ಕರ್ನಾಟಕ

karnataka

By

Published : Feb 21, 2023, 1:16 PM IST

ETV Bharat / sports

ಭಾರತದ ಸ್ಪಿನ್​ ದಾಳಿಗೆ ಆಸ್ಟ್ರೇಲಿಯಾ ತತ್ತರ.. ಬ್ಯಾಟಿಂಗ್​ ಸುಧಾರಣೆಗೆ ನೆರವು ನೀಡಲು ಸಿದ್ಧ: ಮಾಜಿ ಕ್ರಿಕೆಟಿಗ

ಬಾರ್ಡರ್​ ಗವಾಸ್ಕರ್​ ಟ್ರೋಫಿ- 2 ಪಂದ್ಯ ಸೋತ ಪ್ರವಾಸಿ ಆಸ್ಟ್ರೇಲಿಯಾ - ಆಸೀಸ್​ ಪ್ರದರ್ಶನಕ್ಕೆ ಹಿರಿಯ ಆಟಗಾರರ ಟೀಕೆ - ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೈಡನ್​ - ಆಸೀಸ್​ ತಂಡಕ್ಕೆ ಮ್ಯಾಥ್ಯೂ ಹೇಡನ್​​​ ನೆರವು

ಮಾಜಿ ಕ್ರಿಕೆಟಿಗ
ಮಾಜಿ ಕ್ರಿಕೆಟಿಗ

ನವದೆಹಲಿ:ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ 2 ಟೆಸ್ಟ್​ ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಆಸ್ಟ್ರೇಲಿಯಾ ತೀವ್ರ ಟೀಕೆಗೆ ಗುರಿಯಾಗಿದೆ. ತಂಡದ ಬ್ಯಾಟಿಂಗ್​ ಸಂಪೂರ್ಣವಾಗಿ ವಿಫಲವಾಗಿದ್ದು, ಎರಡೂ ಪಂದ್ಯಗಳು ಮೂರೇ ದಿನದಲ್ಲಿ ಮುಕ್ತಾಯಗೊಂಡಿವೆ. ಅದರಲ್ಲೂ ಸ್ಪಿನ್​ದ್ವಯರಾದ ಅಶ್ವಿನ್​ ಮತ್ತು ಜಡೇಜಾ ಸ್ಪಿನ್​ ಮಾರಕಾಸ್ತ್ರಕ್ಕೆ ಸಿಲುಕಿ ತಂಡ ನಲುಗಿದೆ. ಸರಣಿ ಸೋಲಿನ ಭೀತಿಯಲ್ಲಿರುವ ಆಸ್ಟ್ರೇಲಿಯಾ ಉಳಿದೆರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಈ ಮಧ್ಯೆ ತಂಡದ ದಯನೀಯ ಪ್ರದರ್ಶನವನ್ನು ಹಿರಿಯ ಮಾಜಿ ಆಟಗಾರರು ಟೀಕಿಸಿದ್ದಾರೆ. ಬ್ಯಾಟಿಂಗ್​, ಬೌಲಿಂಗ್​ ವೈಫಲ್ಯ ಅನುಭವಿಸುತ್ತಿರುವ ತಂಡಕ್ಕೆ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್​ ನೆರವಾಗಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ತಂಡಕ್ಕೆ ಯಾವುದೇ ರೀತಿಯಲ್ಲೂ ಸಹಾಯ ಮಾಡುವೆ. ಪ್ರದರ್ಶನ ಉತ್ತಮಪಡಿಸಿಕೊಂಡು ಸರಣಿ ಸಮಬಲ ಸಾಧಿಸಬೇಕು ಎಂದು ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ, ಭಾರತದ ಸ್ಪಿನ್ನರ್‌ಗಳನ್ನು ಎದುರಿಸಲು ತಂಡ ತಿಣುಕಾಡುತ್ತಿದೆ. ಸೋಲಿನಿಂದ ಹೊರಬರಲು ತಾವು ಸಹಾಯ ಮಾಡಲು ಸಿದ್ಧರಿದ್ದೇವೆ. ತಂಡಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ. ಪ್ರತಿಶತ 100 ರಷ್ಟು ಪ್ರಯತ್ನ ಹಾಕುವೆ. ಭಾರತದ ಎದುರಿನ ಈಗಿನ ತಂಡದ ಪ್ರದರ್ಶನ ತೀರಾ ಕಳಪೆಯಾಗಿದೆ ಎಂದು ಅವರು ಹೇಳಿದ್ದಾರೆ.

