ಬೆಂಗಳೂರು: ನಮಗೆ ಹೊಡೆಯುವವರ ಕೈ ಹಿಡಿದು ತಡೆಯಬಹುದು. ಆದರೆ ಮಾತನಾಡುವವರ ನಾಲಿಗೆ ಹಿಡಿಯಲು ಸಾಧ್ಯವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚ್ಯವಾಗಿ ಜೆಡಿಎಸ್ ಸೇರುತ್ತಿರುವ ಸಿ. ಎಂ. ಇಬ್ರಾಹಿಂಗೆ ತಿರುಗೇಟು ನೀಡಿದರು.
ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತ, ನಾವು ಅವರ ಜತೆ ಸರ್ಕಾರ ಮಾಡಿ, ಅವರ ತಂದೆಯವರನ್ನು ಪ್ರಧಾನಿ ಮಾಡಿ, ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ ನಮ್ಮ ಕೆಲಸವನ್ನು ನಾಟಕ ಎಂದು ಹೇಳುತ್ತಾರೆ. ಇದನ್ನೆಲ್ಲಾ ಜನ ನೋಡಿದ್ದಾರೆ. ನಾಟಕ ಯಾರು ಮಾಡುತ್ತಿದ್ದಾರೆ ಎಂದು ಅವರೇ ಹೇಳುತ್ತಾರೆ ಜೆಡಿಎಸ್ ನಾಯಕರ ವಿರುದ್ಧವೂ ಡಿಕೆಶಿ ಹರಿಹಾಯ್ದರು.
ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ, ಪಕ್ಷ ಬಿಡುತ್ತಿರುವವರು ಒಮ್ಮೆ ಯೋಜಿಸಲಿ. ಅವರಿಗೆ ಇದುವರೆಗೂ ಅವಕಾಶ ಕೊಟ್ಟು ಬೆಳೆಸಿದವರು ಯಾರು ಎಂದು ಆಗ ಅವರಿಗೆ ತಿಳಿಯುತ್ತದೆ. ಕಾಂಗ್ರೆಸ್ ಇಲ್ಲದಿದ್ದರೆ ಇವರನ್ನು ಯಾವ ನಾಯಿಯೂ ಮೂಸುತ್ತಿರಲಿಲ್ಲ ಎಂದು ಕಿಡಿಕಾರಿದರು.