ಬೆಂಗಳೂರು:ಸಮಾಜದ ಎಲ್ಲ ನಾಗರಿಕರಿಗೂ ತಮಗಿರುವ ಕಾನೂನು ಹಕ್ಕುಗಳು ಹಾಗೂ ಜವಾಬ್ದಾರಿಗಳನ್ನು ತಿಳಿಸಲು ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೂ ಕಾನೂನು ಅರಿವು ಕಾರ್ಯಕ್ರಮ ವಿಸ್ತರಿಸುವ ಉದ್ದೇಶವಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹೇಳಿದ್ದಾರೆ. ರಾಜ್ಯ ಹೈಕೋರ್ಟ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ಬೆಂಗಳೂರು ವಕೀಲರ ಸಂಘದ ಸಹಭಾಗಿತ್ವದಲ್ಲಿ ನಗರದ ಹೈಕೊರ್ಟ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಸೇವಾ ದಿನ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗಗಳಿಗೂ ಕಾನೂನು ಸೇವೆಗಳು ಲಭ್ಯವಾಗುವಂತೆ ಮಾಡುವ ಸಲುವಾಗಿ ಸಂಚಾರಿ ಕಾನೂನು ಪರಿಹಾರ ಕ್ರೇಂದ್ರಗಳನ್ನು ಪ್ರಾರಂಭಿಸಿ ಈ ಭಾಗದ ಜನತೆಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರಸ್ತುತ ನ್ಯಾಯಾಲಯಗಳ ಮೇಲೆ ಇರುವ ಒತ್ತಡ ಕಡಿಮೆ ಮಾಡುವುದಕ್ಕಾಗಿ ಪರ್ಯಾಯ ಮಾರ್ಗಗಳಾದ ಮಧ್ಯಸ್ಥಿಕೆ ಕೇಂದ್ರಗಳಿಗೆ ಒತ್ತು ನೀಡಲಾಗುವುದು. ನಾಗರಿಕ ಸಮಾಜ ಮತ್ತು ಎನ್ಜಿಒಗಳ ಸಹಯೋಗದಲ್ಲಿ ಸುಸ್ಥಿರ ಕಾನೂನು ಅರಿವು ಕಾರ್ಯಕ್ರಮಗಳಿಂದ ಸಾರ್ವಜನಿಕರಿಗೆ ಉಚಿತ ಕಾನೂನು ಲಭ್ಯವಾಗುವುದನ್ನು ತಿಳಿಸಲಾಗುವುದು. ಆ ಮೂಲಕ ಕಾನೂನು ಎನ್ನುವುದು ಒಂದು ಸವಲತ್ತು ಅಲ್ಲ. ಬದಲಿಗೆ ಅದೊಂದು ಎಲ್ಲರ ಹಕ್ಕು ಎಂಬುದು ತಿಳಯುವಂತೆ ಮಾಡಲಾಗುವುದು ಎಂದರು.
ಕಾನೂನು ಕಾಲೇಜುಗಳು ಮತ್ತು ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ಸುಧಾರಣೆ ತರುವ ಸಲುವಾಗಿ ಪ್ರಾಯೋಗಿಕ ಕಾನೂನು ಕೌಶಲ್ಯ ಹೆಚ್ಚಳ ಮಾಡುವುದು ಮತ್ತು ನೈತಿಕ ಮೌಲ್ಯಗಳ ಒಳಗೊಳ್ಳುವಂತೆ ಪಠ್ಯಕ್ರಮ ಜಾರಿ ಮಾಡಲಾಗುವುದು. ನ್ಯಾಯದಾನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸುವುದು ಮತ್ತು ಮತ್ತಷ್ಟು ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕಾಗಿ ತಂತ್ರಜ್ಞಾನದ ನೆರವು ಪಡೆದುಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ವಿವರಿಸಿದರು.