ಕರ್ನಾಟಕ

karnataka

By

Published : Mar 30, 2022, 7:19 PM IST

ETV Bharat / state

ಪೊಲೀಸ್ ವರ್ಗಾವಣೆ ಲಂಚದ ಹಣ ಕೇಶವಕೃಪಾಗೆ, ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಕಿಡಿ, ಪರಿಷತ್‌ನಲ್ಲಿ ಕೋಲಾಹಲ!

ಬೆಂಗಳೂರಿನಲ್ಲಿ ಒಂದು ಪೋಸ್ಟ್ ಗೆ ಹೋಗಲು 2 ಕೋಟಿ ಲಂಚ ಕೊಡಬೇಕು.ಸಂಘ ಪರಿವಾರದ ಖಜಾನೆಗೆ ಈ ಹಣ ಹೋಗುತ್ತಿದೆ, ಅದಕ್ಕೆ ಬಿಜೆಪಿ ಶ್ರೀಮಂತ ಪಕ್ಷವಾಗಿದೆ. ಇಂತಹ ಹಣ ಎಲ್ಲ ಕೇಶವಕೃಪಕ್ಕೆ ಹೋಗಿತ್ತಿದೆ ಎಂದು ಬಿಕೆ ಹರಿಪ್ರಸಾದ್ ಆರೋಪಿಸಿದರು..

ವಿಧಾನ ಪರಿಷತ್ ಕಲಾಪ
ವಿಧಾನ ಪರಿಷತ್ ಕಲಾಪ

ಬೆಂಗಳೂರು :ಪೊಲೀಸ್ ಇಲಾಖೆ ವರ್ಗಾವಣೆಗೆ ಪಡೆಯುವ ಲಂಚದ ಹಣ ಕೇಶವಕೃಪಾಗೆ ಹೋಗುತ್ತಿದೆ. ಲಂಚದ ಹಣದಿಂದಲೇ ಬಿಜೆಪಿ ಶ್ರೀಮಂತ ಪಕ್ಷವಾಗಿದೆ ಎನ್ನುವ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆ ವಿಧಾನ ಪರಿಷತ್ ಕಲಾಪದಲ್ಲಿ ಗದ್ದಲ, ಕೋಲಾಹಲಕ್ಕೆ ಎಡೆ ಮಾಡಿಕೊಟ್ಟಿತು. ವಿಧಾನ ಪರಿಷತ್‌ನ ಮಧ್ಯಾಹ್ನದ ಕಲಾಪದಲ್ಲಿ ನಿಯಮ 68ರ ಅಡಿ ಕೆಲ ಪೊಲೀಸರು ಹಣ ಸಂಪಾದನೆಗೆ ಭ್ರಷ್ಟಾಚಾರದಲ್ಲಿ ತೊಡಗಿರುವ ವಿಷಯದ ಮೇಲೆ ಚರ್ಚೆ ನಡೆಯಿತು.

ಈ ಚರ್ಚೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಪೊಲೀಸ್ ನೇಮಕಾತಿಯಲ್ಲಿ ಅಫಜಲ್‌ಪುರದ 50 ಜನ ಆಯ್ಕೆಯಾಗಿದ್ದಾರೆ. ಇವರು ಬುದ್ದಿವಂತರಲ್ಲ ಎನ್ನಲ್ಲ. ಆದರೆ, ಅನುಮಾನ ವ್ಯಕ್ತವಾಗುವಂತಿದೆ. ಎರಡು ವರ್ಷದೊಳಗೆ ವರ್ಗಾವಣೆ ಮಾಡಬಾರದು ಎಂದಿದ್ದರೂ ವರ್ಷದೊಳಗೆ ವರ್ಗಾವಣೆ ಮಾಡಲಾಗುತ್ತಿದೆ. ಇದು ದಂಧೆಯಾಗಲು ಕಾರಣವಾಗಿದೆ. ಜಾತಿ ಆಧಾರಿತ ವರ್ಗಾವಣೆ ನಡೆಯುತ್ತಿದೆ ಎಂದು ಆರೋಪಿಸಿದರು.

