ಬೆಂಗಳೂರು :ಪೊಲೀಸ್ ಇಲಾಖೆ ವರ್ಗಾವಣೆಗೆ ಪಡೆಯುವ ಲಂಚದ ಹಣ ಕೇಶವಕೃಪಾಗೆ ಹೋಗುತ್ತಿದೆ. ಲಂಚದ ಹಣದಿಂದಲೇ ಬಿಜೆಪಿ ಶ್ರೀಮಂತ ಪಕ್ಷವಾಗಿದೆ ಎನ್ನುವ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆ ವಿಧಾನ ಪರಿಷತ್ ಕಲಾಪದಲ್ಲಿ ಗದ್ದಲ, ಕೋಲಾಹಲಕ್ಕೆ ಎಡೆ ಮಾಡಿಕೊಟ್ಟಿತು. ವಿಧಾನ ಪರಿಷತ್ನ ಮಧ್ಯಾಹ್ನದ ಕಲಾಪದಲ್ಲಿ ನಿಯಮ 68ರ ಅಡಿ ಕೆಲ ಪೊಲೀಸರು ಹಣ ಸಂಪಾದನೆಗೆ ಭ್ರಷ್ಟಾಚಾರದಲ್ಲಿ ತೊಡಗಿರುವ ವಿಷಯದ ಮೇಲೆ ಚರ್ಚೆ ನಡೆಯಿತು.
ಈ ಚರ್ಚೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಪೊಲೀಸ್ ನೇಮಕಾತಿಯಲ್ಲಿ ಅಫಜಲ್ಪುರದ 50 ಜನ ಆಯ್ಕೆಯಾಗಿದ್ದಾರೆ. ಇವರು ಬುದ್ದಿವಂತರಲ್ಲ ಎನ್ನಲ್ಲ. ಆದರೆ, ಅನುಮಾನ ವ್ಯಕ್ತವಾಗುವಂತಿದೆ. ಎರಡು ವರ್ಷದೊಳಗೆ ವರ್ಗಾವಣೆ ಮಾಡಬಾರದು ಎಂದಿದ್ದರೂ ವರ್ಷದೊಳಗೆ ವರ್ಗಾವಣೆ ಮಾಡಲಾಗುತ್ತಿದೆ. ಇದು ದಂಧೆಯಾಗಲು ಕಾರಣವಾಗಿದೆ. ಜಾತಿ ಆಧಾರಿತ ವರ್ಗಾವಣೆ ನಡೆಯುತ್ತಿದೆ ಎಂದು ಆರೋಪಿಸಿದರು.
ಕಲ್ಲಡ್ಕದ ಭಯೋದ್ಪಾದಕ ಪ್ರಸ್ತಾಪಕ್ಕೆ ಬಿಜೆಪಿ ಕಿಡಿ : ಎಡಿಜಿ ಅಧಿಕಾರಿಯೊಬ್ಬರು ವರ್ಗಾವಣೆ ಆಗಿದೆ ಎನ್ನುವ ವಿಷಯ ತಿಳಿಸಲು ಕೇಶವಕೃಪಕ್ಕೆ ಹೋಗುತ್ತಾರೆ. ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿ ಒಬ್ಬ ಭಯೋತ್ಪಾದಕರು ಹೇಳುತ್ತಾರೆ..? ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಮತ್ತಷ್ಟು ಕೆರಳಿದ ಹರಿಪ್ರಸಾದ್, ಕಲ್ಲಡ್ಕದ ಭಯೋತ್ಪಾದಕ ಎನ್ನುತ್ತಿದ್ದೇನೆ, ಅವರ ಹೆಸರೇಳಿ ವರ್ಗಾವಣೆ ಮಾಡುತ್ತಾರೆ ಎಂದರು.
ಇದಕ್ಕೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಭಾರತಿ ಶೆಟ್ಟಿ, ಆಯನೂರು ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಮಾತು ಮುಂದುವರೆಸಿದ ಹರಿಪ್ರಸಾದ್, ಶಿವಮೊಗ್ಗದಲ್ಲಿ 144 ಸೆಕ್ಷನ್ ಇದ್ದರೂ ನಿಯಮ ಉಲ್ಲಂಘನೆ ಮಾಡುತ್ತಾರೆ, ಉಡುಪಿ ಇತ್ಯಾದಿ ಕಡೆಯೂ ಉಲ್ಲಂಘನೆಯಾದರೂ ಕ್ರಮಕೈಗೊಂಡಿಲ್ಲ ಎಂದರು.
ಪಾಯಿಂಟ್ ಆಫ್ ಆರ್ಡರ್ : ಈ ವೇಳೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪಾಯಿಂಟ್ ಆಫ್ ಆರ್ಡರ್ ಪ್ರಸ್ತಾಪಿಸಿದರು. ಕಲಾಪದಲ್ಲಿ ಯಾವುದಕ್ಕೆ ಅನುಮತಿ ಕೊಡುತ್ತೀರೋ ಅದರಲ್ಲಿ ನಾವೆಲ್ಲಾ ಭಾಗಿಯಾಗುತ್ತೇವೆ, ಈಗ ನಿಯಮ 68ರ ಅಡಿ ಚರ್ಚೆಗೆ ಅವಕಾಶ ನೀಡಲಾಗಿದೆ. ಆದರೆ, ವಿಷಯ ಹೊರಗೆ ಚರ್ಚೆ ಹೋಗುತ್ತಿದೆ. ಕೆಲವು ಪೊಲೀಸರು ಭ್ರಷ್ಟಾಚಾರ, ಲಂಚದ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕೆಲವು ಪೊಲೀಸರು ವಿಷಯ ಬಿಟ್ಟು ಹೊರಗಡೆ ಚರ್ಚೆ ಹೋಗುತ್ತಿದೆ, ಇದನ್ನು ನಿಯಂತ್ರಿಸಿ ಎಂದರು.