ದುಬೈ :ಟೂರ್ನಿಯ ಆರಂಭಕ್ಕೂ ಮುನ್ನವೇ ಹೆಚ್ಚು ನಿರೀಕ್ಷೆ ಮೂಡಿಸಿದ್ದ ಕರ್ನಾಟಕದ ಯುವ ಪ್ರತಿಭೆ ದೇವದತ್ ಪಡಿಕ್ಕಲ್ ತಮ್ಮ ಸಾಮರ್ಥ್ಯವನ್ನು ಮೊದಲ ಪಂದ್ಯದಲ್ಲೇ ತೋರಿಸಿದ್ದಾರೆ.
ಕೆಪಿಎಲ್ನಿಂದ ಕರ್ನಾಟಕ ತಂಡಕ್ಕೆ ಬಡ್ತಿ ಪಡೆದಿದ್ದ ದೇವದತ್ ಪಡಿಕ್ಕಲ್, 2019ರ ಆವೃತ್ತಿಯ ದೇಸಿ ಋತುವಿನಲ್ಲಿ ರನ್ಗಳ ಹೊಳೆಯನ್ನೇ ಹರಿಸಿದ್ದರು. ಇದೀಗ ಐಪಿಎಲ್ನಲ್ಲೂ ಅರ್ಧಶತಕ ಬಾರಿಸುವ ಮೂಲಕ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ನೋಡಿ ಫಿದಾ ಆಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಟ್ವೀಟ್ನಲ್ಲಿ ಯುವ ಕ್ರಿಕೆಟಿಗನ ಆಟವನ್ನು ನೋಡುವುದಕ್ಕೆ ಸೊಗಸಾಗಿದೆ ಎಂದಿದ್ದಾರೆ.
"ಆರ್ಸಿಬಿ ತಂಡದ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ನೋಡಲು ತುಂಬಾ ಅನಂದಿಸುತ್ತೇನೆ. ಎಡಗೈ ಆಟಗಾರರ ಆಟ ಸಂತೋಷಕರವಾಗಿದೆ " ಎಂದು ಸ್ವತಃ ಎಡಗೈ ಬ್ಯಾಟ್ಸ್ಮನ್ ಆಗಿರುವ ದಾದಾ ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಐಪಿಎಲ್ನ ಮೊದಲ 3 ಪಂದ್ಯಗಳು ಯಶಸ್ವಿಯಾಗಿ ನಡೆದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಅವರು. ಮುಂದಿನ 60 ದಿನಗಳು ಮಹಿಳಾ ಮತ್ತು ಪುರುಷರ ಐಪಿಲ್ನಲ್ಲಿ ಇಂತಹ ಸಾಕಷ್ಟು ಉತ್ತಮ ಪಂದ್ಯಗಳನ್ನು ನಾವು ಕಾಣುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ.
20 ವರ್ಷದ ಪಡಿಕ್ಕಲ್ ಕಳೆದ ವರ್ಷ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ 4 ಅರ್ಧಶತಕ ಸಹಿತ 310ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಬಿಸಿಸಿಐ ಆಯೋಜನೆ ಮಾಡುವ ವಿಜಯ್ ಹಜಾರೆ(ಏಕದಿನ) ಟ್ರೋಫಿಯಲ್ಲೂ ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್ ನಡೆಸಿ 2 ಶತಕ ಹಾಗೂ 5 ಅರ್ಧಶತಕ ಸಹಿತ 609 ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲೂ ಬರೋಬ್ಬರಿ 580 ರನ್ ಗಳಿಸಿ ಮಿಂಚಿದ್ದರು.