ಕಲ್ಲಡ್ಕದ ಭಯೋದ್ಪಾದಕ ಪ್ರಸ್ತಾಪಕ್ಕೆ ಬಿಜೆಪಿ ಕಿಡಿ : ಎಡಿಜಿ ಅಧಿಕಾರಿಯೊಬ್ಬರು ವರ್ಗಾವಣೆ ಆಗಿದೆ ಎನ್ನುವ ವಿಷಯ ತಿಳಿಸಲು ಕೇಶವಕೃಪಕ್ಕೆ ಹೋಗುತ್ತಾರೆ. ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿ ಒಬ್ಬ ಭಯೋತ್ಪಾದಕರು ಹೇಳುತ್ತಾರೆ..? ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಮತ್ತಷ್ಟು ಕೆರಳಿದ ಹರಿಪ್ರಸಾದ್, ಕಲ್ಲಡ್ಕದ ಭಯೋತ್ಪಾದಕ ಎನ್ನುತ್ತಿದ್ದೇನೆ, ಅವರ ಹೆಸರೇಳಿ ವರ್ಗಾವಣೆ ಮಾಡುತ್ತಾರೆ ಎಂದರು.

ಇದಕ್ಕೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಭಾರತಿ ಶೆಟ್ಟಿ, ಆಯನೂರು ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಮಾತು ಮುಂದುವರೆಸಿದ ಹರಿಪ್ರಸಾದ್, ಶಿವಮೊಗ್ಗದಲ್ಲಿ 144 ಸೆಕ್ಷನ್ ಇದ್ದರೂ ನಿಯಮ ಉಲ್ಲಂಘನೆ ಮಾಡುತ್ತಾರೆ, ಉಡುಪಿ ಇತ್ಯಾದಿ ಕಡೆಯೂ ಉಲ್ಲಂಘನೆಯಾದರೂ ಕ್ರಮಕೈಗೊಂಡಿಲ್ಲ ಎಂದರು.

ಪಾಯಿಂಟ್ ಆಫ್ ಆರ್ಡರ್ : ಈ ವೇಳೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪಾಯಿಂಟ್ ಆಫ್ ಆರ್ಡರ್ ಪ್ರಸ್ತಾಪಿಸಿದರು. ಕಲಾಪದಲ್ಲಿ ಯಾವುದಕ್ಕೆ ಅನುಮತಿ ಕೊಡುತ್ತೀರೋ ಅದರಲ್ಲಿ ನಾವೆಲ್ಲಾ ಭಾಗಿಯಾಗುತ್ತೇವೆ, ಈಗ ನಿಯಮ 68ರ ಅಡಿ ಚರ್ಚೆಗೆ ಅವಕಾಶ ನೀಡಲಾಗಿದೆ. ಆದರೆ, ವಿಷಯ ಹೊರಗೆ ಚರ್ಚೆ ಹೋಗುತ್ತಿದೆ. ಕೆಲವು ಪೊಲೀಸರು ಭ್ರಷ್ಟಾಚಾರ, ಲಂಚದ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕೆಲವು ಪೊಲೀಸರು ವಿಷಯ ಬಿಟ್ಟು ಹೊರಗಡೆ ಚರ್ಚೆ ಹೋಗುತ್ತಿದೆ, ಇದನ್ನು ನಿಯಂತ್ರಿಸಿ ಎಂದರು.

ಪಾಯಿಂಟ್ ಆಫ್ ಆರ್ಡರ್ ಪುರಸ್ಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ವಿಷಯ ಬಿಟ್ಟು ಹೊರಗೆ ಹೋಗದಂತೆ ಸೂಚನೆ ನೀಡಿದರು. ನಂತರ ಮಾತು ಮುಂದುವರೆಸಿದ ಹರಿಪ್ರಸಾದ್, ಇತರ ರಾಜ್ಯದ ಪೊಲೀಸರ ವರ್ಗಾವಣೆ ಕುರಿತು ಲಂಚ ಪಡೆಯುವ ಕುರಿತು ಉಲ್ಲೇಖಿಸಿದರು. ಈ ವೇಳೆ ಬೇರೆ ರಾಜ್ಯದ ವಿಷಯವೇಕೆ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸುತ್ತಿದ್ದಂತೆ, ಅವರು ರಾಜ್ಯಸಭಾ ಸದಸ್ಯರಾಗಿದ್ದವರಲ್ಲವೇ ಎಂದು ಕಾನೂನು ಸಚಿವ ಮಾಧುಸ್ವಾಮಿ ಟಾಂಗ್ ನೀಡಿದರು.

