ಬೆಂಗಳೂರು: ಸ್ಮಾರ್ಟ್ ಹೋಮ್ ಸೆಕ್ಯುರಿಟಿ ಸಿಸ್ಟಂ ಹಾಗೂ ಮನೆ ಮಾಲೀಕನ ಮಗನ ಸಮಯ ಪ್ರಜ್ಞೆಯಿಂದ ಖತರ್ನಾಕ್ ಕಳ್ಳರು ಪೊಲೀಸ್ ಅತಿಥಿಗಳಾದ ಘಟನೆ ಜನವರಿ 10ರಂದು ತಲಘಟ್ಟಪುರ ಠಾಣಾ ವ್ಯಾಪ್ತಿಯ ವಿಶ್ರಾಂತಿ ಲೇಔಟ್ನಲ್ಲಿ ನಡೆದಿದೆ. ಅಜಯ್ ಕರಯ್ ಬಾಲಗೋಪಾಲ್ ಎಂಬ ಉದ್ಯಮಿ ಮನೆಗೆ ನುಗ್ಗಿದ್ದ 7 ಜನ ಆರೋಪಿಗಳನ್ನ ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಜಯ್ ಕರಯ್ ಬಾಲಗೋಪಾಲ್ ವಿಶ್ರಾಂತಿ ಲೇಔಟ್ನಲ್ಲಿ ತಮ್ಮ ಇಬ್ಬರು ಪುತ್ರರೊಂದಿಗೆ ವಾಸವಿದ್ದು, ಜನವರಿ 10ರಂದು ರಾತ್ರಿ ಅವರ ಮನೆಗೆ ಐವರು ಕಳ್ಳರ ತಂಡ ಮಾರಕಾಸ್ತ್ರಗಳೊಂದಿಗೆ ಬಂದಿದೆ. ಬೆಳಗ್ಗೆ 5:30ಕ್ಕೆ ಎಂದಿನಂತೆ ಎಚ್ಚರಗೊಂಡ ಅಜಯ್ ಪುತ್ರ ಸಮೀರ್, ತಂದೆಗೆ ಟೀ ಮಾಡಿಕೊಡಲು ಅಡುಗೆ ಮನೆಯತ್ತ ತೆರಳಿದ್ದಾನೆ. ಅಡುಗೆ ಮನೆಯೊಳಗೆ ಹೋಗುತ್ತಿದ್ದಂತೆ ಫ್ರಿಡ್ಜ್ ಓಪನ್ ಆಗಿದ್ದನ್ನು ನೋಡಿದ ಸಮೀರ್ ಕೂಡಲೇ ತಮ್ಮ ಮೊಬೈಲ್ನಲ್ಲಿದ್ದ ಸ್ಮಾರ್ಟ್ ಹೋಮ್ ಸಿಸ್ಟಂನ ಸಿಸಿಟಿವಿ ದೃಶ್ಯ ಚೆಕ್ ಮಾಡಿದ್ದಾನೆ. ಈ ವೇಳೆ ಸುತ್ತಿಗೆ ಕಬ್ಬಿಣದ ರಾಡ್ ಹಿಡಿದು ಕಳ್ಳರು ಮನೆಗೆ ನುಗ್ಗಿರುವುದು ಪತ್ತೆಯಾಗಿದೆ.
ನಂತರ ದರೋಡೆಕೋರರಿದ್ದ ರೂಮ್ ಬಾಗಿಲು ಚಿಲಕ ಹಾಕಿದ ಸಮೀರ್, ಇನ್ನೊಂದು ರೂಮಿನಲ್ಲಿ ತಾನೂ ಲಾಕ್ ಆಗಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ತಲಘಟ್ಟಪುರ ಠಾಣಾ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ದು, ಬಳಿಕ ಕೊಯಮತ್ತೂರಿಗೆ ತೆರಳಿ ಇನ್ನಿಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ಒಡಿಶಾ ಮೂಲದ ಶೇಕ್ ಖಲೀಂ, ಮಹಮ್ಮದ್ ನಿನಾಜ್, ಇಮ್ರಾನ್ ಶೇಕ್, ಸೈಯದ್ ಫೈಜಲ್, ರಾಮ್ ಬಿಲಾಸ್, ಸುನಿಲ್ ಡಾಂಗಿ, ರಜತ್ ಎಂಬಾತನನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿಯಿಂದ ₹58 ಲಕ್ಷ ಮೌಲ್ಯದ ಆಭರಣ ಕಳ್ಳತನ: ಬೆಂಗಳೂರಿನಲ್ಲಿ ಕಳೆದ ವಾರ ಯುವತಿಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಜ್ಯವೆಲ್ಲರಿಯಲ್ಲೇ ಕಳ್ಳತನ ಮಾಡಿದ್ದಳು. ಬೀದರ್ ಮೂಲದ ಯುವತಿ ಚಿನ್ನಾಭರಣ, ವಜ್ರದ ಕಿವಿಯೋಲೆ ಎಗರಿಸಿ ಪರಾರಿಯಾಗಿದ್ದಳು. ಬಳಿಕ ಯುವತಿ ಯಾವುದೇ ಮಾಹಿತಿ ನೀಡದೇ ಕೆಲಸಕ್ಕೆ ಬರುವುದನ್ನೇ ನಿಲ್ಲಿಸಿದ್ದಳು.