ಕರ್ನಾಟಕ

karnataka

By

Published : Jan 17, 2020, 9:56 AM IST

Updated : Jan 17, 2020, 10:34 AM IST

ETV Bharat / state

ಕನಕಪುರ ಬಂಡೆಗೆ ಒಲಿದ ಕೆಪಿಸಿಸಿ ಅಧ್ಯಕ್ಷಗಾದಿ: ಅಧಿಕೃತ ಆದೇಶ ಮಾತ್ರ ಬಾಕಿ!?

ಕೆಪಿಸಿಸಿ ಅಧ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್​​ ಆಯ್ಕೆ ಬಹುತೇಕ ಖಚಿತವಾಗಿದ್ದು, ಇಂದು ಅಧಿಕೃತವಾಗಿ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

D.K. Shivakumar
ಮಾಜಿ ಸಚಿವ ಡಿ.ಕೆ. ಶಿವಕುಮಾರ್

ಬೆಂಗಳೂರು:ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಯ್ಕೆ ಬಹುತೇಕ ಖಚಿತವಾಗಿದ್ದು, ಇಂದು ಆದೇಶ ಹೊರಬೀಳುವ ಸಾಧ್ಯತೆಯಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲು ಸಾಕಷ್ಟು ಪ್ರಯತ್ನ ನಡೆಸಿದರೂ, ಅದಕ್ಕೆ ಹೈಕಮಾಂಡ್ ಮಟ್ಟದಲ್ಲಿ ಮನ್ನಣೆ ಸಿಕ್ಕಿಲ್ಲ. ಕನಕಪುರ ಬಂಡೆ ಎಂದೇ ಖ್ಯಾತರಾಗಿರುವ ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷಗಾದಿ ಒಲಿದಿದೆ ಎಂಬ ಮಾತು ಕೇಳಿಬರುತ್ತಿದೆ. ಕೆಪಿಸಿಸಿ ಅಧ್ಯಕ್ಷಗಾದಿಗೆ ಒಂದು ಕಡೆ ಡಿಕೆಶಿ ಪ್ರಬಲ ಆಕಾಂಕ್ಷಿಯಾಗಿದ್ದು, ಇವರಿಗೆ ಪ್ರತಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಏರಲು ಹಲವು ನಾಯಕರು ಹಲವು ಹಂತಗಳಲ್ಲಿ ಪ್ರಯತ್ನ ನಡೆಸಿದ್ದರು.

ಆದರೆ ಇವರಲ್ಲಿ ಯಾರೊಬ್ಬರೂ ಡಿಕೆಶಿಗೆ ಪ್ರಬಲ ಪೈಪೋಟಿ ನೀಡುವಲ್ಲಿ ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಬೆಂಬಲದ ಮೇಲೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಒಂದಿಷ್ಟು ಪೈಪೋಟಿ ನೀಡುವ ಪ್ರಯತ್ನ ನಡೆಸಿದರೂ, ಹೈಕಮಾಂಡ್ ಮಟ್ಟದಲ್ಲಿ ಇವರಿಗೆ ಹೆಚ್ಚಿನ ಬೆಂಬಲ ಸಿಕ್ಕಿಲ್ಲ. ಒಟ್ಟಾರೆ ಕನಕಪುರ ಬಂಡೆ ಆಯ್ಕೆ ಖಚಿತವಾಗಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂಬ ಮಾತು ಕೇಳಿಬರುತ್ತಿದೆ.

ಡಿಕೆಶಿ ಆಯ್ಕೆಗೆ ಮಾನದಂಡ:ಹೈಕಮಾಂಡ್ ಆದೇಶ ಪಾಲಿಸಿ ಮೈತ್ರಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಡಿ.ಕೆ. ಶಿವಕುಮಾರ್​ಗೆ ಅತಿದೊಡ್ಡ ಬಲವಾಗಿ ಲಭಿಸಿದೆ. ದೋಸ್ತಿ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸರ್ಕಾರ ಬಚಾವ್ ಮಾಡಲು ಕಸರತ್ತು ನಡೆಸಿದ್ದು ಈ ಕಾರ್ಯದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸಫಲತೆ ಕೂಡ ಸಾಧಿಸಿದ್ದು, ಪ್ರಮುಖ ಅಂಶವಾಗಿ ಗೋಚರಿಸಿದೆ.

