ಕರ್ನಾಟಕ

karnataka

ಬೆಂಗಳೂರಿನ ಆಸ್ಪತ್ರೆಗಳು ಫುಲ್: ಬೆಡ್ ಸಿಗದೆ ಜೀವ ಬಿಡುತ್ತಿರುವ ಕೋವಿಡ್ ಸೋಂಕಿತರು!

By

Published : May 6, 2021, 1:20 PM IST

ನಗರದಲ್ಲಿರುವ 9,517 ಬೆಡ್​ಗಳ ಪೈಕಿ, 2,273 ಸಾಮಾನ್ಯ ಬೆಡ್​ಗಳು ಖಾಲಿ ಇವೆ. ಆಮ್ಲಜನಕ ಅಗತ್ಯ ಇರುವ ಗಂಭೀರ ಸ್ಥಿತಿಯ ರೋಗಿಗಳು ಚಿಕಿತ್ಸೆ ಸಿಗದೆ ಮೃತಪಡುತ್ತಿದ್ದಾರೆ. ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾಗಿದೆ.

Beds available in Bengaluru
ಬೆಂಗಳೂರಿನಲ್ಲಿ ಲಭ್ಯವಿರುವ ಬೆಡ್​ಗಳು

ಬೆಂಗಳೂರು: ನಗರದಲ್ಲಿ ಸರ್ಕಾರಿ ಕೋಟಾದ ಹಾಸಿಗೆಗಳ ಲಭ್ಯತೆ ಬಗ್ಗೆ ಲೈವ್ ಮಾಹಿತಿ ನೀಡುತ್ತಿದ್ದ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್​ಮೆಂಟ್ ಸಿಸ್ಟಂನ ಆನ್​ಲೈನ್ ಪೋರ್ಟಲ್ ಸಾರ್ವಜನಿಕರಿಗೆ ನಿಷೇಧಿಸಲಾಗಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರೇ ಟ್ವೀಟ್ ಮಾಡಿದ್ದು, ನಗರದಲ್ಲಿ ಬೆಡ್​ಗಳ ಲಭ್ಯತೆ ನೋಡಿದ್ರೆ ಗಾಬರಿ ಹುಟ್ಟಿಸುವಂತಿದೆ.

ಸರ್ಕಾರಿ ಆಸ್ಪತ್ರೆ, ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಒಂದೇ ಒಂದು ಐಸಿಯು, ವೆಂಟಿಲೇಟರ್ ಬೆಡ್​ಗಳು ಖಾಲಿ ಇಲ್ಲ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ 23 ಐಸಿಯು, 10 ವೆಂಟಿಲೇಟರ್​ಗಳಿದ್ದು, ಇದೂ ಕೂಡ ಸಾಮಾನ್ಯ ಜನರಿಗೆ ಸಿಗುತ್ತಿಲ್ಲ. 1912 ಹೆಲ್ಪ್ ಲೈನ್​ಗಳು ಜನರ ಸಹಾಯಕ್ಕೆ ಬರುತ್ತಿಲ್ಲ. ಐಸಿಯು ಬೆಡ್ ಕೇಳಿಕೊಂಡು ಈ ಸಹಾಯವಾಣಿಗೆ ಕರೆ ಮಾಡಿದ್ರೆ ಎರಡ್ಮೂರು ದಿನಗಳ ಬಳಿಕ ವಾಪಸ್ ಫೋನ್ ಮಾಡಿ ಬೆಡ್ ಲಭ್ಯತೆ ಬಗ್ಗೆ ತಿಳಿಸುವ ಪರಿಸ್ಥಿತಿ ಬಂದಿದೆ. ಒಂದು ದಿನದಲ್ಲಿ ಇಡೀ ನಗರದಲ್ಲಿ 100 ಐಸಿಯು ಬೆಡ್ ಕೂಡ ಲಭ್ಯವಾಗುತ್ತಿಲ್ಲ. ವೆಂಟಿಲೇಟರ್, ಐಸಿಯು ಬೆಡ್ ಸಮಸ್ಯೆ ತೀವ್ರವಾಗಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

ನಗರದಲ್ಲಿರುವ 9,517 ಬೆಡ್​​ಗಳ ಪೈಕಿ, 2,273 ಸಾಮಾನ್ಯ ಬೆಡ್​ಗಳು ಖಾಲಿ ಇವೆ. ಆಮ್ಲಜನಕ ಅಗತ್ಯ ಇರುವ ಗಂಭೀರ ಸ್ಥಿತಿಯ ರೋಗಿಗಳು ಚಿಕಿತ್ಸೆ ಸಿಗದೆ ಮೃತಪಡುತ್ತಿದ್ದಾರೆ. ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾಗಿದೆ.

