ಬೆಂಗಳೂರು:ಈ ಹಿಂದೆ ತಮಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದ ಚಿತ್ರದುರ್ಗ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಇದೀಗ ಬದಲಾವಣೆ ವಿಚಾರದ ಬಗ್ಗೆ ಮಾತನಾಡಲ್ಲ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾವೆಲ್ಲರೂ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಸಕರ ಭವನದಲ್ಲಿ ಮಾತನಾಡಿದ ಅವರು, ನಾನು 1994ರಿಂದ ನಿರಂತರವಾಗಿ ಶಾಸಕನಾಗಿದ್ದೇನೆ. ಪಕ್ಷದ ಗೊಂದಲ ನೋಡಿ ನೋವಾಗುತ್ತಿದೆ. ಮುಂದಿನ ಬಾರಿ ಅಧಿಕಾರಕ್ಕೆ ಬರಬೇಕೆಂದರೆ ಈ ಗೊಂದಲ ನಿವಾರಣೆ ಆಗಬೇಕು. ಪಕ್ಷದ ಆದೇಶವನ್ನು ಯಡಿಯೂರಪ್ಪ ಕೇಳಬೇಕು, ಮೋದಿ ಕೂಡ ಕೇಳಬೇಕು. ಮಾಧ್ಯಮದ ಮುಂದೆ ಹೇಳಿಕೆ ನೀಡುವುದಿಲ್ಲ. ಅರುಣ್ ಸಿಂಗ್ ಮುಂದೆ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದರು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಪ್ರತಿಕ್ರಿಯೆ ಅರುಣ್ ಸಿಂಗ್ ಮುಂದೆ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ:
ನಾನು ಪಕ್ಷದ ವ್ಯವಸ್ಥೆಯಲ್ಲಿರುವವನು. ಪಕ್ಷದ ವಿರೋಧವಾಗಿ ಯಾರೂ ಮಾತನಾಡುವುದಿಲ್ಲ. ಸಚಿವ ಸ್ಥಾನದ ವಿಚಾರದಲ್ಲಿ ನನಗೆ ಅಸಮಾಧಾನವಿರುವುದು ನಿಜ. ನಾನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮುಂದೆ ನನ್ನ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತೇನೆ. ಆದರೆ, ಪಕ್ಷದ ನಿಲುವಿಗೆ, ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ನಾಯಕನ ಪರವೋ ಪಕ್ಷದ ಪರವೋ ಅನ್ನೋ ಮಾತು ಬಂದ್ರೆ ನಾವೆಲ್ಲರು ಪಕ್ಷದ ಪರವಾಗಿರುತ್ತೇವೆ ಎಂದರು.
ನನ್ನ ಅಭಿಪ್ರಾಯವನ್ನು ನಮ್ಮ ವರಿಷ್ಠರಾದ ಅರುಣ್ ಸಿಂಗ್ ಮುಂದೆ ತಿಳಿಸುತ್ತೇನೆ. ನನ್ನ ಅನುಭವ ಹಾಗೂ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಬಿಎಸ್ವೈ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಅಂತಾ ಕೆಲವು ಮಾಧ್ಯಮಗಳಲ್ಲಿ ಬರ್ತಿದೆ. ಆ ರೀತಿ ನನಗೇನು ಅನುಭವವಾಗಿಲ್ಲ ಎಂದು ತಿಪ್ಪಾರೆಡ್ಡಿ ಹೇಳಿದ್ರು.
ಇದನ್ನೂ ಓದಿ:ನಾಯಿ ಮರಿ ತಿಂದು ತೃಪ್ತಿಯಾಗದೇ ತಾಯಿ ಹೊತ್ತೊಯ್ದ ಚಿರತೆ..!
ವಲಸಿಗರಿಂದ ಪಕ್ಷಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಅವರಿಂದಲೇ ನಾವು ಸರ್ಕಾರ ರಚನೆ ಮಾಡಿರುವುದು. ಅವರಿಂದ ಪಕ್ಷಕ್ಕೆ ಧಕ್ಕೆಯಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅವರೆಲ್ಲರೂ ಕ್ಷೇತ್ರದ ಅಭಿವೃದ್ಧಿ ಕೆಲಸ ಸಂಬಂಧ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದರು.