ಕರ್ನಾಟಕ

karnataka

Bengaluru Audi car crash: ಸಾವಿನ ದವಡೆಯಿಂದ ಡೆಲಿವರಿ‌ ಬಾಯ್ ಪಾರು; ಪೊಲೀಸರ ಮೇಲೆ ಕಾರು ಹರಿಸಲು ಯತ್ನ?

ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಡಿಎಂಕೆ ಶಾಸಕರ ಪುತ್ರ ಸೇರಿದಂತೆ 7 ಮಂದಿ ಸಾವಿಗೀಡಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

By

Published : Sep 1, 2021, 3:57 PM IST

Published : Sep 1, 2021, 3:57 PM IST

ಬೆಂಗಳೂರು ಕಾರು ಅಪಘಾತ ಪ್ರಕರಣ
ಬೆಂಗಳೂರು ಕಾರು ಅಪಘಾತ ಪ್ರಕರಣ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಂಗಳವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಡಿಎಂಕೆ ಶಾಸಕರ ಪುತ್ರ ಸೇರಿದಂತೆ 7 ಮಂದಿ ಸಾವಿಗೀಡಾದ ಪ್ರಕರಣ ಸಂಬಂಧ ಆಡುಗೋಡಿ ಸಂಚಾರ ಪೊಲೀಸರ ಜೊತೆಗೆ ಕಾನೂನು ಸುವ್ಯವಸ್ಥೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಪಘಾತ ನಡೆಯುವ ಮುನ್ನ ಮೃತರು ಎಲ್ಲೆಲ್ಲಿ ಸುತ್ತಾಡಿದ್ದರು?, ಎಲ್ಲಿ ಪಾರ್ಟಿ ಮಾಡಿದ್ದರು? ಎಂಬುದರ ಬಗ್ಗೆ ಕೋರಮಂಗಲ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತ್ತೊಂದೆಡೆ, ಅವಘಡ ಸಂಭವಿಸುವ ಮುನ್ನ ಗಸ್ತು ಪೊಲೀಸರು ಹಾಗೂ ಡೆಲಿವರಿ ಬಾಯ್ ಪ್ರಾಣಾಪಾಯದಿಂದ ಪಾರಾಗಿರುವುದು ತಿಳಿದುಬಂದಿದೆ.

ಈ ಘಟನೆ ನಡೆಯುವ ಮುನ್ನ ಸೋನಿ ವರ್ಲ್ಡ್ ಟ್ರಾಫಿಕ್ ಸಿಗ್ನಲ್ ಬಳಿ ಕಾರನ್ನು ಅತೀ ವೇಗವಾಗಿ ಚಾಲನೆ ಮಾಡುತ್ತಿದ್ದ ಶಾಸಕರ ಪುತ್ರ ಮತ್ತು ಸ್ನೇಹಿತರಿದ್ದ ಕಾರಿನಿಂದ ಜೊಮ್ಯಾಟೊ ಡೆಲಿವರಿ‌ ಬಾಯ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ. ಎನ್​ಜಿವಿ ಸಿಗ್ನಲ್ ಬಳಿ ಕಾರನ್ನು ತಡೆಯಲು ಹೋದಾಗ ಪೊಲೀಸರ ಮೇಲೆ ಕಾರು ಹತ್ತಿಸಲು ಮುಂದಾಗಿದ್ದರಂತೆ. ಅಡ್ಡಾದಿಡ್ಡಿ (ಜಿಗ್‌ಜ್ಯಾಗ್) ರೀತಿಯಲ್ಲಿ ಯುವಕರ ಗುಂಪು ಕಾರು ಚಾಲನೆ ಮಾಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೂ ಮುನ್ನ ಕೋರಮಂಗಲದಲ್ಲೇ ಸುಮಾರು ಒಂದು ಗಂಟೆ ಕಾಲ ಜಾಲಿ ರೈಡ್ ಸೋಗಿನಲ್ಲಿ ಕಾರಿನಲ್ಲಿ ಸುತ್ತಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಕೋರಮಂಗಲ ಚೆಕ್‌ಪೋಸ್ಟ್ ಬಳಿಯೂ ಪೊಲೀಸರು ಕಾರು ತಡೆದು ಎಚ್ಚರಿಕೆ ನೀಡಿದ್ದರೂ ಎಚ್ಚೆತ್ತುಕೊಳ್ಳದೆ, ಎನ್​ಜಿವಿ ಸಿಗ್ನಲ್ ಬಳಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಅದೃಷ್ಟವಶಾತ್ ಕಾರಿನ ವೇಗ ನೋಡಿ ಸ್ಥಳದಿಂದ ತಪ್ಪಿಸಿಕೊಂಡಿದ್ದೆವು ಎಂದು ಪೊಲೀಸರೊಬ್ಬರು ತಿಳಿಸಿದರು.

