ಕರ್ನಾಟಕ

karnataka

By

Published : Aug 8, 2023, 6:44 PM IST

ETV Bharat / sports

Rohit Sharma: ವಿಶ್ವಕಪ್​ ಗೆಲುವಿಗೆ ಸ್ಥಿರ ಪ್ರದರ್ಶನ ಅಗತ್ಯ, ಭಾರತ ಕಪ್​ ಗೆಲ್ಲುವ ಭರವಸೆ ಇದೆ: ರೋಹಿತ್​ ಶರ್ಮಾ

ODI World Cup: ಭಾರತದಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್​ ಆವೃತ್ತಿಯನ್ನು ನೆನಪಿಸಿಕೊಂಡ ರೋಹಿತ್​ ಶರ್ಮಾ, ಮುಂದಿನ ಮಹತ್ವದ ಟೂರ್ನಿಗೆ ಸಿದ್ಧತೆ ಮತ್ತು ಗೆಲುವಿನ ಸಾಧ್ಯತೆಯ ಬಗ್ಗೆ ಮಾತನಾಡಿದರು.

Rohit Sharma
ರೋಹಿತ್​ ಶರ್ಮಾ

ಬಾರ್ಬಡೋಸ್ (ವೆಸ್ಟ್​ ಇಂಡೀಸ್​​): ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮುಂದಿನ ಅಕ್ಟೋಬರ್-ನವೆಂಬರ್​ನಲ್ಲಿ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್​ ಬಗ್ಗೆ ಆಶಾದಾಯಕ ಮಾತುಗಳನ್ನಾಡಿದ್ದಾರೆ. ಒಂದೂವರೆ ತಿಂಗಳು ಸ್ಥಿರ ಪ್ರದರ್ಶನ ನೀಡಿದರೆ ವಿಶ್ವಕಪ್ ಗೆಲ್ಲಲು ಸಾಧ್ಯವಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

"ಈ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ. 2011ರಲ್ಲಿ ಭಾರತೀಯರು ತಂಡಕ್ಕೆ ನೀಡಿದ ಬೆಂಬಲವನ್ನೇ ಈ ಬಾರಿಯೂ ನೀಡುತ್ತಾರೆ ಎಂದು ಭಾವಿಸುತ್ತೇನೆ. 2011ರಲ್ಲಿ ನಾನು ಮನೆಯಿಂದ ವಿಶ್ವಕಪ್​ ಪಂದ್ಯಗಳನ್ನು ನೋಡಿ ಆನಂದಿಸಿದ್ದೆ. ಆ ತಂಡದಲ್ಲಿ ನಾನಿರಲಿಲ್ಲ. ವಿಶ್ವಕಪ್ ಅ​ನ್ನು ಇಷ್ಟು ಹತ್ತಿರದಿಂದಲೂ ನೋಡಿರಲಿಲ್ಲ. ಸುಂದರವಾದ ಪ್ರಶಸ್ತಿಯನ್ನು ಭಾರತಕ್ಕಾಗಿ ಮತ್ತೆ ಗೆಲ್ಲಲು ನಾನು ಉತ್ಸುಕನಾಗಿದ್ದೇನೆ. ಆದರೆ ಇದು ಸುಲಭದ ಹಾದಿಯಲ್ಲ. ಒಂದರಿಂದ ಒಂದೂವರೆ ತಿಂಗಳ ಸ್ಥಿರ ಪ್ರದರ್ಶನದಿಂದ ಮಾತ್ರ ಸಾಧ್ಯವಿದೆ" ಎಂದು ಹಿಟ್​ ಮ್ಯಾನ್​ ಹೇಳಿದರು.

ಇದೇ ವೇಳೆ, 2019ರ ವರ್ಲ್ಡ್​ ಕಪ್​ ಪಂದ್ಯಗಳನ್ನು ರೋಹಿತ್​ ಶರ್ಮಾ ನೆನಪಿಸಿಕೊಂಡರು. "2019ರಲ್ಲಿ ನಾನು ಉತ್ತಮ ಮಾನಸಿಕ ಸ್ಥಿತಿಯಲ್ಲಿದ್ದೆ. ವಿಶ್ವಕಪ್‌ಗೆ ಮೊದಲು ಮಾನಸಿಕ ಮತ್ತು ದೈಹಿಕವಾಗಿ ಚೆನ್ನಾಗಿ ತಯಾರಿ ನಡೆಸಿದ್ದೆ. ಮೊದಲ ಪಂದ್ಯದಲ್ಲಿ ಶತಕ ದಾಖಲಿಸಿದ್ದೆ. ಅಲ್ಲಿಂದ ಉತ್ತಮ ಆರಂಭ ಸಿಕ್ಕಿತ್ತು. ಪಂದ್ಯಾವಳಿಯುದ್ದಕ್ಕೂ ತಾಜಾ ಮನಸ್ಥಿತಿಯಲ್ಲಿ ಬ್ಯಾಟಿಂಗ್​ಗೆ ಇಳಿಯುತ್ತಿದ್ದೆ. ಮತ್ತದೇ ರೀತಿ ಆಡಲು ಇಚ್ಛಿಸುತ್ತೇನೆ" ಎಂದರು.

2019ರ ವಿಶ್ವಕಪ್​ನ ತಂಡದಲ್ಲಿ ಆಡಿದ್ದ ರೋಹಿತ್ ಶರ್ಮಾ 81ರ ಸರಾಸರಿಯಲ್ಲಿ 648 ರನ್ ಪೇರಿಸಿ ಟಾಪ್​ ಸ್ಕೋರ್ ಆಟಗಾರರ ಪಟ್ಟಿಯಲ್ಲಿದ್ದರು. ಟೂರ್ನಿಯಲ್ಲಿ ಶರ್ಮಾ ಐದು ಭರ್ಜರಿ ಶತಕ ಸಿಡಿಸಿದ್ದರು.

ಕಳೆದ ವಿಶ್ವಕಪ್​ನ ಸ್ಮರಣೀಯ ಘಟನೆಗಳನ್ನು ನೆನಪು ಮಾಡಿಕೊಂಡ ಶರ್ಮಾ, "1992ರಲ್ಲಿ ಅಜಯ್​ ಜಡೇಜಾ ಹಿಡಿದ ಕ್ಯಾಚ್​ ಭಾರತದ ಫೀಲ್ಡಿಂಗ್​ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ದರೆ, 1999ರಲ್ಲಿ ಹರ್ಷಲ್ ಗಿಬ್ಸ್ ಅವರ ಕ್ಯಾಚ್ ಮರೆಯಲು ಸಾಧ್ಯವೇ ಇಲ್ಲ. 2003ರಲ್ಲಿ ಭಾರತ ಫೈನಲ್​ನಲ್ಲಿ ಉತ್ತಮವಾಗಿ ಆಡಿತ್ತು. ಸಚಿನ್​ ತೆಂಡೂಲ್ಕರ್​ ಅವರ ಆಟ ಸ್ಮರಣೀಯ. 2011 ನಮ್ಮ ದೇಶಕ್ಕೆ ವಿಶ್ವಕಪ್​ ಬಂದ ವರ್ಷ. ಕ್ವಾರ್ಟರ್​ ಫೈನಲ್​ ಮತ್ತು ಫೈನಲ್​ ಪಂದ್ಯವನ್ನು ಭಾರತವು ಪಾಕಿಸ್ತಾನದ ವಿರುದ್ಧ ಆಡಿತ್ತು. ಎಲ್ಲ ಪಂದ್ಯಕ್ಕಿಂತ ಹೆಚ್ಚು ಒತ್ತಡ ನಮ್ಮ ತಂಡದ ಮೇಲಿತ್ತು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಉತ್ತಮ ಪ್ರದರ್ಶನ ನೀಡಿದರು. ಅಂದು ಭಾರತ ತಂಡಕ್ಕೆ ನೀಡಿದ್ದ ಬೆಂಬಲವನ್ನು ಅಭಿಮಾನಿಗಳು ಈ ಬಾರಿಯೂ ನೀಡಬೇಕು" ಎಂದು ಮನವಿ ಮಾಡಿದರು.

"ವಿಶ್ವಕಪ್​ ಮೇಲೆ ಎಲ್ಲರ ಕಣ್ಣಿದೆ. ನಾವು ಯಾವುದೇ ಮೈದಾನಕ್ಕೆ ಹೋದರೂ, ನಮಗೆ ದೊಡ್ಡ ಬೆಂಬಲ ಸಿಗುತ್ತದೆ. ಇದು ವಿಶ್ವಕಪ್. ಆದ್ದರಿಂದ ಎಲ್ಲರೂ ಅದನ್ನೇ ಎದುರು ನೋಡುತ್ತಿದ್ದಾರೆ. 12 ವರ್ಷಗಳ ನಂತರ ಭಾರತಕ್ಕೆ ವಿಶ್ವಕಪ್ ಮರಳುತ್ತಿದೆ. ಜನರು ತುಂಬಾ ಉತ್ಸುಕರಾಗಿದ್ದಾರೆ. ನಾವು ಈಗಲೇ ಅಭಿಮಾನಿಗಳಲ್ಲಿ ಸಂಭ್ರಮವನ್ನು ಕಾಣುತ್ತಿದ್ದೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:IND vs WI 3rd T20: ಕಿಶನ್​ಗೆ ವಿಶ್ರಾಂತಿ ಕೊಟ್ಟು ಜೈಸ್ವಾಲ್​ಗೆ ಅವಕಾಶ ನೀಡಿ: ವಾಸಿಂ ಜಾಫರ್

ABOUT THE AUTHOR

...view details