ಕರ್ನಾಟಕ

karnataka

By

Published : Apr 12, 2023, 7:13 AM IST

Updated : Apr 12, 2023, 9:42 AM IST

ETV Bharat / state

ಶೆಟ್ಟರ್​​​ಗೆ ಹೈಕಮಾಂಡ್ ಬುಲಾವ್.. ಈಶ್ವರಪ್ಪ, ಸವದಿಗೆ ಬಿಎಸ್​ವೈ ಕರೆ

ಚುನಾವಣೆಗೆ ಸ್ಪರ್ಧಿಸುವ ಅಪೇಕ್ಷೆ- ಸುದ್ದಿಗೋಷ್ಟಿ ನಡೆಸಿ ನಿರ್ಧಾರ ಪ್ರಕಟಿಸಿದ ಜಗದೀಶ್ ಶೆಟ್ಟರ್- ಶೆಟ್ಟರ್ ನಿರ್ಧಾರದಿಂದ ಅಸಮಧಾನಗೊಂಡ ಹೈಕಮಾಂಡ್- ತಕ್ಷಣವೇ ದೆಹಲಿಗೆ ಬರುವಂತೆ ಸೂಚನೆ.

Jagadish Shettar
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಈಶ್ವರಪ್ಪ ಹಾಗೂ ಲಕ್ಷ್ಮಣ ಸವದಿ

ಬೆಂಗಳೂರು:ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡುವಂತೆ ನಿರ್ದೇಶನ ನೀಡಿದ್ದರೂ ಚುನಾವಣೆಗೆ ಸ್ಪರ್ಧಿಸುವ ಕುರಿತು ಘೋಷಣೆ ಮಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷದ ಹೈಕಮಾಂಡ್ ಬುಲಾವ್ ನೀಡಿದ್ದು, ವರಿಷ್ಠರ ಭೇಟಿಗೆ ದೆಹಲಿಗೆ ತೆರಳುತ್ತಿದ್ದಾರೆ.

ಹಿರಿಯರಿಗೆ ಟಿಕೆಟ್ ನೀಡದೆ ಹೊಸಬರಿಗೆ ಮುಂದಿನ ತಲೆಮಾರಿನ ನಾಯಕತ್ವಕ್ಕೆ ಟಿಕೆಟ್ ನೀಡುವ ನಿರ್ಧಾರದಿಂದಾಗಿ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುವಂತೆ ರಾಜ್ಯ ಬಿಜೆಪಿ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್ ಈಶ್ವರಪ್ಪಗೆ ಹೈಕಮಾಂಡ್ ಸಂದೇಶ ರವಾನಿಸಿತ್ತು. ಅದರಂತೆ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳುವ ನಿರ್ಧಾರ ಪ್ರಕಟಿಸಿದರು. ಆದರೆ ಜಗದೀಶ್ ಶೆಟ್ಟರ್ ಮಾತ್ರ ಚುನಾವಣೆಗೆ ಸ್ಪರ್ಧಿಸುವ ಅಪೇಕ್ಷೆ ವ್ಯಕ್ತಪಡಿಸಿ ಮಾಧ್ಯಮಗೋಷ್ಟಿ ನಡೆಸಿ ನಿರ್ಧಾರ ಪ್ರಕಟಿಸಿದರು.

ಇಂದು ದೆಹಲಿ ಪಯಣ:ಶೆಟ್ಟರ್ ನಿರ್ಧಾರದಿಂದ ಅಸಮಧಾನಗೊಂಡ ಹೈಕಮಾಂಡ್ ನಾಯಕರು ತಕ್ಷಣವೇ ದೆಹಲಿಗೆ ಬರುವಂತೆ ಶೆಟ್ಟರ್ ಗೆ ಬುಲಾವ್ ನೀಡಿದ್ದಾರೆ. ವರಿಷ್ಠರಿಂದ ಬುಲಾವ್ ಬರುತ್ತಿದ್ದಂತೆ ಶೆಟ್ಟರ್ ಇಂದು ನವದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಸದ್ಯ ಶೆಟ್ಟರ್ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಅದೇ ರೀತಿ ಈಶ್ವರಪ್ಪ ಕ್ಷೇತ್ರಕ್ಕೂ ಟಿಕೆಟ್ ಪ್ರಕಟಿಸಿಲ್ಲ. ಇಬ್ಬರು ನಾಯಕರ ಸಮ್ಮತಿಯ ಮೇಲೆ ಬೇರೆ ಅಭ್ಯರ್ಥಿ ಹೆಸರು ಆಯ್ಕೆ ಮಾಡಲಾಗುತ್ತದೆ. ಈಶ್ವರಪ್ಪ ವಿಚಾರದಲ್ಲಿ ಚರ್ಚೆ ಮುಗಿದಿದೆ. ಶೆಟ್ಟರ್ ವಿಚಾರದಲ್ಲಿ ಮಾತುಕತೆ ಬಾಕಿ ಇದೆ. ಹಾಗಾಗಿ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ.

