ಕರ್ನಾಟಕ

karnataka

ಬೆಂಗಳೂರು ಮೈಸೂರು ಹೆದ್ದಾರಿಗೆ ದೇವೇಗೌಡರ ಹೆಸರಿಡುವ ಕುರಿತು ಪರಿಶೀಲಿಸುವ ಭರವಸೆ: ಟಿ.ಎ.ಶರವಣ

By

Published : Jan 5, 2023, 9:42 PM IST

ಜೆಡಿಎಸ್ ನಿಯೋಗದ ಮನವಿ ಆಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ- ಟಿ ಎ ಶರವಣ ನೇತೃತ್ವದ ಜೆಡಿಎಸ್​ ನಿಯೋಗ ಗಡ್ಕರಿ ಭೇಟಿ- ಈ ಭಾಗದ ಜನರ ಅಪೇಕ್ಷೆಗೆ ಸ್ಪಂದಿಸುವಂತೆ ಮನವಿ

Nithin Gadkari and H D Devegowda
ನಿತಿನ್​ ಗಡ್ಕರಿ ಹಾಗೂ ಹೆಚ್​ ಡಿ ದೇವೇಗೌಡ

ಬೆಂಗಳೂರು: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ ಹೆದ್ದಾರಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹೆಸರಿಡುವ ಕುರಿತು ಪರಿಶೀಲನೆ ಮಾಡುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿನಿತ್ ಗಡ್ಕರಿ ಭರವಸೆ ನೀಡಿದ್ದಾರೆ ಎಂದು ಜೆಡಿಎಸ್ ಮುಖಂಡ ಟಿ ಎ ಶರವಣ ಹೇಳಿದ್ದಾರೆ. ನಗರದ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ಹೆಚ್.ಕೆ ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಶರವಣ ನೇತೃತ್ವದ ಜೆಡಿಎಸ್ ನಿಯೋಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದೆ. ಈ ವೇಳೆ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರನ್ನು ಇಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಗೌಡರ ಕೊಡುಗೆ, ಸಾಧನೆಗೆ ಗೌರವ ನೀಡಿ ಈ ಭಾಗದ ಜನತೆಯ ಅಪೇಕ್ಷೆಗೆ ಸ್ಪಂದಿಸುವಂತೆ ಮನವಿ ಮಾಡಿತು. ಜೆಡಿಎಸ್ ನಿಯೋಗದ ಮನವಿ ಆಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ ಎಂದರು.

ಕೇಂದ್ರ ಸಚಿವರ ಭೇಟಿ ನಂತರ ಮಾತನಾಡಿದ ಜೆಡಿಎಸ್ ನಾಯಕ ಶರವಣ, ನಿತಿನ್ ಗಡ್ಕರಿ ಮತ್ತು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದಶಪಥ ರಸ್ತೆಗೆ ದೇವೇಗೌಡರ ಹೆಸರು ಇಡಲು ಮನವಿ ಮಾಡಿದ್ದೇನೆ. ಆ ಭಾಗದ ಜನತೆ ಅಪೇಕ್ಷೆ ಇದೇ ಆಗಿದೆ ಹಾಗಾದಲ್ಲಿ ಗೌಡರ ಸಾಧನೆಗೆ ಗೌರವ ಬರಲಿದೆ ಎಂದು ಮನವಿ ಮಾಡಿದ್ದೇನೆ, ದೆಹಲಿಗೆ ಹೋಗಿ ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಸಿಎಂ ಕೂಡ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದ್ದಾರೆ. ರಾಷ್ಟ್ರದ ಆಸ್ತಿಯಾದ ಗೌಡರ ಹೆಸರಿಡುವ ಮನವಿಗೆ ಸ್ಪಂದಿಸಿದ್ದಾರೆ. ಬೇಡಿಕೆ ಈಡೇರಿಸುವ ವಿಶ್ವಾಸ ಇದೆ ಎಂದರು.

