ಕರ್ನಾಟಕ

karnataka

ಸಮಾಜ ಕಲ್ಯಾಣ ಸಚಿವರ ಹೆಸರಿನಲ್ಲಿ ನಕಲಿ ಸಹಿ,‌ ಲೆಟರ್‌ಹೆಡ್ ಫೋರ್ಜರಿ ಆರೋಪ: ಓರ್ವ ಸೆರೆ

By ETV Bharat Karnataka Team

Published : Oct 11, 2023, 9:32 PM IST

ಸಮಾಜ ಕಲ್ಯಾಣ ಇಲಾಖೆ ಸಚಿವರ ಹೆಸರಿನಲ್ಲಿ ನಕಲಿ ಸಹಿ,‌ ಲೆಟರ್‌ಹೆಡ್ ದುರ್ಬಳಕೆ ಮಾಡಿದ ಆರೋಪದಡಿ ಮೈಸೂರು ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಚಿವರ ಹೆಸರಿನಲ್ಲಿ ನಕಲಿ ಸಹಿ
ಸಮಾಜ ಕಲ್ಯಾಣ ಇಲಾಖೆ ಸಚಿವರ ಹೆಸರಿನಲ್ಲಿ ನಕಲಿ ಸಹಿ

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೆಸರಿನಲ್ಲಿ ನಕಲಿ ಸಹಿ ಹಾಗೂ ಲೆಟರ್‌ಹೆಡ್ ಸೃಷ್ಟಿಸಿ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಸಾಲ ಸೌಲಭ್ಯಗಳ ಕುರಿತಂತೆ ಶಿಫಾರಸು ಮಾಡಿ ದುರ್ಬಳಕೆ ಮಾಡಿದ ಆರೋಪದಡಿ ವಿಧಾನಸೌಧ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಚಿವರ ಕಚೇರಿಯ ಆಪ್ತ ಕಾರ್ಯದರ್ಶಿ ಸಿ.ಎಂ.ರಾಜೇಂದ್ರ ಎಂಬವರು ನೀಡಿದ ದೂರಿನ ಮೇರೆಗೆ ಮೈಸೂರು ಮೂಲದ ಮಹದೇವ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಯು ಸಚಿವರ ನಕಲಿ ಸಹಿ ಹಾಗೂ ಲೆಟರ್‌ಹೆಡ್ ಸೃಷ್ಟಿಸಿ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ಹಾಗೂ ಭೋವಿ ಅಭಿವೃದ್ಧಿ ನಿಗಮಗಳ ವ್ಯವಸ್ಥಾಪಕರುಗಳಿಗೆ ಸಚಿವರ ಶಿಫಾರಸ್‌ ಇರುವ ಪತ್ರ ತಯಾರಿಸಿದ್ದನು.

