ಕರ್ನಾಟಕ

karnataka

ETV Bharat / state

ಸಿಎಂ ರಾಜೀನಾಮೆ ಇಂಗಿತ... ಹೆಚ್​ಡಿಕೆಗೆ ಕಾಂಗ್ರೆಸ್​​ ನಾಯಕರು ಕೊಟ್ಟ ಅಭಯವೇನು!?

ನೀವೆಲ್ಲ ಹೇಗೆ ಹೇಳ್ತೀರೋ ಹಾಗೆ ನಡ್ಕೋತೇನೆ. ಆದ್ರೆ ಇವತ್ತು ನೀವೇ ಸಿಎಂ ಅಂತೀರಾ?, ನಾಳೆ ಸಿದ್ದರಾಮಯ್ಯ ಸಿಎಂ‌ ಅಂತಾರೆ ನಿಮ್ಮವರು ಎಂದು ಸಿಎಂ ಕುಮಾರಸ್ವಾಮಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

By

Published : May 24, 2019, 6:52 PM IST

ಸಿಎಂ ಕುಮಾರಸ್ವಾಮಿ

ಬೆಂಗಳೂರು:ಲೋಕ ಸಮರದಲ್ಲಿನ ಹೀನಾಯ ಸೋಲಿನಿಂದ ಮನನೊಂದ ಸಿಎಂ ಕುಮಾರಸ್ವಾಮಿ ಇಂದು ನಡೆದ ಅನೌಪಚಾರಿಕ ಸಂಪುಟ ಸಭೆಯಲ್ಲಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಫಲಿತಾಂಶದಿಂದ ಸಿಎಂ ಕುಮಾರಸ್ವಾಮಿ ತೀವ್ರ ಮನನೊಂದಿದ್ದರು. ಮಂಡ್ಯದಲ್ಲಿ‌ ಮಗ ನಿಖಿಲ್ ಕುಮಾರಸ್ವಾಮಿ ಮತ್ತು ತುಮಕೂರಿನಲ್ಲಿ ದೇವೇಗೌಡರ ಸೋಲಿನಿಂದ ಸಿಎಂ‌‌ ರಾಜೀನಾಮೆಯ ಚಿಂತನೆ‌ ನಡೆಸಿದ್ದರು. ನಿನ್ನೆ ಫಲಿತಾಂಶ ಬಂದ‌ ಬಳಿಕ ದೇವೇಗೌಡರ ಮನೆಗೆ ಭೇಟಿ ನೀಡಿ, ರಾಜೀನಾಮೆ‌ ನೀಡುವ ಬಗ್ಗೆ ಚಿಂತನೆ ನಡೆಸಿದ್ದರು ಎನ್ನಲಾಗಿದೆ.

ರಾಹುಲ್ ಗಾಂಧಿಯಿಂದ ಮನವೊಲಿಕೆ:ಕುಮಾರಸ್ವಾಮಿ ರಾಜೀನಾಮೆ ಚಿಂತನೆ ವಿಷಯ ತಿಳಿದ ರಾಹುಲ್ ಗಾಂಧಿ, ಸಿಎಂ ಕುಮಾರಸ್ವಾಮಿಗೆ ಫೋನ್ ಮಾಡಿ ಮನವೊಲಿಕೆ ಮಾಡಿದ್ದಾರೆ. ನೀವೇ ಮುಖ್ಯಮಂತ್ರಿ ಆಗಿ ಮುಂದುವರೆಯಿರಿ. ಫಲಿತಾಂಶದಿಂದ ಮೈತ್ರಿ ಮುರಿಯುವುದು ಬೇಡ. ಕಾಂಗ್ರೆಸ್ ನಾಯಕರು ನಿಮ್ಮ ನೇತೃತ್ವದಲ್ಲಿ ಮುಂದುವರೆಯುತ್ತಾರೆ. ಫಲಿತಾಂಶದಿಂದ ಆತಂಕ ಬೇಡ ಎಂದು ರಾಹುಲ್ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

ತಾವು ಫೋನ್ ಮಾಡಿದ್ದಲ್ಲದೇ ರಾಜ್ಯ ಕಾಂಗ್ರೆಸ್ ನಾಯಕರ ಮೂಲಕವೂ ರಾಹುಲ್ ಸಿಎಂ ಹೆಚ್​ಡಿಕೆ ಅವರನ್ನು ಸಮಾಧಾನ ಮಾಡಿಸಿದ್ದಾರೆ. ಇಂದು ಡಿಸಿಎಂ ಮನೆಯಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಸಚಿವರು ಹಾಗೂ ನಾಯಕರು ಮೈತ್ರಿ ಸರ್ಕಾರದ ಅನಿವಾರ್ಯತೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಸಿಎಂ ಕುಮಾರಸ್ವಾಮಿಗೆ ತಮ್ಮ ಸಂಪೂರ್ಣ ಬೆಂಬಲ ನೀಡುವ ಬಗ್ಗೆನೂ ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಂಪುಟ ಸಭೆಯಲ್ಲಿ ಧೈರ್ಯ ತುಂಬಿದ ಕೈ ಸಚಿವರು:

