ಕರ್ನಾಟಕ

karnataka

By

Published : Mar 9, 2021, 9:08 PM IST

ETV Bharat / state

ಹೇಮಗಿರಿ ಕೋ-ಆಪರೇಟಿವ್ ಸೊಸೈಟಿ ಅವ್ಯವಹಾರ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಹಣ ಹಿಂದಿರುಗಿಸದ ಸೊಸೈಟಿ ಹಾಗೂ ಅದರ ನಿರ್ದೇಶಕರುಗಳ ವಿರುದ್ಧ 2018ರ ನ.27 ರಂದು ಶಿವಮೊಗ್ಗದ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ, 2019 ಆ.22 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ, 2019ರ ಆ.30 ರಂದು ಚಿತ್ರದುರ್ಗದ ಹಿರಿಯೂರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ.

Hemagiri Co-operative Society Irregularity news
ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಹೇಮಗಿರಿ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಅವ್ಯವಹಾರ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸುವಂತೆ ಹಾಗೂ ಠೇವಣಿದಾರರ ಹಣ ದುರ್ಬಳಕೆ ಮಾಡಿಕೊಂಡಿರುವ ಸೊಸೈಟಿ ನಿರ್ದೇಶಕರ ಆಸ್ತಿ ಜಪ್ತಿಗೆ ಸಕ್ಷಮ ಪ್ರಾಧಿಕಾರ ನೇಮಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 590 ಮಂದಿಗೆ ಸೋಂಕು ದೃಢ; 6 ಮಂದಿ ಬಲಿ

ಈ ಕುರಿತು ಲಕ್ಕಪ್ಪಖಾನ ಗೌಡರ್ ಸೇರಿದಂತೆ 9 ಮಂದಿ ಠೇವಣಿದಾರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕೇಂದ್ರ ಗೃಹ ಇಲಾಖೆ, ರಾಜ್ಯ ಗೃಹ, ಕಂದಾಯ, ಸಹಕಾರ ಇಲಾಖೆ, ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಡಿಜಿಪಿ, ಹೇಮಗಿರಿ ಮಲ್ಟಿಪರ್ಪಸ್ ಕೋ ಆಪರೇಟಿವ್ ಸೊಸೈಟಿ, ಶಿವಮೊಗ್ಗದ ತೀರ್ಥಹಳ್ಳಿ ಹಾಗೂ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಇನ್ಸಪೆಕ್ಟರ್ ಗಳಿಗೆ ನೋಟಿಸ್ ಜಾರಿ ಮಾಡಿತು.

ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ನಡೆಸಿರುವ ತನಿಖಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಹಾಗೆಯೇ, ಈವರೆಗೆ ಸಕ್ಷಮ ಪ್ರಾಧಿಕಾರ ರಚಿಸದಿರುವ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ - 2006 ರಲ್ಲಿ ಸ್ಥಾಪನೆಯಾದ ಹೇಮಗಿರಿ ಕೋ ಆಪರೇಟಿವ್ ಸೊಸೈಟಿಯಲ್ಲಿ 2018 ರವರೆಗೆ ಪಿಗ್ಮಿ, ನಿಶ್ಚಿತ ಠೇವಣಿ, ಖಾಯಂ ಠೇವಣಿ ಸೇರಿದಂತೆ ವಿವಿಧ ರೂಪದಲ್ಲಿ ಹಣ ಹೂಡಿಕೆ ಮಾಡಿದ್ದೇವೆ. ನಮ್ಮಂತೆಯೇ ರಾಜ್ಯದ ಹಲವು ಜಿಲ್ಲೆಗಳ ಸಾವಿರಾರು ಜನ ನೂರಾರು ಕೋಟಿ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ.

ಆದರೆ, ಸೊಸೈಟಿ ಠೇವಣಿದಾರರ ಹಣವನ್ನ ಹಿಂದಿರುಗಿಸಿಲ್ಲ. ಈ ಸಂಬಂಧ ಸೊಸೈಟಿ ಹೊಂದಿರುವ ಬ್ಯಾಂಕುಗಳ ಖಾತೆಗಳ ವಹಿವಾಟಿನ ಕುರಿತು ಮಾಹಿತಿ ಪಡೆದುಕೊಂಡಾಗ ಠೇವಣಿ ಹಿಂದಿರುಗಿಸುವಷ್ಟು ಹಣವಿಲ್ಲ ಎಂಬುದು ತಿಳಿದು ಬಂದಿದೆ. ಹಣ ಹಿಂದಿರುಗಿಸದ ಸೊಸೈಟಿ ಹಾಗೂ ಅದರ ನಿರ್ದೇಶಕರುಗಳು ವಿರುದ್ಧ 2018ರ ನ.27 ರಂದು ಶಿವಮೊಗ್ಗದ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ, 2019 ಆ.22 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ, 2019ರ ಆ.30 ರಂದು ಚಿತ್ರದುರ್ಗದ ಹಿರಿಯೂರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ.

2019ರ ಆ.10 ರಂದು ಕಾಮಾಕ್ಷಿಪಾಳ್ಯ ಠಾಣೆಯಲ್ಲಿನ ಪ್ರಕರಣನ್ನು ಸಿಐಡಿ ಆರ್ಥಿಕ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಆದರೆ, ನಿರೀಕ್ಷಿತ ಪ್ರಗತಿ ಕಂಡು ಬಂದಿಲ್ಲ. ಹೀಗಾಗಿ ಸೊಸೈಟಿ ಅವ್ಯವಹಾರ ಪ್ರಕರಣವನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡ ರಚಿಸಬೇಕು. ಕೆಪಿಐಡಿ ಕಾಯ್ದೆ ಪ್ರಕಾರ ನಿರ್ದೇಶಕರ ಆಸ್ತಿ ಜಪ್ತಿಗೆ ಸಕ್ಷಮ ಪ್ರಾಧಿಕಾರ ರೂಪಿಸಲು ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಸೊಸೈಟಿಯ ಆಸ್ತಿ ವರ್ಗಾವಣೆ ಮಾಡದಂತೆ ಮಧ್ಯಂತರ ತಡೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ABOUT THE AUTHOR

...view details