ಬೆಂಗಳೂರು:ದಕ್ಷಿಣ ಭಾರತ ಸೇರಿದಂತೆ ಪಶ್ಚಿಮ ಬಂಗಾಳ, ಒಡಿಶಾ, ಅಸ್ಸೋಂ ಭಾಗದಲ್ಲಿ ‘ಫಣಿ’ ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ಪರಿಣಾಮ ಬೆಂಗಳೂರು ಸೇರಿದಂತೆ ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ತಾತ್ಕಾಲಿಕವಾಗಿ ಮೇ 06 ರವರೆಗೂ ರಾಜ್ಯದಿಂದ ಹೊರಡುವ ರೈಲುಗಳ ಸಂಚಾರ ರದ್ದಾಗಿದೆ. ಒಡಿಶಾ ಮಾರ್ಗವಾಗಿ ರೈಲು ಸಂಚಾರ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಸಿಕ್ಕಿದೆ.
ಒಡಿಶಾ, ಪಶ್ಚಿಮ ಬಂಗಾಳ ಮತ್ತು ಅಸ್ಸೋಂಗೆ ಹೊರಡುವ ವಿವಿಧ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ವಲಯದಲ್ಲಿ ನಿನ್ನೆ ರಾತ್ರಿಯಿಂದ 10 ರೈಲುಗಳ ಸಂಚಾರ ರದ್ದಾಗಿದೆ. ಚಂಡಮಾರುತದ ಪ್ರಭಾವದಿಂದ ಉಂಟಾಗಬಹುದಾದ ಅಪಾಯದ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನಿಂದ ಹೊರಟು ಮೈಸೂರು, ಪುರಿ, ಭುವನೇಶ್ವರ್ ಮಾರ್ಗವಾಗಿ ಒಡಿಶಾಗೆ ಪ್ರಯಾಣ ಬೆಳೆಸಬೇಕಾಗಿದ್ದ ರೈಲುಗಳ ಸಂಚಾರವೂ ರದ್ದಾಗಿದೆ. ಅಲ್ಲದೆ ಪುರಿ ಮತ್ತು ಭುವನೇಶ್ವರ್, ಪಶ್ಚಿಮ ಬಂಗಾಳದ ಹೌರಾ ಮತ್ತು ಅಸ್ಸೋಂನ ಗುವಾಹತಿ ಕಡೆಗೆ ಹೊರಡುವ ರೈಲುಗಳ ಸಂಚಾರ ಸ್ಥಗಿತವಾಗಿದೆ.
ಪ್ರಮುಖವಾಗಿ ಯಶವಂತಪುರ – ಹೌರಾ ಮಾರ್ಗದ 12246, 2888, 12864 ರೈಲು, ಸಂಗೊಳ್ಳಿ ರಾಯಣ್ಣ ನಿಲ್ದಾಣ – ಭುವನೇಶ್ವರ ಮಾರ್ಗದ 18464 ರೈಲು, ಗೋವಾ – ಹೌರಾ ಮಾರ್ಗದ 18048 ಹಾಗೂ ಹೌರ – ಭುವನೇಶ್ವರ – ಬೆಂಗಳೂರು – ಮೈಸೂರು – ಗೋವಾ ಮಾರ್ಗದ ರೈಲು ಸಂಚಾರ ರದ್ದಾಗಿದೆ.
ಫಣಿ ಚಂಡಮಾರುತದಿಂದ ಉಂಟಾಗಬಹುದಾದ ಪರಿಣಾಮಗಳನ್ನು ನೋಡಿಕೊಂಡು ಮತ್ತೆ ಸಂಚಾರ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಒಂದೊಮ್ಮೆ ಫಣಿ ಚಂಡಮಾರುತ ಪ್ರಭಾವದಿಂದ ಹೆಚ್ಚಿನ ಹಾನಿ ಸಂಭವಿಸಿದರೆ ಸಂಚಾರ ಆರಂಭವಾಗುವುದು ಮತ್ತಷ್ಟು ವಿಳಂಬ ಆಗಲಿದೆ.