ಕರ್ನಾಟಕ

karnataka

ಕುಮಾರಸ್ವಾಮಿಗೆ ಯಾವ ದಾಖಲೆ ಬೇಕೋ ಕೊಡ್ತೇನೆ, ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಲಿ: ಡಿಕೆಶಿ

By ETV Bharat Karnataka Team

Published : Nov 17, 2023, 3:35 PM IST

Updated : Nov 17, 2023, 3:46 PM IST

ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ ಅವರಿಗೆ ಯಾವ ದಾಖಲೆ ಬೇಕೋ, ಕೊಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

dcm-dk-sivakumar-reaction-on-h-d-kumaraswamy-allegations
ಡಿಸಿಎಂ ಡಿ.ಕೆ.ಶಿವಕುಮಾರ್​

ಡಿಸಿಎಂ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಏನೇನು ಪಟ್ಟಿ ಕೊಡ್ತಾರೆ, ಅದಕ್ಕೆ ಲೆಕ್ಕ ಕೊಡೋಣ. ತಪ್ಪು ಮಾಡಿದ್ದರೆ ಬೇಕಾದರೆ ಗಲ್ಲಿಗೆ ಹಾಕಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲುಲು ಮಾಲ್ ಜಮೀನಿನ ಕುರಿತು ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.

"ಜನರೇ ಅವರಿಗೆ ಉತ್ತರ ಕೊಟ್ಟಿದ್ದಾರೆ. ಅವರ ಮಾತು, ಆಚಾರ, ವಿಚಾರಕ್ಕೆ ಉತ್ತರ ನೀಡಿದ್ದಾರೆ. ಇನ್ನೂ ಏನು ಬೇಕಾದರೂ ನಾನು ಉತ್ತರ ಕೊಡುತ್ತೇನೆ. ನಾನು ಮಾಲ್​ ಕಟ್ಟಿರುವ ಜಾಗ ಕೇಂದ್ರ ಸರ್ಕಾರ ಒಂದು ಸಂಸ್ಥೆಯದ್ದು. ಅವರು ದಾಖಲೆ ಮಾಡಿ ಟೆಂಡರ್ ಹಾಕಿದ್ದಾರೆ. ಅದನ್ನು ನಮ್ಮ ಸ್ನೇಹಿತರು ತೆಗೆದುಕೊಂಡಿದ್ದರು. ಅದನ್ನು ನಾನು ಅವರ ಬಳಿ ತೆಗೆದುಕೊಂಡಿದ್ದೇನೆ. ಏನಾದರೂ ತಪ್ಪು ಮಾಡಿದ್ದರೆ ಬೇಕಾದರೆ ಗಲ್ಲಿಗೆ ಹಾಕಲಿ. ಅವರಿಗೆ ಇನ್ನೂ ಗೊತ್ತಿಲ್ಲ. ಅವರ ತಂದೆ 10-15 ವರ್ಷದ ಹಿಂದೆಯೇ ತನಿಖೆ ಮಾಡಿಸಿದ್ದಾರೆ" ಎಂದರು.

ಬ್ಲ್ಯಾಕ್​ಮೇಲ್​ಗೆ ಹೆದರಲ್ಲ: "ಎಲ್ಲದಕ್ಕೂ ನಾನು ರೆಡಿ ಇದ್ದೇನೆ. ಈ ಬ್ಲಾಕ್​ಮೇಲ್​ಗೆ ನಾನು ಹೆದರಲ್ಲ. ಅವರಿಗೆ ಏನು ದಾಖಲೆ ಬೇಕೋ ಕೊಡ್ತೇನೆ. ಆ ಮಾಲ್ ಕಟ್ಟಿದ್ದು ನಾನಲ್ಲ. ಶೋಭಾ ಡೆವಲಪರ್ಸ್ ಕಟ್ಟಿದ್ದು. ಅವರು ಏನೇನ್ ಬಿಲ್ಲು ಕಟ್ಟಿದ್ದಾರೆ, ತೋರಿಸುತ್ತಾರೆ. ತೋರಿಸಿ ಅಂತ ನಾನೇ ಅವರಿಗೆ ಹೇಳ್ತೇನೆ" ಎಂದು ಡಿಕೆಶಿ ತಿಳಿಸಿದರು.

ಕರೆಂಟ್​ ಕಳ್ಳ ಎನ್ನುವುದನ್ನು ನಿಲ್ಲಿಸಿ - ಹೆಚ್​ಡಿಕೆ:ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಬೆಂಗಳೂರಿನಲ್ಲಿ ಮಾತನಾಡಿ, "ದೀಪಾವಳಿ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ನಡೆದ ಅಚಾತುರ್ಯದ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಈಗಾಗಲೇ ನನಗೆ ಕರೆಂಟ್​ ಕಳ್ಳ ಎನ್ನುವ ಲೇಬಲ್​ ಅನ್ನು ಸಿಎಂ, ಡಿಸಿಎಂ ಹಾಗೂ ಅವರ ಪಟಾಲಂ ಸೇರಿ ಇಟ್ಟಿದ್ದಾರೆ. ನನ್ನನ್ನು ಕರೆಂಟ್​ ಕಳ್ಳ ಎನ್ನುವ ಇವರ ಆರೋಪಗಳಿಗೆಲ್ಲ ನಾನು ಹೆದರಲ್ಲ. ನಿಮ್ಮಷ್ಟು ಕಳ್ಳತನ ನಾನು ಮಾಡಿಲ್ಲ. ಬೆಸ್ಕಾಂ ನೀಡಿರುವ ಬಿಲ್​ ಹಾಗೂ ದಂಡ ಕಟ್ಟಿದ್ದೇನೆ. ಇನ್ನು ಮುಂದೆ ಕರೆಂಟ್​ ಕಳ್ಳ ಎನ್ನುವುದನ್ನು ನಿಲ್ಲಿಸಬೇಕು" ಎಂದು ಹೇಳಿದರು.

"ದೀಪಾವಳಿ ಸಮಯದಲ್ಲಿ ನಮ್ಮ ಮನೆಯಲ್ಲಿ ಅಚಾತುರ್ಯ ಆಗಿದೆ. ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಲೈಟಿಂಗ್​ ಹಾಕಿದ್ದಕ್ಕೆ ಹೆಚ್ಚು ವಿದ್ಯುತ್​ ಖರ್ಚಾಗಲ್ಲ. ಲೈಟಿಂಗ್​ ಹಾಕಿದ್ದಕ್ಕೆ 1 ಕಿಲೋ ವ್ಯಾಟ್​ಗಿಂತಲೂ ಕಡಿಮೆ ವಿದ್ಯುತ್​ ಉಪಯೋಗ ಆಗಲಿದೆ. ಆದರೆ, ಇವರು 2.5 ಕಿಲೋ ವ್ಯಾಟ್​ಗೆ ಲೆಕ್ಕ ತೆಗೆದುಕೊಂಡು, 7 ದಿನಗಳಿಗೆ 71 ಯುನಿಟ್​ ಆಗಲಿದೆ ಎಂದು ಬಿಲ್​ ಕೊಟ್ಟಿದ್ದಾರೆ. ಈ ಬಿಲ್​ ಅನ್ನು ಮರು ಪರಿಶೀಲನೆ ಮಾಡಬೇಕು" ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪ: ಬೆಸ್ಕಾಂಗೆ ದಂಡ ಕಟ್ಟಿದ ಹೆಚ್‌.ಡಿ.ಕುಮಾರಸ್ವಾಮಿ

Last Updated : Nov 17, 2023, 3:46 PM IST

ABOUT THE AUTHOR

...view details