ಸರ್ಕಾರ ಪಕ್ಷ ನಿಷ್ಠ ಹಾಗೂ ಸಂಘಟನಾ ಚತುರ ಎಂಬ ಹೆಗ್ಗಳಿಕೆ ಡಿ.ಕೆ. ಶಿವಕುಮಾರ್ ಬೆನ್ನಿಗೆ ಇದೆ. ಇಡಿ ಬಲೆಗೆ ಸಿಕ್ಕರೂ ವಿಚಲಿತರಾಗದೆ ನಿಂತಿದ್ದು, ಈ ಕಾರಣಕ್ಕೆ ಜೈಲಿಗೆ ಹೋದರೂ ಒತ್ತಡಕ್ಕೆ ಒಳಗಾಗದೇ ಇರುವುದು ದೊಡ್ಡ ಆಧಾರವಾಗಿದೆ. ಆರ್ಥಿಕವಾಗಿ ಕೂಡ ಡಿಕೆಶಿ ಬಲಿಷ್ಠವಾಗಿದ್ದಾರೆ. ಪಕ್ಷಕ್ಕೆ ಅಗತ್ಯ ಸಂಪನ್ಮೂಲ ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆ ಪಕ್ಷಕ್ಕೆ ಇವರಿಂದ ಅನುಕೂಲಗಳು ಹೆಚ್ಚು ಲಭಿಸಲಿದೆ ಎಂಬ ಅಂಶವನ್ನು ಕೂಡ ಹೈಕಮಾಂಡ್ ಬಲವಾಗಿ ಪ್ರತಿಪಾದಿಸಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಬಲ ಒಕ್ಕಲಿಗ ಸಮುದಾಯದ ನಾಯಕತ್ವ ವಹಿಸಿಕೊಂಡಿರುವ ಡಿಕೆಶಿ ರಾಜ್ಯದಲ್ಲಿಯೇ ಒಬ್ಬ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಒಕ್ಕಲಿಗ ಸಮುದಾಯವನ್ನು ಸಂಘಟಿಸುವ ಸಾಮರ್ಥ್ಯ ಕೂಡ ಇವರಿಗೆ ಇದೆ ಎನ್ನುವುದನ್ನು ಹೈಕಮಾಂಡ್ ಗುರುತಿಸಿದೆ. ಇದಕ್ಕಾಗಿಯೇ ಸಿದ್ದರಾಮಯ್ಯ ಪ್ರಯತ್ನಕ್ಕೂ ಕೂಡ ಹಿನ್ನಡೆ ಉಂಟಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಗುಜರಾತ್ ವಿಚಾರ:ಕೇಂದ್ರ ಎನ್​​ಡಿಎ ಸರ್ಕಾರವನ್ನು ಎದುರು ಹಾಕಿಕೊಂಡು ರಾಜ್ಯಸಭೆ ಚುನಾವಣೆ ಸಂದರ್ಭ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ನೀಡಿದ್ದ ಆಶ್ರಯ ಹಾಗೂ ಇದರ ಮೂಲಕವೇ ಕಾಂಗ್ರೆಸ್​ನ ಹಿರಿಯ ನಾಯಕ ಅಹಮದ್ ಪಟೇಲ್ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಈಗಿನ ಆಯ್ಕೆಗೆ ಡಿಕೆಶಿ ಪರಿಗಣನೆಗೆ ಒಳಗಾಗಲು ಪ್ರಮುಖ ಪಾತ್ರವಹಿಸಿದೆ. ಅಲ್ಲದೆ ಅಹ್ಮದ್ ಪಟೇಲ್ ಕೂಡ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ಬಂದಾಗ ಡಿಕೆಶಿ ಬೆನ್ನಿಗೆ ನಿಂತಿದ್ದಾರೆ ಎಂಬ ವಿವರ ಲಭಿಸಿದೆ.

ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಹೊಂದಿರುವ ಉತ್ತಮ ಹಿಡಿತ ಪ್ರಮುಖ ಕಾರಣವಾಗಿದೆ. ಹತ್ತಾರು ಕಾರಣಗಳಿಂದ ಡಿಕೆಶಿ ಆಯ್ಕೆಯೇ ಬಹುತೇಕ ಖಚಿತವಾಗಿದ್ದು, ಅಧಿಕೃತ ಆದೇಶ ಹೊರಬೀಳಬೇಕಿದೆ. ಕೆಪಿಸಿಸಿ ಅಧ್ಯಕ್ಷಗಾದಿಗೆ ಹಲವರು ಪೈಪೋಟಿ ನಡೆಸಿದ್ದರು ಕೂಡ ಅಂತಿಮವಾಗಿ ಶಿವಕುಮಾರ್​​ಗೆ ಸಮರ್ಥ ಸ್ಪರ್ಧೆ ನೀಡುವಲ್ಲಿ ಯಾರೂ ಸಫಲರಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ.

Last Updated : Jan 17, 2020, 10:34 AM IST

ABOUT THE AUTHOR

...view details