ಕರ್ನಾಟಕ

karnataka

ಡಿಕೆಶಿಯೇ ಸಿಎಂ ಆಗಬೇಕೆಂಬ ಒತ್ತಾಯ .. ಸಭೆ ಕರೆದ ಒಕ್ಕಲಿಗ ಮಠಾಧೀಶರು

By

Published : May 14, 2023, 6:23 PM IST

ಬೆಂಗಳೂರಿನಲ್ಲಿ ರಾಜ್ಯದ ಮುಂದಿನ ಸಿಎಂ ಆಯ್ಕೆಗಾಗಿ ಸಿಎಲ್​ಪಿ ಸಭೆ,ಡಿಕೆಶಿ ಸಿಎಂ ಮಾಡುವಂತೆ ಒತ್ತಾಯಿಸಿ ಒಕ್ಕಲಿಗ ಸಮುದಾಯದ ಮಠಾಧೀಶರಿಂದ ಸಭೆ, ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಸಿಎಂ ಹುದ್ದೆಗೆ ಆಯ್ಕೆ ಮಾಡಬೇಕೆಂದು ಹಲವಾರು ಶಾಸಕರು ಒತ್ತಡ. ಎಐಸಿಸಿ ವೀಕ್ಷಕರ ಎದುರು ದಲಿತ ಸಿಎಂ ಪ್ರಸ್ತಾಪ ಮುಂದಿಡಲು ಡಿಸಿಎಂ ಡಾ ಜಿ ಪರಮೇಶ್ವರ್ ನಿರ್ಧಾರ.

Harapanahalli Constituency  Lata met Siddaramaiah
ಡಿಕೆಶಿಯೇ ಸಿಎಂ ಆಗಬೇಕೆಂಬ ಒತ್ತಾಯ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೇಂದ್ರೀಕೃತವಾಗಿ ಸಾಕಷ್ಟು ಬೆಳವಣಿಗೆಗಳು ಜರುಗುತ್ತಿವೆ.

ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ವಿವಿಧ ಒಕ್ಕಲಿಗ ಸಮುದಾಯದ ಮಠಾಧೀಶರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಒತ್ತಾಯಿಸಲು ಸಭೆ ಕರೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷನ ನಿವಾಸದಲ್ಲಿಯೇ ಭೇಟಿಯಾಗಲು ಸಹ ಅವರು ಚಿಂತನೆ ನಡೆಸಿದ್ದಾರೆ. ಈ ಮಧ್ಯ ಸಾಕಷ್ಟು ಚರ್ಚೆ ನಡೆಸಿರುವ ಸ್ವಾಮೀಜಿಗಳು ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ನಾಯಕರನ್ನು ಸಹ ಈ ವಿಚಾರ ಬೆಂಬಲಿಸುವಂತೆ ಕೋರುವ ಸಾಧ್ಯತೆ ಇದೆ.

ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಒತ್ತಾಯಿಸಿ ಕೆಲ ನಾಯಕರುಗಳು ಒತ್ತಡ ಹೇರುತ್ತಿದ್ದು ಶಿವಾನಂದ ವೃತ್ತ ಸಮೀಪದ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಭೇಟಿಯಾದ ಲತಾ ಹರಪನಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಲತಾ ಮಲ್ಲಿಕಾರ್ಜುನ ಅವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾದರು.

ಪಕ್ಷೇತರ ಅಭ್ಯರ್ಥಿ ಹರಪನಹಳ್ಳಿಯಿಂದ ಗೆಲುವು ಸಾಧಿಸಿರುವ ಇವರು ತಮ್ಮ ತಂದೆ ಎಂಪಿ ಪ್ರಕಾಶ್ ಅವರು ಕಾಂಗ್ರೆಸ್​ನಲ್ಲಿಯೇ ಇದ್ದ ಹಿನ್ನೆಲೆ ತಾವು ಸಹ ಕಾಂಗ್ರೆಸ್ ಬೆಂಬಲಿಸುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದ್ದಾರೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಹಿನ್ನೆಲೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದಾದರೆ ಕಾಂಗ್ರೆಸ್ ಬೆಂಬಲಿಸುವುದೇ ಸೂಕ್ತ ಎಂದು ತೀರ್ಮಾನಿಸಿರುವ ಅವರು ಬೇಷರತ್ತಾಗಿ ಕಾಂಗ್ರೆಸ್ ಜತೆ ಕೈಜೋಡಿಸಲು ಮುಂದಾಗಿದ್ದಾರೆ.

ಪರಮೇಶ್ವರ ನಿವಾಸದಲ್ಲಿ ಸಭೆ..ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಸ್ಪರ್ಧೆ ನಡೆಸಿರುವ ಬೆನ್ನಲ್ಲೇ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಸಹ ತಮ್ಮ ಬೆಂಬಲಿಗರೊಂದಿಗೆ ಇಂದು ಸದಾಶಿವನಗರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕು ಎಂದು ಒತ್ತಾಯಿಸಿರುವ ಅವರು, ತಮ್ಮ ಬೆಂಬಲಿಗ ಕಾಂಗ್ರೆಸ್ ಶಾಸಕರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇಂದು ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಎಐಸಿಸಿ ವೀಕ್ಷಕರ ಆಗಮಿಸಲಿದ್ದು ಅವರ ಮುಂದೆ ತಮ್ಮ ಪ್ರಸ್ತಾಪ ಮಂಡಿಸಲು ಅವರು ಚಿಂತನೆ ನಡೆಸಿದ್ದಾರೆ.

ಎಐಸಿಸಿಯಿಂದ ವೀಕ್ಷಕರು ನೇಮಕ..ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇಂದು ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ವೀಕ್ಷಕರನ್ನಾಗಿ ಸುಶೀಲ್ ಕುಮಾರ್ ಸಿಂಧೆ, ಜಿತೇಂದ್ರ ಸಿಂಗ್, ದೀಪಕ್ ಬಬಾರಿಯಾ ಅವರನ್ನು ನೇಮಕ ಮಾಡಿದೆ.

ಪಕ್ಷದ ಬಲಾಬಲ..ಚುನಾವಣಾ ಆಯೋಗದ ಪ್ರಕಾರ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳನ್ನು ಗೆದ್ದು, ಆಡಳಿತಾರೂಢ ಬಿಜೆಪಿ ಪಕ್ಷವನ್ನು ಹೀನಾಯವಾಗಿ ಸೋಲಿಸಿದೆ. ಬಿಜೆಪಿ 66 ಸ್ಥಾನಗಳಲ್ಲಿ ಗೆದ್ದು ಭಾರಿ ಹಿನ್ನಡೆ ಅನುಭವಿಸಿದೆ. ಜೆಡಿಎಸ್​ 19 ಸ್ಥಾನಗಳನ್ನು ಗಳಿಸಿದ್ದು, ಕಿಂಗ್​​ ಮೇಕರ್​ ಆಗುವ ಕನಸು ಭಗ್ನವಾಗಿದೆ. ಪಕ್ಷೇತರರು ಎರಡು ಸ್ಥಾನಗಳಲ್ಲಿ ಜಯಗಳಿಸಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮತ್ತು ಸರ್ವೋದಯ ಕರ್ನಾಟಕ ಪಕ್ಷ ತಲಾ ಒಂದೊಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಇದನ್ನೂಓದಿ:ಇಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ : ಶಿಂಧೆ ಸೇರಿ ಮೂವರು ವೀಕ್ಷಕರ ನೇಮಕ

ABOUT THE AUTHOR

...view details