ಫ್ರೀಯಾಗಿ ಕೆಲಸ ಮಾಡುವೆ:ತಂಡಕ್ಕೆ ನೆರವು ನೀಡುವ ಸಲುವಾಗಿ ನಾನು ಯಾವುದೇ ಹಣವನ್ನು ಪಡೆಯುವುದಿಲ್ಲ. ಆಟಗಾರರ ಪ್ರದರ್ಶನ ಉತ್ತಮಪಡಿಸಬೇಕಿದೆ. ತಂಡದಿಂದ ಹಿರಿಯ ಆಟಗಾರರನ್ನು ದೂರವಿಡಲು ಸಾಧ್ಯವಿಲ್ಲ. ನೆರವು ಬೇಕಾದಲ್ಲಿ ಪಡೆಯಬೇಕು ಎಂದು ಕ್ರಿಕೆಟ್​ ಆಸ್ಟ್ರೇಲಿಯಾಗೆ ಸಲಹೆ ನೀಡಿದರು.

ಓದಿ:ಬ್ಯಾಟಿಂಗ್‌ನಲ್ಲಿ ಮಿಂಚಿದ ಅಕ್ಷರ್‌, ಬೌಲಿಂಗ್‌ನಲ್ಲಿ ಜಡೇಜಾ ಕಮಾಲ್!: ಇಬ್ಬರ ಮಾತುಕತೆ ನೋಡಿ..

ಇದೇ ವೇಳೆ, ಆಸ್ಟ್ರೇಲಿಯಾದ ಹಿರಿಯ ಆಟಗಾರರ ಮಾರ್ಗದರ್ಶನದಲ್ಲಿ ಯಶಸ್ವಿಯಾದ ಆಟಗಾರರ ಉದಾಹರಣೆ ನೀಡಿದ ಹೇಡನ್​, ರಿಕ್ಕಿ ಪಾಂಟಿಂಗ್​ ಐಪಿಎಲ್​ನ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿದ್ದಾಗ ಭಾರತದ ಶ್ರೇಯಸ್​ ಅಯ್ಯರ್​ ಸಲಹೆಗಳನ್ನು ಪಡೆದುಕೊಂಡು ಕ್ರಿಕೆಟ್​ನಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿ ಇಂಗ್ಲೆಂಡ್‌ನ ಟಿ20 ವಿಶ್ವಕಪ್ ವಿಜಯದ ಭಾಗವಾಗಿದ್ದ ಮ್ಯಾಥ್ಯೂ ವೇಡ್​​ ಆಸ್ಟ್ರೇಲಿಯಾದ ಅತ್ಯುತ್ತಮ ಕೋಚಿಂಗ್ ತಂತ್ರವನ್ನು ಹೇಗೆ ಬಳಸಿಕೊಂಡರು ಎಂಬುದನ್ನು ಹೇಳಿದರು.

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತ ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಮೂರನೇ ಟೆಸ್ಟ್ ಮಾರ್ಚ್ 1 ರಂದು ಇಂದೋರ್‌ನಲ್ಲಿ ಆರಂಭವಾಗಲಿದೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಎರಡು ಟೆಸ್ಟ್‌ಗಳ 4 ಇನಿಂಗ್ಸ್​ಗಳಲ್ಲಿ ಒಟ್ಟು 40 ವಿಕೆಟ್‌ಗಳಲ್ಲಿ 32 ವಿಕೆಟ್‌ಗಳನ್ನು ಕಬಳಿಸಿ ಆಸೀಸ್​ ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ದಾರೆ.

ಆಸ್ಟ್ರೇಲಿಯಾದ ಯಶಸ್ವಿ ಮಾಜಿ ಆರಂಭಿಕ ಆಟಗಾರರಾಗಿರುವ ಮ್ಯಾಥ್ಯೂ ಹೇಡನ್​, ಪಾಕಿಸ್ತಾನದ ಕ್ರಿಕೆಟ್​ ತಂಡದ ತರಬೇತುದಾರರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಓದಿ:'ಕ್ರಿಕೆಟ್​ನಲ್ಲಿ ಮ್ಯಾಚ್​ ಫಿಕ್ಸಿಂಗ್​ಗಿಂತ ಬಹುದೊಡ್ಡ ಭ್ರಷ್ಟಾಚಾರವಿದೆ': ಬಿಸಿಸಿಐ ಮಾಜಿ ಅಧಿಕಾರಿ ಆರೋಪ

ABOUT THE AUTHOR

...view details