ಇದನ್ನೂ ಓದಿ:Bengaluru Accident.. ದುರಂತಕ್ಕೂ ಮುನ್ನ‌ ಪೊಲೀಸರ ಎಚ್ಚರಿಕೆ ಕಡೆಗಣಿಸಿತಾ ಶಾಸಕ ಪುತ್ರನ ಗ್ಯಾಂಗ್?

ಇನ್ನೊಂದೆಡೆ, ಅವಘಡ ಸಂಭವಿಸುವ ಮುನ್ನ ಏಳು ಮಂದಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಶಂಕೆಯ ಮೇರೆಗೆ ಕೋರಮಂಗಲದಲ್ಲಿರುವ ಎಲ್ಲಾ ಬಾರ್ & ರೆಸ್ಟೋರೆಂಟ್ ಹಾಗೂ ಪಬ್‌ಗಳಿಗೆ ಹೋಗಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈ ಭಾಗದಲ್ಲಿ ಎಲ್ಲಿಯೂ ಪಾರ್ಟಿ ಮಾಡಿರುವ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ.

ಎಂ.ಜಿ.ರೋಡ್, ಬ್ರಿಗೇಡ್ ರೋಡ್‌ ಸುತ್ತಮುತ್ತಲೂ ಪಾರ್ಟಿ ಮಾಡಿರುವ ಅನುಮಾನ ಹಿನ್ನೆಲೆಯಲ್ಲಿ ಅಲ್ಲಿರುವ ಪಬ್, ಬಾರ್ & ರೆಸ್ಟೋರೆಂಟ್ ಬಳಿ ಹೋಗಿ ಪೊಲೀಸರು ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ.

ಅಪಘಾತ ಆಗಿರುವ ಕಾರಿನಲ್ಲಿ ಕೇವಲ 3 ಮೊಬೈಲ್ ಫೋನ್​ಗಳು ಪತ್ತೆಯಾಗಿವೆ. ಇನ್ನೂ ಮೂರು ಮೊಬೈಲ್ ಪೋನ್​ಗಳ ಡಿಸ್‌ಪ್ಲೇ ಒಡೆದು ಹೋಗಿದೆ‌. ಹೀಗಾಗಿ ಮೊಬೈಲ್ ಕರೆಗಳನ್ನು ಮಾಹಿತಿ ಆಧರಿಸಿ ಟವರ್ ಲೊಕೇಷನ್ ಮೂಲಕ ಪಾರ್ಟಿ ನಡೆದ ಸ್ಥಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಅಪಘಾತಕ್ಕೆ ಮದ್ಯ ಸೇವನೆ ಕಾರಣವಾಗಿರಬಹುದಾ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಮೃತರ ರಕ್ತದ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ವೈದ್ಯಕೀಯ ವರದಿ ಬಂದ ಬಳಿಕ ಮದ್ಯಪಾನ ಮಾಡಿದ್ದರಾ? ಇಲ್ಲವಾ? ಎಂಬುವುದು ಗೊತ್ತಾಗಲಿದೆ‌.

ಇದನ್ನೂ ಓದಿ:ಬೆಂಗಳೂರು ಭೀಕರ ಕಾರು ಅಪಘಾತದ ಸಿಸಿಟಿವಿ ದೃಶ್ಯ

ABOUT THE AUTHOR

...view details