ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭಗೊಳ್ಳುತ್ತಿದ್ದು, ಇದನ್ನು ಪ್ರತಿಷ್ಠೆಗೋಸ್ಕರ ನಡೆಸುತ್ತಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನೇಕ ಇಲಾಖೆಗಳ ಜತೆ ಸಮಾಲೋಚನೆ ನಡೆಸಿ ಚರ್ಚಿಸಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ಪರೀಕ್ಷೆ ನಡೆಸುತ್ತಿದ್ದೇವೆ. ಹೈಕೋರ್ಟ್, ಸುಪ್ರೀಂಕೋರ್ಟ್ ಪರೀಕ್ಷೆ ನಡೆಸಲು ಅವಕಾಶ ನೀಡಿವೆ. ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಪರೀಕ್ಷೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಅತ್ಯಂತ ಪ್ರಮುಖವಾಗಿದೆ. ಉಳಿದ ರಾಜ್ಯಗಳಿಗೆ ಪಿಯುಸಿ ಮುಖ್ಯವಾಗಿದ್ದು, ಇದರಿಂದ ಅವರು ಪರೀಕ್ಷೆ ಕೈಬಿಟ್ಟಿದ್ದಾರೆ. ಆದರೆ ನಮಗೆ ಅದು ಆಗದು. ಸೂಕ್ತ ಎಚ್ಚರಿಕೆ ವಹಿಸಿ ಕ್ರಮ ಕೈಗೊಂಡಿದ್ದೇವೆ ಎಂದರು.
ಪರೀಕ್ಷೆ ಬರೆಯುವ ಮಧ್ಯೆ ಯಾವುದೇ ಮಗು ಕೋವಿಡ್-19ಗೆ ತುತ್ತಾದರೆ ಆ ಮಗುವಿಗೆ ಆಗಸ್ಟ್ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ಮಾಡಿಕೊಡುತ್ತೇವೆ. ಈ ಸಲದ ಪರೀಕ್ಷೆಯಲ್ಲಿ ಮುಂದುವರಿಸಲು ಅವಕಾಶ ಇರಲ್ಲ. ಸೂಕ್ತ ಗಮನ ಹರಿಸುತ್ತೇವೆ. ರಾಜ್ಯದಲ್ಲಿ 5,765 ಆರೋಗ್ಯ ತಪಾಸಣಾ ಕೇಂದ್ರ ಆರಂಭಿಸಿದ್ದೇವೆ ಎಂದರು.
ಪರೀಕ್ಷೆ ಬರೆಯಲಿದ್ದಾರೆ 8,48,203 ಮಕ್ಕಳು
8,48,203 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. 81,265 ಅಧಿಕಾರಿಗಳು, ಸಿಬ್ಬಂದಿ ಜತೆಗೆ ಗೃಹ ಇಲಾಖೆ, ಪೊಲೀಸ್, ನಮ್ಮ ಸಿಬ್ಬಂದಿ ಸೇರಿ 1.5 ಲಕ್ಷ ಜನರು ಕಾರ್ಯನಿರ್ವಹಿಸಲಿದ್ದಾರೆ. ಎಲ್ಲಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಬೆಳಗ್ಗೆ 7ರಿಂದಲೇ ಸಿಬ್ಬಂದಿ ಪರೀಕ್ಷಾ ಕೇಂದ್ರದಲ್ಲಿ ಇರುತ್ತಾರೆ. ಮೊದಲೇ ಮಕ್ಕಳು ಬರಬಹುದು. ನೂಕುನುಗ್ಗಲಾಗದು. ಕುಡಿಯುವ ನೀರನ್ನು ಮಕ್ಕಳಿಗೆ ಮನೆಯಿಂದ ತರಲು ಹೇಳಿದ್ದೇವೆ. ತರದಿದ್ದವರಿಗೆ 250 ಎಂಎಲ್ ನೀರಿನ ಬಾಟಲಿ ಕೊಡುತ್ತೇವೆ. ಪಾಲಕರು ಮಕ್ಕಳನ್ನು ಬಿಡಲು ಬಂದವರು ನೂಕುನುಗ್ಗಲಾಗದಂತೆ ನೋಡಿಕೊಳ್ಳಿ. ಅನಗತ್ಯ ಒತ್ತಡ ಬೇಡ ಎಂದರು.
ಕಂಟೈನ್ಮೆಂಟ್ ಝೋನ್ನಿಂದ ರಾಜ್ಯದಲ್ಲಿ 26 ಕೇಂದ್ರ ಬದಲಿಸಿದ್ದೇವೆ. ಕೊರೊನಾ ಸೂಚನೆ ಹೊಂದಿರುವ 10 ಮಕ್ಕಳನ್ನು ಹೊರಗಿಟ್ಟಿದ್ದೇವೆ. ಅವರಿಗೆ ಆಗಸ್ಟ್ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುತ್ತೇವೆ. ಕಂಟೈನ್ಮೆಂಟ್ ಝೋನ್ನಿಂದ ಸುಮಾರು 9 ಮಕ್ಕಳು ಬರುತ್ತಿದ್ದಾರೆ. ಅವರಿಗೆ ಪ್ರತ್ಯೇಕ ಕೊಠಡಿ ಮಾಡಿಕೊಟ್ಟಿದ್ದೇವೆ. ಮಾಸ್ಕ್ ನಾವೇ ನೀಡುತ್ತೇವೆ. ಎನ್-95 ಮಾಸ್ಕ್ ನೀಡುತ್ತೇವೆ. ಶಿಕ್ಷಣ ಇಲಾಖೆ ಜತೆ ಗೃಹ ಇಲಾಖೆ, ಆರೋಗ್ಯ, ಕಂದಾಯ, ಸಾರಿಗೆ, ನಗರಾಭಿವೃದ್ಧಿ ಇಲಾಖೆಗಳೂ ಸಹಕಾರ ನೀಡುತ್ತಿವೆ ಎಂದು ಹೇಳಿದರು.