ಇದೇ ನಕಲಿ ಪತ್ರಗಳನ್ನು ಸಚಿವರ ಆಪ್ತ ಕಚೇರಿಗೆ ತಂದು ಇದರ ಮೂಲ ಪ್ರತಿಗಳು ಕಾಣೆಯಾಗಿದ್ದು, ಮತ್ತೊಂದು ನೀಡುವಂತೆ ಕೇಳಿಕೊಂಡಿದ್ದನು. ಇದನ್ನು ಪರಿಶೀಲಿಸಿದ ರಾಜೇಂದ್ರ ಪತ್ರದಲ್ಲಿ ಸಚಿವರ ಹೆಸರನ್ನು ಫೋರ್ಜರಿ ಮಾಡಿರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ನಕಲಿ ಪತ್ರ ತಂದುಕೊಟ್ಟಿದ್ದ ಮಹದೇವನನ್ನು ಬಂಧಿಸಲಾಗಿದೆ. ಆದಿ ಜಾಂಬವ ಅಭಿವೃದ್ಧಿ ಹಾಗೂ ಬೋವಿ ನಿಗಮಗಳ ವ್ಯವಸ್ಥಾಪಕ ನಿರ್ದೇಕರುಗಳಿಗೆ ಬರೆದಿದ್ದ ಪತ್ರಗಳಲ್ಲಿ ಸಮುದಾಯದ ಸುಮಾರು 15-20 ಮಂದಿ ಫಲಾನುಭವಿಗಳಿಗೆ ಸಾಲ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಶಿಫಾರಸು ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬೆದರಿಕೆ ಆರೋಪ; ಶಾಸಕ ಜೆ.ಟಿ.ಪಾಟೀಲ್ ಆಪ್ತ ಕಾರ್ಯದರ್ಶಿ ವಿರುದ್ಧ ದೂರು:ವರ್ಗಾವಣೆಗಾಗಿ ಬೆದರಿಕೆ ಹಾಕಿದ ಆರೋಪದಡಿ ಶಾಸಕ ಜೆ.ಟಿ.ಪಾಟೀಲ್ ಅವರ ಆಪ್ತ ಸಹಾಯಕ ಪ್ರಕಾಶ್ ಬೀಳಗಿ ಎಂಬವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎನ್​ಸಿಆರ್ ದಾಖಲಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಪ್ತ ಕಾರ್ಯದರ್ಶಿ ಹಾಗೂ ಸರ್ಕಾರದ ಅಪರ ಕಾರ್ಯದರ್ಶಿಯ ಕೆ.ಎ.ಹಿದಾಯತ್ತುಲ್ಲಾ ದೂರು ನೀಡಿದ್ದು, ಆರೋಪದ ಕುರಿತಂತೆ ಅಗತ್ಯ ದಾಖಲೆಗಳು, ವಾಟ್ಸ್‌ಆ್ಯಪ್ ಸಂದೇಶಗಳನ್ನು ದೂರಿನೊಂದಿಗೆ ಲಗತ್ತಿಸಿದ್ದಾರೆ.

ಬೀಳಗಿ ಕ್ಷೇತ್ರದ ಶಾಸಕ ಜೆ.ಟಿ.ಪಾಟೀಲ್ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ ಬೀಳಗಿ ಅವರು ಬೇರೆ ಬೇರೆ ಇಲಾಖೆಯ ಸಚಿವರ ಪತ್ರಗಳನ್ನು ನೀಡಿ ವರ್ಗಾವಣೆಗೆ ಪಟ್ಟು ಹಿಡಿದಿದ್ದರು. ಪಾಟೀಲ್ ಅವರಿಗೆ ಸಂಬಂಧವೇ ಇಲ್ಲದ ಕೆಲಸಗಳನ್ನು ಮಾಡಿಕೊಡುವಂತೆ ಒತ್ತಡ ಹೇರುತ್ತಿದ್ದರು. ಅವರ ಕುತಂತ್ರಗಳಿಗೆ ಬಗ್ಗದಿದ್ದಾಗ, ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವ ಬೆದರಿಕೆ ಹಾಕಿರುವುದಲ್ಲದೆ, ನಾನು ಕಚೇರಿಯಲ್ಲಿ ಇಲ್ಲದಿರುವಾಗ, ನಮ್ಮ ಕಚೇರಿಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ, ಹೆದರಿಸುವ ಯತ್ನ ನಡೆಸಿದ್ದಾರೆ. ಸ್ವತಃ ಬೀಳಗಿ ಶಾಸಕರಿಗೆ ದಾರಿ ತಪ್ಪಿಸಿ ಸ್ಪೀಕರ್‌ಗೆ ನನ್ನ ವಿರುದ್ಧ ಪತ್ರವನ್ನೂ ಸಹ ಬರೆಸಿದ್ದರು ಎಂದು ಹಿದಾಯತ್ತುಲ್ಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ :ಬಿಬಿಎಂಪಿಯಲ್ಲಿ ಮಾರ್ಷಲ್ ಕೆಲಸದ ಆಮಿಷ; ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸಿದ ಆರೋಪಿ ಸೆರೆ

ABOUT THE AUTHOR

...view details