ಕರ್ನಾಟಕ

karnataka

By

Published : Mar 21, 2022, 6:51 PM IST

ETV Bharat / state

ತಾಯ್ನಾಡಿಗೆ ಬಂದ ನವೀನ್ ಮೃತದೇಹ : ಪರಿಷತ್​ನಲ್ಲಿ ಧನ್ಯವಾದ ಸಲ್ಲಿಸಿದ ಬಸವರಾಜ ಹೊರಟ್ಟಿ

ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಇಂದು ಮೃತದೇಹ ತಾಯ್ನಾಡಿಗೆ ಬಂದಿದೆ, ಇದು ಐತಿಹಾಸಿಕ ಏನಿಲ್ಲ. ಆದರೆ, ಬೊಮ್ಮಾಯಿಯವರ ಈ ಕೆಲಸಕ್ಕೆ ಶ್ಲಾಘಿಸುತ್ತೇನೆ. ಯುದ್ಧ ರಾಷ್ಟ್ರದಿಂದ ಮೃತದೇಹ ಬರೋದು ದೊಡ್ಡ ವಿಚಾರ ಎನ್ನುವುದನ್ನು ಒಪ್ಪುತ್ತೇವೆ. ಆದರೆ, ವಿದ್ಯಾರ್ಥಿಗಳು ಅವರ ರಿಸ್ಕ್ ತೆಗೆದುಕೊಂಡೇ ವಾಪಸ್ ಬಂದಿದ್ದಾರೆ ಎಂದರು..

Basavaraja Horatti says thanks in Vidhanaparishat
ಬಸವರಾಜ ಹೊರಟ್ಟಿ

ಬೆಂಗಳೂರು :ನವೀನ್ ಗ್ಯಾನಗೌಡರ ಮೃತದೇಹವನ್ನು ಉಕ್ರೇನಿಂದ ರಾಜ್ಯಕ್ಕೆ ತರಿಸಿಕೊಂಡ ವಿಚಾರ ವಿಧಾನಪರಿಷತ್​ನಲ್ಲಿ ಪ್ರಸ್ತಾಪವಾಯಿತು. ಇಂದು ಮೃತದೇಹ ತರಿಸಿಕೊಳ್ಳುವ ವಿಚಾರದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಸಭಾಪತಿ ಬಸವರಾಜ ಹೊರಟ್ಟಿ ಧನ್ಯವಾದ ಹೇಳಿದರು.

ವಿಧಾನಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ನವೀನ್ ಮೃತದೇಹವನ್ನು ವಾಪಸ್ ತಂದಿರುವ ಬಗ್ಗೆ ಸಭಾನಾಯಕ ಕೋಟ ಶ್ರೀನಿವಾಸ್ ಪೂಜಾರಿ ಪ್ರಸ್ತಾಪಿಸಿದರು. ನವೀನ್ ಪೋಷಕರು ಮೃತದೇಹ ವಾಪಸ್ ತರಿಸಲು ಮನವಿ ಮಾಡಿದ್ದರು. ಅದರಂತೆ ಇಂದು ಬೆಳಗಿನ ಜಾವ ಮೃತದೇಹ ಬಂದಿದೆ. ನವೀನ್ ಮೃತದೇಹ ತರುವಲ್ಲಿ ರಾಜ್ಯ, ಕೇಂದ್ರ ಸರ್ಕಾರ ಸಫಲ ಆಗಿವೆ. ಈಗ ಅವರ ಕುಟುಂಬಕ್ಕೆ ಮೃತದೇಹ ಹಸ್ತಾಂತರ ಮಾಡಲಾಗಿದೆ ಎಂದರು.

ನಂತರ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ನಾವು 3 ದಿನದಲ್ಲಿ ನವೀನ್ ಮೃತ ದೇಹ ಬರುತ್ತದೆ ಅಂತಾ ಹೇಳಿದ್ದೆವು. ಅದರಂತೆ ಇಂದು ಬೆಳಗಿನ ಜಾವ 3 ಗಂಟೆಗೆ ಮೃತ ದೇಹ ಬಂದಿದೆ. ಇದೊಂದು ಐತಿಹಾಸಿಕ ದಿನ ಎಂದು ಹೇಳಬಹುದು.

ಏಕೆಂದರೆ, ಎಷ್ಟೋ ಬಾರಿ ಯುದ್ಧದಲ್ಲಿ ಮೃತ ಪಟ್ಟ ನಮ್ಮ ದೇಶದ ಸೈನಿಕರನ್ನು ತರಲು ಸಾಧ್ಯವಾಗಲ್ಲ. ಆದರೆ, ಮೂರನೇ ದೇಶದ ಯುದ್ದದ ಸಂದರ್ಭದಲ್ಲಿ ಮೃತಪಟ್ಟ ನವೀನ್ ದೇಹವನ್ನು ತಂದಿದ್ದೇವೆ. ಭಾರತ ಸರ್ಕಾರ ಉಕ್ರೇನ್​​ನಲ್ಲಿರುವ ಎಲ್ಲಾ ಭಾರತೀಯರನ್ನು ಕರೆ ತಂದಿದೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.

