ಕರ್ನಾಟಕ

karnataka

ETV Bharat / state

ರಾಜ್ಯ ಪೊಲೀಸ್ ಸಿಬ್ಬಂದಿಗೆ ವೀಕ್ಯಾಪ್ ನೀಡುವಂತೆ ಒತ್ತಾಯ: ಸಿ ಎನ್ ಮಂಜೇಗೌಡ

ರಾಜ್ಯದಲ್ಲಿ ಆಗುತ್ತಿರುವ ದಾಳಿಯಿಂದ ಕಾನ್​ಸ್ಟೇಬಲ್​ಗಳು ಹಾಗೂ ಮುಖ್ಯ ಕಾನ್​ಸ್ಟೇಬಲ್​ಗಳ ಮೇಲೆ ದಾಳಿ ತಪ್ಪಿಸಲು ವೀಕ್ಯಾಪ್​ ನೀಡಬೇಕು ಎಂದು ಜೆಡಿಎಸ್ ಸದಸ್ಯ ಸಿ ಎನ್ ಮಂಜೇಗೌಡ ಒತ್ತಾಯಿಸಿದರು.

By

Published : Feb 13, 2023, 1:48 PM IST

Vidhan Parishad JDS Member CN Manje Gowda
ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಸಿ ಎನ್ ಮಂಜೇಗೌಡ

ಪೊಲೀಸರ ಪರವಾಗಿ ನನ್ನ ಹೋರಾಟ ನಿರಂತರವಾಗಿರಲಿದೆ: ಸಿ ಎನ್​ ಮಂಜೇಗೌಡ

ಬೆಂಗಳೂರು :ರಾಜ್ಯದ ಪೊಲೀಸ್ ಸಿಬ್ಬಂದಿಗೆ ವೀಕ್ಯಾಪ್ ನೀಡಬೇಕು ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಸಿಎನ್ ಮಂಜೇಗೌಡ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಫೆಬ್ರುವರಿ 17ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆ ಆಗಲಿದ್ದು, ಆ ಸಂದರ್ಭ ಪೊಲೀಸ್ ಸಿಬ್ಬಂದಿಗೆ ವೀಕ್ಯಾಪ್ ವಿತರಿಸುವ ಬಗ್ಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕಾನ್​ಸ್ಟೇಬಲ್​ಗಳು ಹಾಗೂ ಮುಖ್ಯ ಕಾನ್​ಸ್ಟೇಬಲ್​ಗಳಿಗೆ ಈ ವೀಕ್ಯಾಪ್​ಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.

ಸದ್ಯ ಪೊಲೀಸರು ಧರಿಸುತ್ತಿರುವ ಕ್ಯಾಪ್​ಗಳು ತುಂಬಾ ಹಳೆಯದಾಗಿವೆ. ಇತರೆ ರಾಜ್ಯಗಳಲ್ಲಿಯೂ ಇಂದು ಹಗುರಾದ ವಿಕ್ಯಾಪ್​ಗಳನ್ನು ನೀಡುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ. ಕರ್ನಾಟಕದಲ್ಲಿ ಈ ಕಾರ್ಯ ಆಗಬೇಕು ಎಂದು ಒತ್ತಾಯಿಸಿದರು. ರಾಜ್ಯದ ಹಲವೆಡೆ ಪೊಲೀಸರ ಮೇಲೆ ದಾಳಿಗಳು ಆಗುತ್ತಿವೆ. ವೀಕ್ಯಾಪ್ ನೀಡುವುದರಿಂದ ಇವರಿಗೆ ಪ್ರತ್ಯೇಕ ಗುರುತು ಲಭಿಸುತ್ತದೆ. ಈ ನೀಡಿಕೆಯು ಸರ್ಕಾರಕ್ಕೆ ಅಷ್ಟೇ ದೊಡ್ಡ ಹೊರೆ ಆಗುವುದಿಲ್ಲ ಎಂದರು.

ಸಂಚಾರ ನಿಯಮ ಉಲ್ಲಂಘಿಸಿದವರಿಂದ ರಾಜ್ಯ ಸರ್ಕಾರಕ್ಕೆ 10,300 ಕೋಟಿ ರೂಪಾಯಿ ದಂಡಪಾವತಿ ಆಗಬೇಕಿರುವುದು ಬಾಕಿ ಉಳಿದಿದೆ. ಶೇಕಡ 50 ರಷ್ಟು ರಿಯಾಯಿತಿ ನೀಡಿದ ಹಿನ್ನೆಲೆ ಸುಮಾರು ನೂರು ಕೋಟಿ ಮೊತ್ತದ ದಂಡ ವಸೂಲು ಆಗಿದೆ. ಎಲ್ಲಾ ದಂಡ ವಸೂಲಿ ಆಗಬೇಕು ಎಂದರೆ ಈ ಕೊಡುಗೆಯನ್ನು ಇನ್ನು ಎರಡು ಮೂರು ತಿಂಗಳು ಮುಂದುವರಿಸಬೇಕು. ಸರ್ಕಾರಕ್ಕೆ ಬರಬೇಕಾದ ಮೊತ್ತವು ಬರುತ್ತದೆ ಹಾಗೂ ಆ ಮೊತ್ತವನ್ನು ಸರ್ಕಾರ ಪೊಲೀಸರ ಅನುಕೂಲಕ್ಕೆ ಬಳಸಬೇಕು. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಸಹ ತಪ್ಪುತ್ತದೆ ಎಂದು ತಿಳಿಸಿದರು.