ದೇವೇಗೌಡರು ಈ ನೆಲದ ಸಾರ್ವಭೌಮ ರಾಜಕಾರಣಿ ಮತ್ತು ಅಜಾತ ಶತ್ರು ಆಗಿದ್ದಾರೆ. ಈ ರಸ್ತೆ ಹಾದು ಹೋಗುವ ಕಡೆ ದೇವೇಗೌಡರ ಶ್ರಮವಿದೆ. ಹಾಗಾಗಿ, ಇದನ್ನು ಮನಗಂಡು ದಶಪಥ ರಸ್ತೆಗೆ ದೇವೇಗೌಡರ ಹೆಸರು ಇಡುವುದು ಸೂಕ್ತ ಎಂದು ವಿಧಾನಪರಿಷತ್ ಸದಸ್ಯ ಶರವಣ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದರು. ಕನ್ನಡ ನಾಡಿನ ನೆಲ, ಜಲಕ್ಕೆ, ಇಲ್ಲಿನ ಹಕ್ಕುಗಳಿಗೆ ಮತ್ತು ನಾಡಿನ ಅಸ್ಮಿತೆಗೆ ದೇವೇಗೌಡರ ಕೊಡುಗೆ ಅಪಾರವಾಗಿದೆ. ನಾಡಿನ ಜೀವ ನದಿನಗಳಾದ ಕಾವೇರಿ ಹೋರಾಟದಿಂದ ಕೃಷ್ಣ ಹೋರಾಟದವರೆಗೂ ಅವರ ಜನಪರ ಆಂದೋಲನ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ ಎಂದು ಹೇಳಿದ್ದರು.

ಪ್ರಧಾನಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಪ್ರಥಮ ಕನ್ನಡಿಗ ಎನ್ನುವ ಹಿರಿಮೆ ದೇವೇಗೌಡರದ್ದು. ಕರ್ನಾಟಕದ ಕೀರ್ತಿ ಪತಾಕೆಯನ್ನು ದೆಹಲಿವರೆಗೂ ಕೊಂಡೊಯ್ದ ಹೆಮ್ಮೆ. ದಶಪಥ ರಸ್ತೆಗೆ ಅವರ ಹೆಸರಿಟ್ಟರೆ ಕೇಂದ್ರಕ್ಕೂ ಹೆಸರು ಬರುತ್ತದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ವೀಕ್ಷಣೆ ಮತ್ತು ವೈಮಾನಿಕ ಸಮೀಕ್ಷೆಗಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ, ಈ ಭಾಗದ ಜನರ ಭಾವನೆಗಳನ್ನು ನೀವು ಅರ್ಥ ಮಾಡಿಕೊಂಡಿದ್ದರೆ, ದಶಪಥ ರಸ್ತೆಗೆ ದೇವೇಗೌಡರ ಹೆಸರನ್ನು ನಾಮಕರಣ ಮಾಡಬೇಕೆಂದು ಮನವಿ ಮಾಡಿದ್ದರು.

ಎರಡು ವಾರಗಳ ಹಿಂದೆಯಷ್ಟೇ ದೆಹಲಿಯಲ್ಲಿ ನಿತಿನ್​ ಗಡ್ಕರಿ ಅವರನ್ನು ಭೇಟಿಯಾಗಿದ್ದ ಮೈಸೂರು ಸಂಸದ ಪ್ರತಾಪ್​ ಸಿಂಹ ಬೆಂಗಳೂರು ಮಯಸೂರು ದಶಪಥ ಹೆದ್ದಾರಿಗೆ ಕಾವೇರಿ ಎಕ್ಸ್​ಪ್ರೆಸ್​ ವೇ ಎಂದು ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದರು. ಮನವಿಗೆ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದೂ ಪ್ರತಾಪ್​ ಸಿಂಹ ತಿಳಿಸಿದ್ದರು. ಇದೀಗ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಯಾರ ಮನವಿಯನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಮುಂದಿನ ಫೆಬ್ರವರಿ ಅಂತ್ಯಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ: ಕೇಂದ್ರ ಸಚಿವ ನಿತಿನ್​ ಗಡ್ಕರಿ

ABOUT THE AUTHOR

...view details