ಬೆಂಗಳೂರು :ತಮಿಳುನಾಡಿನ ಧರ್ಮಪುರಿಯಿಂದ ಬೆಂಗಳೂರು ನಗರಕ್ಕೆ ಬಸ್ನಲ್ಲಿ ಬಂದು ಮನೆಗಳ್ಳತನ ಮಾಡುತ್ತಿದ್ದ ಖದೀಮನನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ರಾಮಸ್ವಾಮಿ ಬಂಧಿತ ಆರೋಪಿ. ಈತನಿಂದ 30 ಲಕ್ಷ ರೂ ಮೌಲ್ಯದ 602 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಕಳೆದ 25 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಬನಶಂಕರಿ, ಸಿ.ಕೆ.ಅಚ್ಚುಕಟ್ಟು, ಮಡಿವಾಳ, ರಾಮಮೂರ್ತಿನಗರ ಹಾಗು ಕುಮಾರಸ್ವಾಮಿ ಲೇಔಟ್ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಸುಮಾರು 13ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತನ ಹೆಸರಿತ್ತು. ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. 2016ರಿಂದ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ರಾಮಸ್ವಾಮಿ ಈ ಹಿಂದೆ ವ್ಯವಸ್ಥಿತವಾಗಿ ಗ್ಯಾಂಗ್ ಕಟ್ಟಿಕೊಂಡು ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಧರ್ಮಪುರಿ ಬಸ್ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಬಸ್ ಮೂಲಕ ಬೆಂಗಳೂರಿಗೆ ಬಂದು ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಎಸಗುತ್ತಿದ್ದ. ಕದ್ದ ನಂತರ ಊರಿಗೆ ಹೋಗಿ ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಮೋಜಿನ ಜೀವನ ಸಾಗಿಸುತ್ತಿದ್ದನು.