ಯಲಹಂಕ: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆಯ (ಐಐಎಚ್ಆರ್) ಆವರಣದಲ್ಲಿ ಫೆಬ್ರುವರಿ 8ರಿಂದ 12ರವರೆಗೆ ಭಾರತದ ಅತಿ ದೊಡ್ಡ 'ರಾಷ್ಟ್ರೀಯ ತೋಟಗಾರಿಕಾ ಮೇಳ' ನಡೆಯಲಿದೆ. ಅದರ ಅಂಗವಾಗಿ ಮೇಳದ ಜಾಲತಾಣವನ್ನು ಐಐಹೆಚ್ಆರ್ ನಿರ್ದೇಶಕ ಡಾ.ದಿನೇಶ್ ಲೋಕಾರ್ಪಣೆ ಮಾಡಿದರು.
ಡಾ.ದಿನೇಶ್ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಮೇಳವನ್ನು ಸಾಮಾಜಿಕ ಜಾಲತಾಣ, ಅಂತರ್ಜಾಲದ ಮುಖಾಂತರ ಕನಿಷ್ಠ ಭೌತಿಕ ಸಭೆ ಮತ್ತು ಸಂವಹನ ನಡೆಸಲಾಗುವುದು. ಜಾಲತಾಣದಲ್ಲೇ ದೇಶದ ರೈತರು ಪಾಲ್ಗೊಳುವಂತೆ ಮಾಡಲಾಗುವುದು ಎಂದರು.
ಇದನ್ನೂ ಓದಿ:ಗಗನಯಾನ, ಚಂದ್ರಯಾನ-3 ಮಿಷನ್ ಬಗ್ಗೆ ಇಸ್ರೋ ಅಧ್ಯಕ್ಷರಿಂದ ಮಹತ್ವದ ಮಾಹಿತಿ
ನವೋದ್ಯಮ ಮತ್ತು ತೋಟಗಾರಿಕೆ ಪ್ರೋತ್ಸಾಹಿಸುವುದೇ ಈ ಮೇಳದ ಧ್ಯೇಯ. ಸುಮಾರು 30,000 ರೈತರು ಭೌತಿಕವಾಗಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದ್ದು, ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ದೇಶಾದ್ಯಂತ ಸುಮಾರು 25 ಲಕ್ಷ ರೈತರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.
ರೈತ ಉತ್ಪಾದಕ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವುದು, ತಂತ್ರಜ್ಞಾನಗಳನ್ನು ಉದ್ಯಮಶೀಲತೆಗೆ ಬಳಸಿಕೊಳ್ಳಲು ಪ್ರೇರೇಪಿಸುವುದೇ ಈ ಮೇಳದ ಉದ್ದೇಶ. ಹವ್ಯಾಸಿ ತೋಟಗಾರಿಕೆ ಮತ್ತು ಜಲಕೃಷಿ ಕುರಿತು ನಗರ ಮತ್ತು ಅರೆನಗರ ನಿವಾಸಿಗಳಿಗೆ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ. ಮೇಳದಲ್ಲಿ 211ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುತ್ತದೆ. ಈಗಾಗಲೇ 23 ರಾಜ್ಯಗಳ ರೈತರಿಗೆ ಸೀಡ್ ಪೋರ್ಟಲ್ಗಳ ಮೂಲಕ ಬೀಜಗಳನ್ನು ರೈತರ ಮನೆ ಬಾಗಿಲಿಗೇ ವಿತರಿಸಲಾಗಿದೆ ಎಂದರು.