ರಾಹುಲ್ ಗಾಂಧಿ ಸೂಚನೆಯಂತೆ ಇಂದಿನ ಸಭೆಯಲ್ಲಿ ಸಿಎಂಗೆ ಕಾಂಗ್ರೆಸ್ ನಾಯಕರು ಧೈರ್ಯ ತುಂಬಿದ್ದಾರೆ. ನಾವು ನಿಮ್ಮ ಜೊತೆ ಇರುತ್ತೇವೆ. ಬಿಜೆಪಿ ತಂತ್ರಗಳಿಗೆಲ್ಲ ಹೆದರಬೇಡಿ. ನಾವು ನಿಮ್ಮ ಜತೆಗಿದ್ದೇವೆ ಎಂದು ಸಿಎಂಗೆ ಕಾಂಗ್ರೆಸ್ ಸಚಿವರು ಅಭಯ ನೀಡಿದ್ದಾರೆ ಎನ್ನಲಾಗಿದೆ.

ಸಿಎಂರಿಂದ‌ ಸಭೆಯಲ್ಲಿ ನೋವಿನ ಮಾತು:

ನೀವೆಲ್ಲ ಹೇಗೆ ಹೇಳ್ತೀರೋ ಹಾಗೆ ನಡ್ಕೋತೇನೆ. ಆದ್ರೆ ಇವತ್ತು ನೀವೇ ಸಿಎಂ ಅಂತೀರಾ?, ನಾಳೆ ಸಿದ್ದರಾಮಯ್ಯ ಸಿಎಂ‌ ಅಂತಾರೆ ನಿಮ್ಮವರು ಎಂದು ಸಿಎಂ ಕುಮಾರಸ್ವಾಮಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ನಾಯಕರ ಹೇಳಿಕೆಗಳು, ನಡವಳಿಕೆಗಳ ಬಗ್ಗೆನೂ ಸಿಎಂ ಸಚಿವ ಸಂಪುಟದ ಸಭೆಯಲ್ಲಿ ವಿಸ್ತಾರವಾಗಿ ವಿವರಿಸಿದರು. ಆ ರೀತಿ ಆದರೆ ಆಡಳಿತ ಮಾಡೋದು ಕಷ್ಟ. ಇಬ್ಬರಿಗೂ ಮೈತ್ರಿ ಅನಿವಾರ್ಯ. ಹಾಗಂತ ಸ್ವಾಭಿಮಾನ ಕೆಡಿಸಿಕೊಂಡು ಇರು ಅಂದ್ರೆ ಹೇಗೆ? ಎಂದು ಸಿಎಂ ಕಾಂಗ್ರೆಸ್ ಸಚಿವರಿಗೆ ಪ್ರಶ್ನಿಸಿದ್ದಾರೆ.

ಲೋಕಸಭೆ ಚುನಾವಣೆ ಸೋಲು ನನಗೆ ತೀವ್ರ ಬೇಸರ ತಂದಿದೆ. ಅದ್ರಲ್ಲೂ ದೊಡ್ಡವರ ಸೋಲು ಸಹಿಸಲು ಸಾಧ್ಯವಾಗ್ತಿಲ್ಲ. ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಸಭೆಯಲ್ಲಿ ಸಿಎಂ ಇಂಗಿತ ವ್ಯಕ್ತಪಡಿಸಿದರು. ನಿಮ್ಮ ಕೆಲವು ಶಾಸಕರನ್ನು ಹದ್ದುಬಸ್ತಿನಲ್ಲಿಡಿ. ಇನ್ಮುಂದೆ ಹಾಗೆಲ್ಲ ಆಗದೇ ಇರುವ ರೀತಿ‌ ನೋಡಿಕೊಳ್ಳುವುದಾಗಿ ಸಿಎಂಗೆ ಕೈ ನಾಯಕರು ಭರವಸೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ನೀಡೋದು ಬೇಡ.‌ ನಿಮ್ಮ ನಾಯಕತ್ವದಲ್ಲಿ ಮೈತ್ರಿ ಸರ್ಕಾರ ಮುಂದುವರೆಯಲಿ.‌ ನಮ್ಮ ಶಾಸಕರನ್ನು ಹಿಡಿದಿಡುವ ಜವಾಬ್ದಾರಿ ನಮ್ಮದು. ಅದಕ್ಕಾಗಿಯೇ ಇದೇ ಮಂಗಳವಾರ‌ ಸಿಎಲ್​​ಪಿ ಸಭೆ ಕರೆದಿದ್ದು, ಶಾಸಕರ ಮನವೊಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಅಂತಿಮವಾಗಿ ಸಚಿವರ ಒತ್ತಡಕ್ಕೆ ಸಿಎಂ ಮಣಿದು, ನಿಮ್ಮೆಲ್ಲರ ಬೆಂಬಲ ಇರುವವರೆಗೂ ಸಿಎಂ ಆಗಿರ್ತೇನೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ.

ABOUT THE AUTHOR

...view details