ಕರ್ನಾಟಕ

karnataka

By ETV Bharat Karnataka Team

Published : Dec 10, 2023, 4:48 PM IST

ETV Bharat / state

ನಮ್ಮ ಜಾತ್ರೆ ಜಾನಪದ ಸಂಭ್ರಮಕ್ಕೆ ಅದ್ಧೂರಿ ಚಾಲನೆ: ಕನ್ನಡದಿಂದಲೇ ಚಿತ್ರರಂಗದಲ್ಲಿದ್ದೇನೆ ಎಂದ ಪೂಜಾ ಗಾಂಧಿ

ನಮ್ಮ ಜಾತ್ರೆ ಜಾನಪದ ಸಂಭ್ರಮ ಕಾರ್ಯಕ್ರಮದ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

namma-jaatre-janapada-sambrama-program-inaugurated
ನಮ್ಮ ಜಾತ್ರೆ ಜಾನಪದ ಸಂಭ್ರಮಕ್ಕೆ ಅದ್ಧೂರಿ ಚಾಲನೆ: ಕನ್ನಡದಿಂದಲೇ ಚಿತ್ರರಂಗದಲ್ಲಿದ್ದೇನೆ ಎಂದ ಪೂಜಾ ಗಾಂಧಿ

ಬೆಂಗಳೂರು:ನಗರ ಜೀವನದ ಒತ್ತಡದಲ್ಲಿ ಜೀವಿಸುತ್ತಿರುವ ಬೆಂಗಳೂರಿಗರಿಗೆ ಕರ್ನಾಟಕದ ವೈವಿಧ್ಯಮಯ ಜಾನಪದ ಕಲೆಗಳನ್ನು ತಲುಪಿಸುವ ಪರಿಚಯಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಯತ್ನಗಳು ಆಗಬೇಕಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಆಯೋಜನೆ ಮಾಡಲಾಗಿದ್ದ 'ನಮ್ಮ ಜಾತ್ರೆ ಜಾನಪದ ಸಂಭ್ರಮ' ಕಾರ್ಯಕ್ರಮವನ್ನು ದೇಸಿದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ನಾಡಿನ ಭಾಷೆ ಮತ್ತು ಸಂಸ್ಕೃತಿ ಎಲ್ಲರನ್ನೂ ಆಕರ್ಷಿಸುವಂತಹದ್ದು. ಆದರೆ ನಾವು ಬೆಂಗಳೂರಿನಲ್ಲಿ ಕನ್ನಡ ಭಾಷಾ ಬಳಕೆಯನ್ನು ಕಡಿಮೆ ಮಾಡಿದ್ದೇವೆ. ಅನ್ಯ ಭಾಷೆಯ ವ್ಯಾಮೋಹ ಬಿಡದಿದ್ದರೆ, ಬೆಂಗಳೂರಿನಲ್ಲಿ ಕನ್ನಡದ ಬೆಳವಣಿಗೆ ಆಗಲಾರದು. ಇಂಗ್ಲಿಷ್ ಜೀವನಕ್ಕೆ ಬೇಕು, ಅದನ್ನು ಕಲಿಯಿರಿ. ಆದರೆ ನಮ್ಮ ದಿನನಿತ್ಯದ ಆಡು ಭಾಷೆಯಾಗಿ ಕನ್ನಡವನ್ನು ಬಳಸಿರಿ. ಅದು ನಮ್ಮ ಭಾವಭಾಷೆ ಎಂದು ಕರೆ ನೀಡಿದರು.

ದೂರದ ಪಂಜಾಬಿನಿಂದ ಬಂದ ನಟಿ ಪೂಜಾ ಗಾಂಧಿ ಕನ್ನಡ ಕಲಿತು, ಮಾತನಾಡುವುದನ್ನು ರೂಢಿಸಿಕೊಂಡಿರುವುದು ಶ್ಲಾಘನೀಯ. ಅವರಂತೆಯೇ ಇತರರೂ ಸಹ ಕನ್ನಡ ಕಲಿತು, ಬಳಸುವಂತಾದರೆ ಕನ್ನಡದ ಏಳಿಗೆ ತನಗೆ ತಾನೆ ಆಗುತ್ತದೆ. ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವರ್ಷಪೂರ್ತಿ ಪ್ರತಿ ತಿಂಗಳು ಇಂತಹ ದೊಡ್ಡ, ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ನಾಲ್ಕು ಕಂದಾಯ ವಿಭಾಗಗಳಲ್ಲಿಯೂ ಮುಂದಿನ ನಾಲ್ಕು ತಿಂಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಆನಂತರ ಬೆಂಗಳೂರಿನಲ್ಲಿ ದೊಡ್ಡಮಟ್ಟದಲ್ಲಿ ಮತ್ತೊಂದು ಸುವರ್ಣ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ನಮ್ಮ ಜಾತ್ರೆ ಜಾನಪದ ಸಂಭ್ರಮ ಕಾರ್ಯಕ್ರಮ

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಟಿ ಪೂಜಾ ಗಾಂಧಿ, 'ಕನ್ನಡವು ಅತ್ಯಂತ ಸುಂದರವಾದ ಭಾಷೆ. ಅದು ನನಗೆ ಬದುಕು ಕೊಟ್ಟಿದೆ. ಕನ್ನಡದಿಂದ ನಾನು ಚಿತ್ರರಂಗದಲ್ಲಿ ಇದ್ದೇನೆ' ಎಂದರು. ತಮ್ಮ ಮಾತಿನಲ್ಲಿ ಬಸವೇಶ್ವರರ ವಚನವನ್ನು ಉಲ್ಲೇಖಿಸಿದ ಅವರು, ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಗೌರವ, ಆದರಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ಜಾತ್ರೆ ಜಾನಪದ ಸಂಭ್ರಮ ಕಾರ್ಯಕ್ರಮ

ಮೆರವಣಿಗೆಗೆ ಸಿಎಂ ಚಾಲನೆ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ 50ರ ಅಂಗವಾಗಿ, ಅನ್ ಬಾಕ್ಸಿಂಗ್ ಬೆಂಗಳೂರು ಇದರ ಭಾಗವಾಗಿ ಆಯೋಜಿಸಿದ್ದ 'ನಮ್ಮ ಜಾತ್ರೆ ಜಾನಪದ ಸಂಭ್ರಮ'ದ ಭವ್ಯ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್​, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ, ನಿರ್ದೇಶಕಿ ಧರಣಿ ದೇವಿ ಮಾಲಗತ್ತಿ, ಚಲನಚಿತ್ರ ನಟ ಸಾಧುಕೋಕಿಲ ಹಾಗೂ ಇತರ ಗಣ್ಯರು ಇದ್ದರು.

ನಮ್ಮ ಜಾತ್ರೆ ಜಾನಪದ ಸಂಭ್ರಮ ಕಾರ್ಯಕ್ರಮ
ನಮ್ಮ ಜಾತ್ರೆ ಜಾನಪದ ಸಂಭ್ರಮ ಕಾರ್ಯಕ್ರಮ

ಇದನ್ನೂ ಓದಿ:ಬಿಜೆಪಿಯವರ ಮನೆಗಳ ಮೇಲೂ ಐಟಿ ದಾಳಿ ನಡೆದರೆ ಬೇನಾಮಿ ಹಣ ಸಿಗಬಹುದು: ಸಿದ್ದರಾಮಯ್ಯ

ABOUT THE AUTHOR

...view details