ಐಸಿಯು ಬೆಡ್ ಹೆಚ್ಚಳಕ್ಕೆ ಕ್ರಮ: ಗೌರವ್ ಗುಪ್ತಾ

ಬಿಬಿಎಂಪಿ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದು, ಹೆಚ್ಚುವರಿಯಾಗಿ ಆಕ್ಸಿಜನ್ ಬೆಡ್​ಗಳ ಅಗತ್ಯ ಇದೆ. ವರ್ತಕರು ಸಣ್ಣಪುಟ್ಟ ಆಸ್ಪತ್ರೆಗಳ ಮೇಲುಸ್ತುವಾರಿ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಜೀವ ಉಳಿಸಿಕೊಳ್ಳಲು ಆಮ್ಲಜನಕ ಅತ್ಯಗತ್ಯವಾಗಿದೆ. ಹೊಸದಾಗಿ ಬೆಡ್ ನಿರ್ಮಾಣ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಓದಿ : ಚಾಮರಾಜನಗರ ಆಕ್ಸಿಜನ್ ದುರಂತದ ತನಿಖೆ... ಎರಡನೇ ದಿನವೂ ದಾಖಲೆಗಳ ಜಪ್ತಿ

ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಎರಡು ಸಾವಿರ ಬೆಡ್​ಗಳ ಸಂಖ್ಯೆ ಹೆಚ್ಚಿಸಲಾಗುವುದು. ಶೇ. 50ರಷ್ಟು ಬೆಡ್​​​ಗಳಿಗೆ ಆಕ್ಸಿಜನ್ ಒದಗಿಸಲಾಗುವುದು. 168 ಬೆಡ್​​ಗಳಿಗೆ ಆಮ್ಲಜನಕ ನೀಡಲಾಗಿದೆ. 15 ಸಾವಿರ ಹೋಟೆಲ್ ರೂಮ್​ಗಳಿದ್ದು, 945 ಬೆಡ್​​ಗಳ ಸ್ಟೆಪ್ ಡೌನ್ ಆಸ್ಪತ್ರೆ ಮಾಡಲಾಗುತ್ತಿದೆ. ವಿವಿಧ ದೇಶಗಳಿಂದ ಮತ್ತು ದಾನಿಗಳಿಂದ ಆಮ್ಲಜನಕ ಪಡೆಯಲು ಚಿಂತನೆ ನಡೆಯುತ್ತಿದೆ. ನಗರದ ಆಸ್ಪತ್ರೆಗಳಲ್ಲಿ ಶೇ. 20ರಿಂದ 30 ಜನ ಅಗತ್ಯವಿಲ್ಲದಿದ್ದರೂ ಐಸಿಯುನಲ್ಲಿದ್ದಾರೆ.‌ ಇದನ್ನು ತಡೆಗಟ್ಟಬೇಕಿದೆ ಎಂದರು.

ಮುಂದೆ ಬೆಡ್ ದುರುಪಯೋಗ ಆಗಲ್ಲ:ಪಾಲಿಕೆಯಲ್ಲಿ ತಾಂತ್ರಿಕ ಸಮಿತಿ ಮಾಡಲಾಗಿದೆ. ಬೆಡ್​ ದುರುಪಯೋಗ ಮಾಡದಂತೆ ವೆಬ್​ಸೈಟ್, ಆನ್​ಲೈನ್ ಸಿಸ್ಟಂ ಮಾಡಲಾಗಿದೆ. ಮುಂದೆ ಯಾವುದೇ ದುರುಪಯೋಗ ಆಗುವುದಿಲ್ಲ.‌ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಹೊಸ ವ್ಯವಸ್ಥೆ ಆಗುವ ತನಕ, ಇರುವ ವ್ಯವಸ್ಥೆಯನ್ನು ನಡೆಸಿಕೊಂಡು ಹೋಗಲಾಗುವುದು ಎಂದು ಗೌರವ್ ಗುಪ್ತಾ ತಿಳಿಸಿದರು.

ABOUT THE AUTHOR

...view details