತೆರಳುವ ಬಸ್ಗಳ ಟಿಕೆಟ್ ದರ ಸರಾಸರಿ 100 ರಿಂದ 200 ರೂ ಹೆಚ್ಚಳವಾಗಿದ್ದರೆ, ಉತ್ತರ ಕರ್ನಾಟಕ ಭಾಗಕ್ಕೆ ತೆರಳುವ ಬಸ್ ಗಳ ಟಿಕೆಟ್ ದುಬಾರಿಯಾಗಿದ್ದು, ಕನಿಷ್ಟ 600 ರಿಂದ 700 ರೂ ವರೆಗೂ ಹೆಚ್ಚಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಟ್ರಾವೆಲ್ ಮಾಲೀಕರು ತಿಳಿಸಿದ್ದಾರೆ. ಬೆಂಗಳೂರಿಂದ ತೆರಳುವ ಟಿಕೆಟ್ ದರ ಗಮನಿಸುವುದಾದರೆ ಕಲಬುರ್ಗಿಗೆ ಸಾಮಾನ್ಯ ದಿನಗಳಲ್ಲಿ 750 ರೂ. ಇದ್ದದ್ದು 1300 ರೂ. ಗೆ ಏರಿಕೆಯಾಗಿದೆ.