ಕರ್ನಾಟಕ

karnataka

By

Published : Sep 11, 2022, 2:07 PM IST

Updated : Sep 11, 2022, 6:58 PM IST

ETV Bharat / state

ಮತ್ತೆ ಅಲಯನ್ಸ್ ವಿವಿಗೆ ಅಕ್ರಮವಾಗಿ ನುಗ್ಗಿದ ಮಧುಕರ್ ಅಂಗೂರ್: ಪ್ರಕರಣ ದಾಖಲು

ಸಹೋದರರಿಬ್ಬರ ವಿವಾದದಲ್ಲಿರುವ ಆನೇಕಲ್ ಅಲಯನ್ಸ್ ಯುನಿವರ್ಸಿಟಿಯಲ್ಲಿ ಮತ್ತೆ ನಿನ್ನೆ ಗಲಾಟೆ ನಡೆದಿದೆ.

madhukar-angur-entered-illegally-alliance-university
ಮತ್ತೆ ಅಕ್ರಮವಾಗಿ ಅಲಯನ್ಸ್ ಯುನಿವರ್ಸಿಟಿಗೆ ನುಗ್ಗಿದ ಮಧುಕರ್ ಅಂಗೂರ್ ಪಡೆ

ಬೆಂಗಳೂರು:ಆನೇಕಲ್ ಅಲಯನ್ಸ್ ಯೂನಿವರ್ಸಿಟಿಯ ಸಹೋದರರಿಬ್ಬರ ಗದ್ದುಗೆಗಾಗಿ ಗುದ್ದಾಟ ಮತ್ತೊಮ್ಮೆ ಬೀದಿಗೆ ಬಂದಿದೆ. ಸದ್ಯ ಸುಧೀರ್ ಅಂಗೂರ್ ಸುಪರ್ದಿಯಲ್ಲಿರುವ ಆನೇಕಲ್ ಅಲಯನ್ಸ್​ಗೆ ವಿರೋಧಿ ಬಣದ ಸಹೋದರ ಮಧುಕರ್ ಅಂಗೂರ್ ಅವರು ಶಸ್ತ್ರಾಸ್ತ್ರ ಸಮೇತ ತಮ್ಮ ತಂಡದೊಂದಿಗೆ ಯುನಿವರ್ಸಿಟಿ ಒಳಗೆ ನುಗ್ಗಿದ್ದಾರೆ. ಬನ್ನೇರುಘಟ್ಟ-ಸರ್ಜಾಪುರ ಇನ್​ಸ್ಟೆಕ್ಟರ್ ಮಧುಕರ್ ಅಂಗೂರ್ ಪಡೆಯನ್ನು ವಿವಿಯಿಂದ ಹೊರಕಳುಹಿಸಿದ್ದಾರೆ.

ಚಿತ್ರನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾರಿಂದ ಹೈಡ್ರಾಮ:ತೆಲುಗು-ಕನ್ನಡ ಚಲನಚಿತ್ರ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಮಧುಕರ್ ಅಂಗೂರ್ ಜೊತೆ ಅಲಯನ್ಸ್ ಯುನಿವರ್ಸಿಟಿಗೆ ನುಗ್ಗಿದ್ದಲ್ಲದೆ ಮುಂದಿನ ಚಾನ್ಸಲರ್ ತಾನೇ ಅಂತ ಸಿಬ್ಬಂದಿಗೆ ಗದರಿಸಿದ್ದಾರೆ. ಮಧುಕರ್ ಅಂಗೂರ್ ಯೂನಿವರ್ಸಿಟಿ ಬಿಟ್ಟು ಹೊರಟರೂ ಗಂಟೆಗಳ ಕಾಲ ಒಳಗಿದ್ದು ನಾನೇ ಚಾನ್ಸಲರ್ ಎಂದು ಪಟ್ಟು ಹಿಡಿದು ಕುಳಿತಿದ್ದರು. ಆನೇಕಲ್ ಉಪವಿಭಾಗದ ಪೊಲೀಸರು ದೊಡ್ಡಬಳ್ಳಾಪುರ ಕಾರ್ಯಕ್ರಮದಲ್ಲಿ ಇದ್ದುದರಿಂದ ಸಿಬ್ಬಂದಿ ಕೊರತೆ ಉಂಟಾಗಿತ್ತು. ಇದನ್ನು ಸ್ವರ್ಣಲತಾ ಚಾಕಚಕ್ಯತೆಯಿಂದ ಬಳಸಿಕೊಂಡರು.

ಚಿತ್ರನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾರಿಂದ ಹೈಡ್ರಾಮ

50ಕ್ಕೂ ಮಂದಿ ಮೇಲೆ ಪ್ರಕರಣ ದಾಖಲು:ಅಲಯನ್ಸ್ ಯುನಿವರ್ಸಿಟಿಯೊಳಗೆ ಶಸ್ತ್ರಸಜ್ಜಿತ ತಂಡದೊಂದಿಗೆ ಅಕ್ರಮ ಪ್ರವೇಶ ಪಡೆದ ಮಧುಕರ್, ಸ್ವರ್ಣಲತ, ರವಿಕುಮಾರ್ ಮನ್ನವ್, ಪದ್ಮನಾಭ್, ಮೋಹನ್, ಪೊಣಚ್ಚ ಸೇರಿ ನಾಲ್ಕು ಬಂದೂಕು, ಒಂದು ಪಿಸ್ತೂಲ್ ಹೊಂದಿದ ಐವರು ಮತ್ತು 50 ಮಂದಿ ಬೌನ್ಸರ್​ಗಳ ಮೇಲೆ ವಿವಿ ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ನೀಡಿದ ದೂರಿನನ್ವಯ ಇಂಡಿಯನ್ ಆರ್ಮ್ಸ್ ಆಕ್ಟ್ 1959(25)ರ ಅಡಿ ಪ್ರಕರಣ ದಾಖಲಾಗಿದೆ.