ಮೋದಿ ಹಾಗೂ ಕೇಂದ್ರ ಸರ್ಕಾರದ ಸತತ ಪ್ರಯತ್ನದಿಂದ ನವೀನ್ ಮೃತದೇಹ ಬಂದಿದೆ. ನವೀನ್ ಕುಟುಂಬಸ್ಥರು ನೋವಿನಲ್ಲೂ ಮೃತ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ನೀಡಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವಾಗಲೆಂದು ಈ ಕೆಲಸ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಆಗಸ್ಟ್ ನಲ್ಲಿ ಕೋವಿಡ್ 4ನೇ ಅಲೆ.. ಆರೋಗ್ಯ ಇಲಾಖೆ ಸನ್ನದ್ಧ ಎಂದ ಸಚಿವ ಸುಧಾಕರ್

ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಇಂದು ಮೃತದೇಹ ತಾಯ್ನಾಡಿಗೆ ಬಂದಿದೆ, ಇದು ಐತಿಹಾಸಿಕ ಏನಿಲ್ಲ. ಆದರೆ, ಬೊಮ್ಮಾಯಿಯವರ ಈ ಕೆಲಸಕ್ಕೆ ಶ್ಲಾಘಿಸುತ್ತೇನೆ. ಯುದ್ಧ ರಾಷ್ಟ್ರದಿಂದ ಮೃತದೇಹ ಬರೋದು ದೊಡ್ಡ ವಿಚಾರ ಎನ್ನುವುದನ್ನು ಒಪ್ಪುತ್ತೇವೆ. ಆದರೆ, ವಿದ್ಯಾರ್ಥಿಗಳು ಅವರ ರಿಸ್ಕ್ ತೆಗೆದುಕೊಂಡೇ ವಾಪಸ್ ಬಂದಿದ್ದಾರೆ.

ನಾನು ಬೆಂಗಳೂರಿನಲ್ಲಿ ಒಬ್ಬ ವಿದ್ಯಾರ್ಥಿ ಭೇಟಿ ಮಾಡಿ ಮಾತುಕತೆ ನಡೆಸಿದ್ದೆ. ಆಗ ಈ ವಿಚಾರಗಳು ಗೊತ್ತಾದವು. ಯುದ್ಧದಲ್ಲಿ ‌ಸತ್ತವರನ್ನ ತರಲು ನೀತಿಯಿದೆ, ವಿದೇಶಾಂಗ ವಿಚಾರ ಮಾತನಾಡೋದು ಸರಿಯಲ್ಲ. ಇಲ್ಲಿ ಅಷ್ಟು ಜನ ಮಕ್ಕಳು ಅಲ್ಲಿಗೆ ಯಾಕೆ ಹೋಗಿದ್ದು?, ಅವರು ಕೈಗೆಟಕುವ ದರದಲ್ಲಿ ಇಲ್ಲೇ ವೈದ್ಯಕೀಯ ಶಿಕ್ಷಣ ಕಲಿಯಲು ಅವಕಾಶ ಇದ್ದಿದ್ದರೆ ಇಲ್ಲೇ ಓದುತ್ತಾ ಇದ್ದರು. ಇನ್ಮುಂದೆಯಾದ್ರೂ ಸರ್ಕಾರ ಈ ಬಗ್ಗೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ಇದೇ ಅಧಿವೇಶನದಲ್ಲಿ ಪರಿಷತ್ ಕಲಾಪದಲ್ಲಿ ನವೀನ್ ಗ್ಯಾನಗೌಡರ ಮೃತದೇಹ ತರಿಸಿಕೊಳ್ಳುವ ವಿಚಾರದಲ್ಲಿ ವಿಸ್ತೃತವಾದ ಚರ್ಚೆ ನಡೆದಿತ್ತು. ಈ ಹಿನ್ನೆಲೆ ಸಭಾಪತಿ ಬಸವರಾಜ ಹೊರಟ್ಟಿ ಅವರು ನವೀನ್ ಮೃತದೇಹ ತರಲು ಶ್ರಮಿಸಿದ ಹಾಗೂ ಇದಕ್ಕಾಗಿ ಸದನದಲ್ಲಿ ಧ್ವನಿ ಎತ್ತಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಎಂದು ಚರ್ಚೆಗೆ ತೆರೆ ಎಳೆದರು.

ABOUT THE AUTHOR

...view details