ಬೆಂಗಳೂರು:ಆನ್ಲೈನ್ ಶಿಕ್ಷಣಕ್ಕೆ ಸಂಬಂಧಿಸದಂತೆ ನ್ಯಾಯಾಲಯದ ಆದೇಶದ ಪ್ರತಿ ಸ್ವೀಕರಿಸಿದ ಬಳಿಕ ಸರ್ಕಾರವು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಲಯದ ಆದೇಶವನ್ನು ಸ್ವೀಕರಿಸುತ್ತೇವೆ: ಸಚಿವ ಸುರೇಶ್ ಕುಮಾರ್
ರಾಜ್ಯ ಸರ್ಕಾರ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಆನ್ಲೈನ್ ಶಿಕ್ಷಣ ಕುರಿತು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ರಾಜ್ಯದಲ್ಲಿ ಆನ್ಲೈನ್ ಶಿಕ್ಷಣದ ಹೆಸರಿನಲ್ಲಿ ಕೆಲವು ಶಾಲೆಗಳಲ್ಲಿ ನಡೆಯುತ್ತಿದ್ದ ವಿದ್ಯಮಾನ ಸರ್ಕಾರದ ಗಮನಕ್ಕೆ ಬಂದಿತ್ತು. ಆನ್ಲೈನ್ ಶಿಕ್ಷಣದ ಹೆಸರಲ್ಲಿ ಖಾಸಗಿ ಶಾಲೆಗಳು ದುಬಾರಿ ಶುಲ್ಕ ಸೇರಿದಂತೆ ಪೋಷಕರ ಮೇಲೆ ಹಲವು ಒತ್ತಡ ಹೇರಲಾಗುತ್ತಿತ್ತು. ಜೊತೆಗೆ ಎಲ್ಕೆಜಿ - ಯುಕೆಜಿ ಮಕ್ಕಳಿಗೆ ಅವೈಜ್ಞಾನಿಕ ಆನ್ಲೈನ್ ಶಿಕ್ಷಣ ಕೊಡುವುದರ ಸಂಬಂಧ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ರಾಜ್ಯ ಸರ್ಕಾರ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೋಷಕರ ಮೇಲಿನ ಶೋಷಣೆ ತಡೆಯಲು ಜೂನ್ 15ರಂದು ಹಾಗೂ 27ರಂದು ಎರಡು ಆದೇಶ ಹೊರಡಿಸಿತ್ತು.
ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಕುರಿತು ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗಿತ್ತು. ನಿನ್ನೆ ಈ ಸಮಿತಿ ವರದಿ ಸಲ್ಲಿಸಿತ್ತು. ಆದರೆ ಇಂದು ಹೈಕೋರ್ಟ್ ಸರ್ಕಾರದ ಎರಡು ಆದೇಶಕ್ಕೂ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಹೈಕೋರ್ಟ್ ತಡೆಯಾಜ್ಞೆಯ ಪೂರ್ಣ ವರದಿ ಪ್ರತಿ ಬರಬೇಕಿದೆ. ಆದೇಶದ ಬಗ್ಗೆ ಅಧ್ಯಯನ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಎಂದು ತಿಳಿಸಿದ್ದಾರೆ.