ಯೂನಿವರ್ಸಿಟಿಯ ವಿವಿಧ ವಿಭಾಗಗಳಿಗೆ ದಾಖಲಾತಿಗಾಗಿ ಬಂದ ವಿದ್ಯಾರ್ಥಿಗಳ ಕಣ್ಮುಂದೆ ಒಂದು ಬಸ್, ಒಂದು ಬೆಂಜ್ ಕಾರು, ಬಸ್ಸಿನೊಳಗಿಂದ ಗೇಟ್ ತೆರೆದು ಶಸ್ತ್ರಗಳೊಂದಿಗೆ ಮಧುಕರ್ ಪ್ರವೇಶಿಸಿದ್ದು ವಿದ್ಯಾರ್ಥಿಗಳನ್ನು ದಂಗು ಬಡಿಸಿತ್ತು. ಪ್ರವೇಶವಾದ ಕೂಡಲೇ ಹಳೆಯ ತನ್ನ ಚೇಂಬರ್​ಗೆ ನುಗ್ಗಿ ಇದು ನನ್ನ ಯೂನಿವರ್ಸಿಟಿ ಎಂದು ಗರ್ವದಿಂದ ಪ್ರತ್ಯುತ್ತರ ನೀಡಿದ್ದರು. ಈಗಿರುವ ಶೈಲಾ ಚಬ್ಬಿ, ಸುಧೀರ್ ಅಂಗೂರ್ ಮತ್ತಿತರರಿಗೆ ಇದು ಶಾಕ್ ನೀಡಿತ್ತು.

ಎಸ್​ಪಿ ಮಲ್ಲಿಕಾರ್ಜುನ ಬಾಲದಂಡೆ ಮಾಹಿತಿ

ಕೋರ್ಟ್ ಆದೇಶವಿದೆ ಎಂದು ಸುಳ್ಳು ಹೇಳಿ ಅಕ್ರಮ ಪ್ರವೇಶ:ತನಗೆ ಕೋರ್ಟ್ ಆದೇಶ ನೀಡಿದೆ ಎಂದು ಬರೀ ಬಾಯಿ ಮಾತಿನಲ್ಲಿ ಸಹೋದರ ಸುಧೀರ್ ಅಂಗೂರ್ ತಂಡಕ್ಕೆ ಹಾಗು ಪೊಲೀಸರಿಗೆ ಮಧುಕರ್ ಅಂಗೂರ್ ತಿಳಿಸಿದ್ದಾರೆ. ಆದರೆ ಅವರ ಬಳಿ ಯಾವುದೇ ಆದೇಶ ಇರದ ಕಾರಣ ಪೊಲೀಸರು ಅವರನ್ನು ವಿವಿಯಿಂದ ಹೊರಹಾಕಿದರು.

ಮಧುಕರ್ ಅಂಗೂರ್ ಬೆಂಬಲಿಗರಿಗೆ ನಿರಾಸೆ:ಸುಧೀರ್ ಅಂಗೂರ್ ಪಾರುಪತ್ಯವಿರುವ ಅಲಯನ್ಸ್ ಯೂನಿವರ್ಸಿಟಿ ಒಳಗಡೆಗೆ ಮಧುಕರ್ ಅಂಗೂರ್ ಬಂದ್ರು ಎಂದು ಸುದ್ದಿ ಹಬ್ಬಿತು. ವಿಷಯ ತಿಳಿದ ಕೂಡಲೇ ಮಧುಕರ್​ ಅವರ ಆನೇಕಲ್ ಉತ್ತರದ ತಂಡ ಅಲಯನ್ಸ್ ಯುನಿವರ್ಸಿಟಿ ಹೊರಗೆ ಜಮಾಯಿಸಿತ್ತು. ಮಧ್ಯಾಹ್ನ ಮಧುಕರ್ ತಂಡವನ್ನು ಆನೇಕಲ್ ಪೊಲೀಸರು ಹೊರಹಾಕಿದ್ದೇ ತಡ, ಕೂಡಲೇ ನೆರೆದವರ ಮುಖ ಸೊರಗಿತ್ತು.

ಎಸ್​ಪಿ ಮಲ್ಲಿಕಾರ್ಜುನ ಬಾಲದಂಡೆ ಭೇಟಿ:ದಶಕಗಳ ಅಲಯನ್ಸ್ ಯುನಿವರ್ಸಿಟಿ ವಿವಾದದ ನಡುವೆ ಮಧುಕರ್ ಅಂಗೂರ್ ಅಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ತಡ ರಾತ್ರಿ ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡೆ ಆನೇಕಲ್​ಗೆ ಆಗಮಿಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದರು. 16 ಜನ, 1 ಪಿಸ್ತೂಲ್, 4 ಬಂದೂಕು, 20 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮಧುಕರ್ ಅಂಗೂರ್‌ರನ್ನು ಇಂದು ಸಂಜೆಯೊಳಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ.

ಇದನ್ನೂ ಓದಿ:ಬಡಾವಣೆಗಳ ಎಲ್ಲ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ದಾಖಲಿಸಲು ಬಿಡಿಎಗೆ ಹೈಕೋರ್ಟ್​ ಸೂಚನೆ

Last Updated : Sep 11, 2022, 6:58 PM IST

ABOUT THE AUTHOR

...view details