ಬೆಂಗಳೂರು: ಕಳೆದ 5 ವರ್ಷಗಳಿಂದ ಬಾಕಿ ಉಳಿದಿರುವ 1,203 ಪಿಯು ಉಪನ್ಯಾಸಕ ಹುದ್ದೆಗಳ ನೇಮಕಾತಿಯನ್ನು ಸರ್ಕಾರ ಇದೀಗ ಅಂತಿಮಗೊಳಿಸಿಲು ಮುಂದಾಗಿದೆ. ಇದೇ ವೇಳೆ ನೇಮಕಾತಿಯಲ್ಲಿ 98 ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವ ಆರೋಪ ಕೇಳಿ ಬಂದಿದ್ದರೂ, ಶಿಕ್ಷಣ ಸಚಿವರು ಮೌನ ವಹಿಸಿರುವುದು ಹುದ್ದೆ ವಂಚಿತ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
2015ರ ಮೇ 8ರಂದು 1203 ಪಿಯು ಉಪನ್ಯಾಸಕರ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಅರ್ಜಿ ಆಹ್ವಾನಿಸಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆ ನಡೆದಿರಲಿಲ್ಲ. ನಂತರ 2018ರ ನವೆಂಬರ್ ನಲ್ಲಿ ಪರೀಕ್ಷೆ ನಡೆಸಿದ್ದ ಕೆಇಎ ಅಭ್ಯರ್ಥಿಗಳು ಪಡೆದ ಅಂಕಗಳು ಹಾಗೂ ಮೀಸಲು ನಿಗದಿ ಅನುಸಾರ ಅಂತಿಮ ಪಟ್ಟಿ ಸಿದ್ದಪಡಿಸಿ ಪಿಯು ಮಂಡಳಿಗೆ ಸಲ್ಲಿಸಿದೆ. ಪಟ್ಟಿ ಆಧರಿಸಿ ಕೌನ್ಸೆಲಿಂಗ್ ನಡೆಸಿರುವ ಪಿಯು ಮಂಡಳಿ ಇದೀಗ ಅಭ್ಯರ್ಥಿಗಳಿಗೆ ಹುದ್ದೆ ಸೂಚಿಸಿದ್ದು, ನೇಮಕಾತಿ ಆದೇಶದ ಪತ್ರ ನೀಡುವ ಸಿದ್ದತೆಯಲ್ಲಿದೆ. ಹೀಗೆ, ಪಿಯು ಮಂಡಳಿ ನೇಮಕಾತಿ ಆದೇಶ ನೀಡಲು ಮುಂದಾಗಿರುವ ಕ್ರಮ 98 ಅಭ್ಯರ್ಥಿಗಳಿಗೆ ಸಂಕಷ್ಟ ತಂದಿಟ್ಟಿದೆ.
ವಿವಾದವೇನು :ಪಿಯು ಉಪನ್ಯಾಸಕರ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದ ಕೆಇಎ, ಅಭ್ಯರ್ಥಿಗಳು ಪಡೆದ ಅಂಕಗಳು ಹಾಗೂ ಮೀಸಲು ಆಧರಿಸಿ ಪಟ್ಟಿ ಸಿದ್ದಪಡಿಸಿದೆ. ಆದರೆ, ಈ ಪಟ್ಟಿ ಸಿದ್ದಪಡಿಸುವ ಸಂದರ್ಭದಲ್ಲಿ ಮೀಸಲು ನಿಗದಿ ವಿಚಾರದಲ್ಲಿ ಲೋಪ ಎಸಗಿರುವ ಆರೋಪವಿದೆ. ಸಂವಿಧಾನದ ವಿಧಿ 371(ಜೆ)(3) ಅಡಿ ಲಭ್ಯವಿರುವ ಮೀಸಲು ಸವಲತ್ತುಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2013ರಲ್ಲಿ ರೂಪಿಸಿರುವ ನಿಯಮಗಳ ಪ್ರಕಾರ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲು ನಿಗದಿ ಮಾಡಲಾಗಿದೆ.
ಈ ನಿಯಮಗಳ ಪ್ರಕಾರ ಹೈದರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳ ಅಭ್ಯರ್ಥಿಗಳಿಗೆ, ರಾಜ್ಯ ವ್ಯಾಪಿ ಸ್ಥಳೀಯ ವೃಂದದಲ್ಲಿ ಶೇ 75 ರಷ್ಟು ಹಾಗೂ ಮೂಲ ವೃಂದದಲ್ಲಿ ಶೇ 8 ರಷ್ಟು ಹುದ್ದೆಗಳನ್ನು ನೀಡಬೇಕಿತ್ತು. ಆದರೆ, ಈ ಲೆಕ್ಕಾಚಾರದಲ್ಲಿ ಲೋಪ ಎಸಗಿರುವ ಕೆಇಎ ಮೂಲ ವೃಂದದಲ್ಲಿ ಹಾಗೂ ಸ್ಥಳೀಯ ವೃಂದದಲ್ಲಿಯೂ ಹೈ.ಕ ಅಭ್ಯರ್ಥಿಗಳಿಗೆ ಹೆಚ್ಚುವರಿ ಹುದ್ದೆ ನೀಡಿದೆ. ಇದಕ್ಕೆ ಉಹಾದರಣೆ ಎಂಬಂತೆ ಅರ್ಥ ಶಾಸ್ತ್ರ ವಿಭಾಗಕ್ಕೆ ನಡೆದ ಆಯ್ಕೆಯಲ್ಲಿ ಮೂಲ ವೃಂದಕ್ಕೆ ನಿಗದಿಯಾಗಿದ್ದ ಶೇ 25 ರಷ್ಟು ಹುದ್ದೆಗಳಲ್ಲಿಯೂ ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲು ನೀಡಿದೆ(ದಾಖಲೆ ಇದೆ) . ಈ ರೀತಿ ಮೂಲ ವೃಂದಕ್ಕೆ ಸಿಗಬೇಕಿದ್ದ ಹುದ್ದೆಗಳ ಪೈಕಿ ಒಟ್ಟು 98 ಹುದ್ದೆಗಳನ್ನು ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ನೀಡಲಾಗಿದೆ. ಇದರಿಂದಾಗಿ ಅರ್ಹರಿಗೆ ವಂಚನೆಯಾಗಿದೆ ಎಂಬುದು ಅಭ್ಯರ್ಥಿಗಳ ಆರೋಪ.