ಶೆಟ್ಟರ್, ಈಶ್ವರಪ್ಪ, ಸವದಿ ಜತೆ ಬಿಎಸ್​ವೈ ಮಾತುಕತೆ:ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಟಿಕೆಟ್ ವಂಚಿತರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಜತೆ ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಟಿಕೆಟ್ ಕೈ ತಪ್ಪಿದ್ದರೂ ಬೇಸರಗೊಳ್ಳಬೇಡಿ. ಬೇರೆ ಅವಕಾಶಗಳಿವೆ ಎಂದು ಸಲಹೆ ನೀಡಿದರು. ಈಶ್ವರಪ್ಪಗೂ ಕರೆ ಮಾಡಿ ಮಾತುಕತೆ ನಡೆಸಿದರು. ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮೂವರೂ ನಾಯಕರಿಗೆ ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದರು. ಆದರೆ ಶೆಟ್ಟರ್​​ಗೆ ಹೈಕಮಾಂಡ್ ಬುಲಾವ್ ಬಂದ ಹಿನ್ನೆಲೆಯಲ್ಲಿ ಅವರು ದೆಹಲಿಗೆ ತೆರಳಿದ್ಸು, ಈಶ್ವರಪ್ಪ, ಸವದಿ ಯಡಿಯೂರಪ್ಪ ಭೇಟಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಲಕ್ಷ್ಮಣ ಸವದಿ ತೀವ್ರ ಅಸಮಾಧಾನ:ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನಡೆಸಿದ ಎಲ್ಲಾ ಕಸರತ್ತುಗಳು ವಿಫಲವಾಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಬೆಂಬಲಿಗರಾದ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಟಿಕೆಟ್ ಕೈ ತಪ್ಪಿದ್ದಕ್ಕೆ ಲಕ್ಷ್ಮಣ ಸವದಿ ತೀವ್ರ ಅಸಮಾಧಾನಗೊಂಡಿದ್ದಾರೆ.

ಈ ಮೊದಲು ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ದೊರೆಯುವುದು ಅನುಮಾನವೆಂದು ಹೇಳಲಾಗಿತ್ತು. ಅವರ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಹರಡಿತ್ತು. ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಬೆಂಬಲಿಗರಾದ ಮಹೇಶ್ ಕಮಟಳ್ಳಿ ಅವರಿಗೆ ಟಿಕೆಟ್ ನೀಡದಿದ್ದರೆ ತಾವು ಸಹ ಗೋಕಾಕ್​​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿ ಎಚ್ಚರಿಕೆಯ ಸಂದೇಶವನ್ನು ಬಿಜೆಪಿ ಹೈಕಮಾಂಡ್​ಗೆ ರವಾನಿಸಿದ್ದರು.

ಈ ಬಗ್ಗೆ ಸಮಾಲೋಚನೆ ನಡೆಸಿದ ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಲಕ್ಷ್ಮಣ ಸವದಿ ಅವರಿಗೆ ಅಥಣಿಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡದೆ ಕಾಂಗ್ರೆಸ್ ಪಕ್ಷವನ್ನ ತೊರೆದು ಬಂದಿದ್ದ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್​​ ನೀಡಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ತಮಗೆ ಟಿಕೆಟ್ ನೀಡಲೇಬೇಕೆಂದು ಪಟ್ಟು ಹಿಡಿದಿದ್ದ ಮಾಜಿ ಡಿಸಿಎಂ ಸವದಿ ಒಂದೊಮ್ಮೆ ಪಕ್ಷ ಟಿಕೆಟ್ ನೀಡದಿದ್ದರೆ ಕ್ಷೇತ್ರದ ಮತದಾರರ ಅಭಿಪ್ರಾಯವನ್ನಾಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಸವದಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಮುಖಂಡರು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಈ ಬೆಳವಣಿಗೆ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಕ್ಷ್ಮಣ ಸವದಿಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಯತ್ನಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ:ಮೊದಲ ಪಟ್ಟಿಯಲ್ಲಿ ಮಾಜಿ ಸಿಎಂ ಹೆಸರು ಕೈಬಿಟ್ಟ ಹೈಕಮಾಂಡ್ : ಶೆಟ್ಟರ್​ ಇಂದು ದೆಹಲಿಗೆ ಪ್ರಯಾಣ

Last Updated : Apr 12, 2023, 9:42 AM IST

ABOUT THE AUTHOR

...view details