ಲಂಚದ ಹಣ ಕೆಶವಕೃಪಾಗೆ : ನಂತರ ಮಾತು ಮುಂದುವರೆಸಿದ ಹರುಪ್ರಸಾದ್, ಬೆಂಗಳೂರಿನಲ್ಲಿ ಒಂದು ಪೋಸ್ಟ್‌ಗೆ ಹೋಗಲು 2 ಕೋಟಿ ಲಂಚ ಕೊಡಬೇಕು. ಸಂಘ ಪರಿವಾರದ ಖಜಾನೆಗೆ ಈ ಹಣ ಹೋಗುತ್ತಿದೆ, ಅದಕ್ಕೆ ಬಿಜೆಪಿ ಶ್ರೀಮಂತ ಪಕ್ಷವಾಗಿದೆ. ಇಂತಹ ಹಣ ಎಲ್ಲ ಕೇಶವಕೃಪಕ್ಕೆ ಹೋಗಿತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕೇಶವಕೃಪ ಬಗ್ಗೆ ಮಾತನಾಡುವ ಅರ್ಹತೆ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಆಯನೂರು ಮಂಜುನಾಥ್, ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದರು. ಈ ವೇಳೆ ಆಯನೂರು ಮಂಜುನಾಥ್ ಕಡೆ ನೋಡುತ್ತಾ ಕಾಂಗ್ರೆಸ್ ವಿಪ್ ಪ್ರಕಾಶ್ ರಾಥೋಡ್ ಏರಿದ ದನಿಯಲ್ಲಿ ವಾಗ್ದಾಳಿ ನಡೆಸಿದರು. ನನ್ನ ಕಡೆ ನೋಡಿ ಮಾತನಾಡಬೇಡಿ, ನಾನು ಸದಸ್ಯ ಅದಕ್ಕಾಗಿ ಮಾತನಾಡುತ್ತಿದ್ದೇನೆ, ಏನೇ ಹೇಳುವುದಿದ್ದರೂ ಪೀಠಕ್ಕೆ ಹೇಳಿ ಎಂದು ರಾಥೋಡ್‌ಗೆ ತಿರುಗೇಟು ನೀಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಆಧಾರ ರಹಿತ ಆರೋಪ ಮಾಡಬೇಡಿ, ಇದ್ದರೆ ಕೊಡಿ ಎಂದು ಸೂಚಿಸಿದರು. ಈ ವೇಳೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಲಂಚದ ಹಣ ಕೇಶವಕೃಪಕ್ಕೆ ಹೋಗುತ್ತಿದೆ ಎನ್ನುವುದನ್ನು ಕಡತದಿಂದ ತೆಗೆಯಿರಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿಗಳು, ಬರೆದು ಕೊಡಿ ಆ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ನಂತರ ಇತರ ಸದಸ್ಯರಿಗೆ ಅವಕಾಶ ನೀಡದೆ ಸರ್ಕಾರದಿಂದ ಉತ್ತರಕ್ಕೆ ಅವಕಾಶ ನೀಡಿದರು. ಎರಡು ಗಂಟೆ ಅವಕಾಶ ಕೊಡಲಾಗಿದೆ, ಇದೇನು? ಏನು ಹುಡುಗಾಟವಾ? ಎಲ್ಲಿಯವರೆಗೆ ಮಾತನಾಡುತ್ತೀರಿ, ಸಹಿ ಮಾಡಲಾಗಿದೆ ಎಂದು ಹೀಗೆಲ್ಲಾ ಮಾತನಾಡುವುದಾ? ಎಂದು ಗದರಿದರು. ಇದಕ್ಕೆ ಆಕ್ಷೇಪಿಸಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಪ್ರತಿಪಕ್ಷ ನಾಯಕ ಹರಿಪ್ರಸಾದ್ ಸೇರಿ ಹಲವರು ಎಲ್ಲರಿಗೂ ಮಾತನಾಡಲು ಅವಕಾಶ ನೀಡುವಂತೆ ಆಗ್ರಹಿಸಿದರು. ನಂತರ ಖಡಕ್ ವಾರ್ನಿಂಗ್ ನೀಡಿ ನೋಟಿಸ್‌ಗೆ ಸಹಿ ಮಾಡಿದ ಎಲ್ಲರಿಗೂ ಐದು ನಿಮಿಷ ಮಾತನಾಡಲು ಅವಕಾಶ ನೀಡಿದರು.

For All Latest Updates

TAGGED:

ABOUT THE AUTHOR

...view details