ಕರ್ನಾಟಕ

karnataka

By ETV Bharat Karnataka Team

Published : Nov 23, 2023, 8:53 PM IST

ETV Bharat / state

ನಾನು ಕೊಟ್ಟ ವರದಿ ನೈಜ ಹಾಗೂ ವೈಜ್ಞಾನಿಕವಾಗಿದೆ, ಸಹಿ ಇಲ್ಲ ಅನ್ನೋದು ಸರಿಯಲ್ಲ: ಹೆಚ್ ಕಾಂತರಾಜು

ನಾನು ಕೊಟ್ಟ ವರದಿ ನೈಜ ಹಾಗೂ ವೈಜ್ಞಾನಿಕವಾಗಿದೆ. ವರದಿ ನೋಡದೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹೆಚ್ ಕಾಂತರಾಜು ಅವರು ಹೇಳಿದ್ದಾರೆ.

ಹೆಚ್ ಕಾಂತರಾಜು
ಹೆಚ್ ಕಾಂತರಾಜು

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹೆಚ್ ಕಾಂತರಾಜು

ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಮೂಲಪ್ರತಿ ಆಯೋಗದ ಕಚೇರಿಯಿಂದ ನಾಪತ್ತೆಯಾಗಿದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ ಎಂದು ವರದಿ ಸಿದ್ಧಪಡಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹೆಚ್ ಕಾಂತರಾಜು ಅವರು ತಿಳಿಸಿದ್ದಾರೆ.

ಗುರುವಾರ ಜಾತಿಗಣತಿ ವಿವಾದದ ಬಗ್ಗೆ ಮಾತನಾಡಿದ ಅವರು, ನಾನು ವರದಿ 2019ರಲ್ಲಿ ಕೊಟ್ಟಿದ್ದು, ನಾನು ಇದ್ದಾಗ ಮೂಲಪ್ರತಿ ಇತ್ತು. ಈಗ ಇಲ್ಲ ಅನ್ನೋದು ನನಗೆ ಗೊತ್ತಿಲ್ಲ. ಈಗ ನಾನು ಹೊರಗೆ ಇರುವುದರಿಂದ ಈ ಬಗ್ಗೆ ಮಾತನಾಡುವುದು‌ ಸರಿಯಲ್ಲ ಎಂದಿದ್ದಾರೆ.

ನಾನು ಕೊಟ್ಟ ವರದಿ ನೈಜ ಹಾಗೂ ವೈಜ್ಞಾನಿಕವಾಗಿದೆ. ವರದಿ ನೋಡದೇ ಅವೈಜ್ಞಾನಿಕ ಅನ್ನೋದು ಸರಿಯಲ್ಲ. ವರದಿಯನ್ನು ಸಂಪೂರ್ಣವಾಗಿ ನೋಡಿ ಪರಿಶೀಲನೆ ನಡೆಸಿದ ಬಳಿಕ ವರದಿ ಸರಿ ಇದೆಯಾ, ಅವೈಜ್ಞಾನಿಕನಾ ಎಂಬ ಬಗ್ಗೆ ಹೇಳಬಹುದು. ಈಗಲೇ ಹೇಳುವುದು ಸರಿಯಲ್ಲ. ವರದಿಗೆ ಕಾರ್ಯದರ್ಶಿಯ ಸಹಿ ಇಲ್ಲ ಅನ್ನೋದೂ ಸರಿಯಲ್ಲ. ಅದರಲ್ಲಿ ಅನೇಕ ಸಂಪುಟಗಳಿವೆ. ಇವುಗಳಲ್ಲಿ ಒಂದು ಸಂಪುಟಕ್ಕೆ ಮಾತ್ರವೇ ಕಾರ್ಯದರ್ಶಿ ಸಹಿ ಹಾಕಿಲ್ಲ. ಸರ್ಕಾರಕ್ಕೆ ಸಲ್ಲಿಸಬಹುದೆಂದು ಅಂದು ಆಯೋಗವೂ ನಿರ್ಣಯ ತೆಗೆದುಕೊಂಡಿತ್ತು. ಆ ನಿರ್ಣಯದಲ್ಲಿ ಕಾರ್ಯದರ್ಶಿಯವರೂ ಭಾಗವಹಿಸಿದ್ದರು ಎಂದು ಕಾಂತರಾಜು ಸ್ಪಷ್ಟಪಡಿಸಿದರು.

ಸಮೀಕ್ಷೆ ವೇಳೆ 40 ದಿನಗಳ ಕಾಲ ಮನೆಮನೆಗೆ ಹೋಗಿ ಪ್ರತಿಯೊಬ್ಬರ ಜಾತಿ, ಲಿಂಗ, ಧರ್ಮ, ಆಸ್ತಿ-ಪಾಸ್ತಿಗೆ ಸೇರಿದ ವಿವರಗಳೊಂದಿಗೆ 55 ಬಗೆಯ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಗಿದೆ. ನಂತರ ಕೂಲಂಕಷವಾಗಿ ಅಂಕಿ -ಅಂಶಗಳ ಸಮೇತ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ವರದಿಗೆ ಒಕ್ಕಲಿಗರು-ಲಿಂಗಾಯತರು ವಿರೋಧ ಮಾಡಬಹುದು‌. ಆದರೆ, ಅವರು ಮೊದಲು ವರದಿ ನೋಡಬೇಕು. ಆಮೇಲೆ ಬೇಕಾದರೆ ಅದು ಸರಿಯಿಲ್ಲ ಎಂದು ವಿರೋಧ ಮಾಡಲಿ. ವರದಿ ಈಗ ಸರ್ಕಾರದ ಆಸ್ತಿ. ಸರ್ಕಾರ ವರದಿ ನೋಡಿದ ಬಳಿಕ ಮುಂದಿನ ತೀರ್ಮಾನ ಮಾಡಲಿ. ವರದಿ ನೋಡಿದ ನಂತರ ಅದರಲ್ಲಿ ತಪ್ಪು ಇದೆ ಎಂದರೆ ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು.

ಜಾತಿ ಗಣತಿ ವರದಿ ಇನ್ನೂ ಬಿಡುಗಡೆ ಆಗಿಲ್ಲ: ಜಾತಿ ಗಣತಿ ವರದಿ ಇನ್ನೂ ಬಿಡುಗಡೆಯೇ ಆಗಿಲ್ಲ. ಆದರೆ ವರದಿ ಕುರಿತು ವಿನಾಕಾರಣ ಚರ್ಚೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಗೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.

ಜಾತಿ ಗಣತಿ ವರದಿಯಿಂದಾಗಿ ಸಿದ್ದರಾಮಯ್ಯ ಅವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರ ಆರೋಪ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ಸಿಎಂ ಗರಂ ಆದರು. 'ಮಾಜಿ ಸಿಎಂ ಕುಮಾರಸ್ವಾಮಿ ಅವರು ಜಾತಿ ಗಣತಿ ವರದಿ ಬಗ್ಗೆ ಅಧ್ಯಯನ ಮಾಡಿದ್ದಾರೆಯೇ, ಅವರಿಗೆ ಜಾತಿ ಗಣತಿ ವರದಿ ಬಗ್ಗೆ ಏನಾದರೂ ಗೊತ್ತಿದೆಯಾ?' ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಜಾತಿ ಗಣತಿ ವರದಿ ಇನ್ನೂ ಬಿಡುಗಡೆ ಆಗಿಲ್ಲ, ಅದರ ಚರ್ಚೆ ಅಗತ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details