ಪೊಲೀಸರ ಮಕ್ಕಳಿಗೆ ಶೇಕಡ ಐದರಷ್ಟು ಮೀಸಲಾತಿ :ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಪೊಲೀಸರ ಮಕ್ಕಳಿಗೆ ಶೇಕಡ ಐದರಷ್ಟು ಮೀಸಲಾತಿಯನ್ನು ಕೊಡಬೇಕು. ಇದರಿಂದ ತಮ್ಮ ಮಕ್ಕಳಿಗೆ ಪೊಲೀಸರು ಸಹ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಪೊಲೀಸರ ಪರವಾಗಿ ನನ್ನ ಹೋರಾಟ ನಿರಂತರವಾಗಿರಲಿದೆ. ಪೊಲೀಸ್ ಸಿಬ್ಬಂದಿಗೆ ವೀಕ್ಯಾಬ್ ನೀಡಬೇಕು ಎಂಬ ವಿಚಾರವಾಗಿ ನಡೆಸುತ್ತಿರುವ ಹೋರಾಟ ಮುಂದುವರಿಸುತ್ತೇನೆ. ಮತ್ತು ಈಗಾಗಲೇ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಮುಖ್ಯಮಂತ್ರಿಗಳಿಗೂ ಇದೇ ವಿಚಾರವಾಗಿ ಮನವಿ ಮಾಡಲಿದ್ದು, ಪಕ್ಷದ ವರಿಷ್ಠರ ಸಲಹೆ ಪಡೆದು ಮುಂಬರುವ ದಿನಗಳಲ್ಲಿ ಕೇಂದ್ರ ಗೃಹ ಸಚಿವರನ್ನು ಸಹ ಭೇಟಿಯಾಗಿ ಮನವಿ ಸಲ್ಲಿಸುತ್ತೇನೆ ಎಂದು ಹೇಳಿದರು.

ಜೆಡಿಎಸ್ ನಲ್ಲಿ ಒಡಕಿಲ್ಲ :ಇನ್ನು, ಇದೇ ವೇಳೆ ತಮ್ಮ ಪಕ್ಷದ ಬಗ್ಗೆ ಮಾತಮಾಡಿದ ಮಂಜೇಗೌಡ ಅವರು,ರಾಜ್ಯ ಜೆಡಿಎಸ್ ನಲ್ಲಿ ಒಡಕಿದೆ ಎನ್ನುವ ಅಪವಾದ ಸುಳ್ಳು. ನಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಪಕ್ಷದ ಜೊತೆ ನಿಲ್ಲುತ್ತೇವೆ. ಕೆಲವರು ಅಪಸ್ವರ ತೆಗೆದಿರಬಹುದು ಆದರೆ ಹೆಚ್ಚಿನ ನಾಯಕರು ರಾಜ್ಯ ಜೆಡಿಎಸ್ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ಯಾರು ಪಕ್ಷವನ್ನು ಬಿಡುವ ಸಾಧ್ಯತೆ ಇಲ್ಲ. ಪಕ್ಷವನ್ನು ಮುಂದೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸುತ್ತೇವೆ ಎಂದರು.

ಅಂಗರಕ್ಷಕರಿಗಾಗಿ ಮನವಿ :ಚಾಮರಾಜನಗರ ಹಾಗೂ ಮೈಸೂರು ಭಾಗದ ಜೆಡಿಎಸ್ ಜನಪ್ರತಿನಿಧಿಯಾಗಿರುವ ತಾವು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಅರಣ್ಯ ಪ್ರದೇಶದಲ್ಲಿ ಓಡಾಡುವ ಅನಿವಾರ್ಯತೆ ಹೊಂದಿದ್ದು ತಮಗೆ ಒಬ್ಬ ಅಂಗರಕ್ಷಕರನ್ನು ನೀಡುವಂತೆ ಗೃಹ ಸಚಿವರಿಗೆ ಮನವಿ ಮಾಡುವುದಾಗಿ ಸಿಎನ್ ಮಂಜುನಾಥ್ ತಿಳಿಸಿದ್ದಾರೆ.

ನಿರಂತರವಾಗಿ ತಾವು ಗುಡ್ಡಗಾಡು ಪ್ರದೇಶಗಳ ಹಾಗೂ ಅರಣ್ಯ ಪ್ರದೇಶಗಳಲ್ಲಿ ಸಾಗಿ ಹೋಗುವ ಅನಿವಾರ್ಯತೆ ಹೆಚ್ಚಿದೆ. ಉಭಯ ಜಿಲ್ಲೆಯಲ್ಲೂ ನಕ್ಸಲರ ಚಟುವಟಿಕೆ ಇರುವ ಹಿನ್ನೆಲೆ ತಮ್ಮ ಭದ್ರತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈಗಾಗಲೇ ಈ ಭಾಗದಲ್ಲಿ ಸಾಕಷ್ಟು ಅಹಿತಕರ ಘಟನೆ ನಡೆಯುತ್ತಿದ್ದು, ತಮ್ಮ ಭದ್ರತೆಗೆ ಕನಿಷ್ಠ ಇಬ್ಬರು ಅಂಗರಕ್ಷಕರ ಅವಶ್ಯಕತೆ ಇದೆ. ಆದಷ್ಟು ತ್ವರಿತವಾಗಿ ಸರ್ಕಾರ ತಮಗೆ ಈ ಸವಲತ್ತು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ಭಾರತ ವಿಶ್ವ ಗುರುವಾಗಲು ಕರ್ನಾಟಕದಿಂದ ದೊಡ್ಡ ಕೊಡುಗೆ: ಸಿಎಂ ಬಸವರಾಜ ಬೊಮ್ಮಾಯಿ

ABOUT THE AUTHOR

...view details