ಬೆಂಗಳೂರು: ಪ್ರೀ ಆ್ಯಕ್ಟಿವೇಟೆಡ್ ಸಿಮ್ ಕಾರ್ಡ್ಸ್ ಬಳಸಿಕೊಂಡು ಆ್ಯಪ್ ಆಧಾರಿತ ಕ್ಯಾಬ್, ಟ್ಯಾಕ್ಸಿ ಸೇವೆ ನೀಡುತ್ತಿದ್ದ ಕಂಪನಿಗಳಿಗೆ ವಂಚಿಸುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮನೋಜ್ ಕುಮಾರ್, ಸಚಿನ್ ಹಾಗೂ ಶಂಕರ್ ಬಂಧಿತರು.
ಈ ಪೈಕಿ ಮನೋಜ್ ಕುಮಾರ್ ಊಬರ್ ಹಾಗೂ ರ್ಯಾಪಿಡೋ ಕಂಪನಿಗಳಿಗೆ ಚಾಲಕರನ್ನು ಒದಗಿಸುವ ವೆಂಡರ್ಶಿಪ್ ಪಡೆದಿದ್ದ. ಸಚಿನ್ ಫೈನಾನ್ಸ್ ಕಂಪನಿಗಳಿಂದ ಲೋನ್ ಕೊಡಿಸುವ ಕೆಲಸ ಮಾಡುತ್ತಿದ್ದರೆ, ಶಂಕರ್ ವಿ ಕಂಪನಿಯ ಸಿಮ್ ಕಾರ್ಡ್ಸ್ ಡಿಸ್ಟ್ರಿಬ್ಯೂಷನ್ ಮಾಡುತ್ತಿದ್ದ. ವಂಚನೆಗೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ಹೊಂದಿದ್ದ ಈ ಮೂವರೂ ಸೇರಿಕೊಂಡು ಮೊದಲು ನಕಲಿ ದಾಖಲಾತಿಗಳನ್ನು ನೀಡಿ ವಿವಿಧ ಹೆಸರಿನಲ್ಲಿ ಚಾಲಕರ ಪ್ರೊಫೈಲ್ ಸೃಷ್ಟಿಸುತ್ತಿದ್ದರು. ಪ್ರೀ ಆ್ಯಕ್ಟಿವೇಟೆಡ್ ಸಿಮ್ ಕಾರ್ಡ್ಸ್ ಬಳಸಿ ನಕಲಿ ರೈಡ್ ಬುಕ್ ಮಾಡುತ್ತಿದ್ದರು. ನಂತರ ಸಾಫ್ಟ್ವೇರ್ ಬಳಸಿಕೊಂಡು ವಾಹನ, ಚಾಲಕ, ಗ್ರಾಹಕರೇ ಇರದಿದ್ದರೂ ನಕಲಿ ರೈಡ್ ತೋರಿಸಿ ಕ್ಯಾಶ್ ಪೇಮೆಂಟ್ ಪಡೆದಿರುವಂತೆ ಊಬರ್ ಹಾಗೂ ರ್ಯಾಪಿಡೋ ಕಂಪನಿಗಳಿಗೆ ವಂಚಿಸುತ್ತಿದ್ದರು. ದಿನಕ್ಕಿಷ್ಟು ಎಂದು ನಿಗದಿತ ರೈಡ್ಗಳನ್ನು ಮಾಡಿದಾಗ ಸಹಜವಾಗಿಯೇ ಆರೋಪಿಗಳಿಗೆ ಇನ್ಸೆಂಟಿವ್ ಸಿಗುತ್ತಿತ್ತು.
ಈ ಕೃತ್ಯಕ್ಕಾಗಿ ಆರೋಪಿಗಳು ಸಾರ್ವಜನಿಕರು ಸಿಮ್ ಕಾರ್ಡ್ ಖರೀದಿಗೆ, ಲೋನ್ ಪಡೆಯುವುದಕ್ಕೆ ನೀಡುವ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 1,055 ಪ್ರೀ ಆ್ಯಕ್ಟಿವೇಟೆಡ್ ಸಿಮ್ ಕಾರ್ಡ್ಸ್, 15 ಮೊಬೈಲ್ ಫೋನ್ಗಳು, 4 ಲ್ಯಾಪ್ ಟಾಪ್ಸ್, ಕಂಪ್ಯೂಟರ್ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಕಳೆದ ಒಂದು ವರ್ಷದಿಂದ ಈ ಕೃತ್ಯ ನಡೆಸುತ್ತಾ ಬಂದಿದ್ದರು. ಸುಮಾರು 10 ಲಕ್ಷ ರೂ.ಗೂ ಮೀರಿ ವಂಚನೆ ಮಾಡಿರುವ ಸಾಧ್ಯತೆ ಇದೆ. ಹಣಕ್ಕಿಂತ ಮುಖ್ಯವಾದದ್ದು ಅವರು ಬಳಸಿದ ಎಂಒ ಎಂಬ ಸಾಧನ. ಇದೊಂದು ವಿನೂತನ ಸಾಧನ. ನಮ್ಮ ರಾಜ್ಯದಲ್ಲಿ ಈ ಹಿಂದೆ ಇದರ ಬಳಕೆಯಾದ ಉದಾಹರಣೆ ಇಲ್ಲ. ಆದರೆ, ಈ ಪ್ರಕರಣದ ಬಗ್ಗೆ ಯಾವುದೇ ಆ್ಯಪ್ ಕಂಪನಿಗಳು ದೂರು ನೀಡಿಲ್ಲ. ನಮ್ಮ ಪೊಲೀಸ್ ಅಧಿಕಾರಿಗಳೇ ಪತ್ತೆ ಮಾಡಿದ್ದಾರೆ. ಬಿ.ದಯಾನಂದ್ - ಬೆಂಗಳೂರು ನಗರ ಪೊಲೀಸ್ ಆಯುಕ್ತ