ಕರ್ನಾಟಕ

karnataka

By

Published : Jan 7, 2023, 7:18 PM IST

ETV Bharat / sports

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಚೇತನ್ ಶರ್ಮಾ ಮರು ಆಯ್ಕೆ

ಆಯ್ಕೆ ಸಮಿತಿ ಅಧ್ಯಕ್ಷರಾಗಿ ಚೇತನ್ ಶರ್ಮಾ ಮರು ಆಯ್ಕೆ - ಚೇತನ್ ಶರ್ಮಾ ತಂಡದಲ್ಲಿ ನಾಲ್ವರು ಹೊಸಬರಿಗೆ ಮಣೆ - ಕನ್ನಡಿಗ ವೆಂಕಟೇಶ್​ ಪ್ರಸಾದ್​ಗೆ ಸಿಕ್ಕಿಲ್ಲ ಸ್ಥಾನ.

Chetan Sharma
ಚೇತನ್ ಶರ್ಮಾ

ಮುಂಬೈ:ಟಿ 20 ವಿಶ್ವಕಪ್​ನಲ್ಲಿ ಟೀ ಇಂಡಿಯಾ ಕಳಪೆ ಪ್ರದರ್ಶನ ನೀಡಿದ ಬಳಿಕ ಇಡೀ ಆಯ್ಕೆ ಮಂಡಳಿಯನ್ನೇ ಬಿಸಿಸಿಐ ವಿಸರ್ಜನೆ ಮಾಡಿತ್ತು. ಇದಾದ 50 ದಿನಗಳ ಬಳಿಕ ಕೊನೆಗೂ ಭಾರತ ಕ್ರಿಕೆಟ್ ತಂಡದ ನೂತನ ಆಯ್ಕೆ ಸಮಿತಿಯನ್ನು ಪ್ರಕಟಿಸಿದೆ. ಹೊಸ ಐದು ಜನ ಸದಸ್ಯರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಅದರಲ್ಲಿ ನಾಲ್ವರು ಹೊಸಬರಿದ್ದಾರೆ. ಚೇತನ್​ ಶರ್ಮಾ ಅವರನ್ನು ಮರು ಆಯ್ಕೆ ಮಾಡಲಾಗಿದೆ.

ಮುಖ್ಯ ಆಯ್ಕೆಗಾರರಾಗಿ ಚೇತನ್​ ಶರ್ಮಾ:ಚೇತನ್​ ಶರ್ಮಾ ಈ ಹಿಂದಿನ ಆಯ್ಕೆ ಸಮಿತಿಯಲ್ಲಿ ಇದ್ದರು. ಅವರನ್ನು ಮರು ಆಯ್ಕೆ ಮಾಡಲಾಗಿದ್ದು, ಅವರ ಜೊತೆಗೆ ಉಳಿದ ನಾಲ್ವರು ಮೊದಲ ಬಾರಿಗೆ ಹಿರಿಯ ಆಯ್ಕೆ ಸಮಿತಿಯ ಭಾಗವಾಗಿದ್ದಾರೆ. ಇದರಲ್ಲಿ ಮಾಜಿ ಟೆಸ್ಟ್ ಕ್ರಿಕೆಟಿಗರಾದ ಸಲೀಲ್ ಅಂಕೋಲಾ, ಶಿವಸುಂದರ್ ದಾಸ್, ಸುಬ್ರೋತೊ ಬ್ಯಾನರ್ಜಿ ಮತ್ತು ಶ್ರೀಧರನ್ ಶರತ್ ಸ್ಥಾನ ಪಡೆದಿದ್ದಾರೆ.

ಕ್ರಿಕೆಟ್ ಸಲಹಾ ಸಮಿತಿಯಿಂದ ಆಯ್ಕೆ:ವಿಸರ್ಜನೆಗೊಂಡ ಭಾರತ ಕ್ರಿಕೆಟ್​ ತಂಡದ ಆಯ್ಕೆ ಸಮಿತಿಗೆ ಹೊಸ ಸದಸ್ಯರ ನೇಮಕಕ್ಕಾಗಿ ಅರ್ಜಿ ಕರೆಯಲಾಗಿತ್ತು. ಸದಸ್ಯರ ನೇಮಕಕ್ಕಾಗಿ ಕ್ರಿಕೆಟ್ ಸಲಹಾ ಸಮಿತಿಗೆ ತಿಳಿಸಲಾಗಿತ್ತು. ಅದರಂತೆ ಸಲಹಾ ಸಮಿತಿಯಲ್ಲಿ ಮಾಜಿ ಕ್ರಿಕೆಟಿಗರಾದ ಅಶೋಕ್ ಮಲ್ಹೋತ್ರಾ, ಜತಿನ್ ಪರಂಜ್ಪೆ ಮತ್ತು ಸುಲಕ್ಷಣಾ ನಾಯಕ್ ಇದ್ದರು.

600 ಅರ್ಜಿ ಸ್ವೀಕಾರ:ಆಯ್ಕೆ ಸಮಿತಿ ವಿಸರ್ಜನೆ ಗೊಳಿಸಿದ ನಂತರ 18ನೇ ನವೆಂಬರ್ 2022 ರಂದು ಬಿಸಿಸಿಐ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಆಹ್ವಾನಿಸಿತ್ತು. ಇದರಲ್ಲಿ ಐದು ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿತ್ತು ಮತ್ತು ಆಯಾ ಹುದ್ದೆಗಳಿಗೆ ಮಾನದಂಡಗಳನ್ನು ತಿಳಿಸಿತ್ತು. ಅದರಂತೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ 600 ಅರ್ಜಿಗಳನ್ನು ಸ್ವೀಕರಿಸಿತ್ತು. ಕ್ರಿಕೆಟ್ ಸಲಹಾ ಸಮಿತಿ 600 ಅರ್ಜಿಗಳಲ್ಲಿ 11 ಜನರನ್ನು ಶಾರ್ಟ್​ ಲಿಸ್ಟ್​ ಮಾಡಿ ಪ್ರಕಟಿಸಿತ್ತು. ಅದರಲ್ಲಿ ಐವರನ್ನು ಆಯ್ಕೆ ಮಾಡಿದ್ದು, ನಾಲ್ವರು ಹೊಸಬರನ್ನು ಸಮಿತಿಗೆ ಸೇರಿಸಿದೆ. ಚೇತನ್​ ಶರ್ಮಾ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಿದೆ.

ವೆಂಕಟೇಶ್​ ಪ್ರಸಾದ್ ಅರ್ಜಿ ತಿರಸ್ಕೃತ:ಟೀ ಇಂಡಿಯಾದ ಬೌಲಿಂಗ್​ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದವೆಂಕಟೇಶ್ ಪ್ರಸಾದ್ ಆಯ್ಕೆ ಆಗುತ್ತಾರೆ ಎಂಬ ಮಾತುಗಳು ಬಂದಿದ್ದವು. ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಗೆ ಬಂದಿದ್ದ 600 ಅರ್ಜಿಗಳಲ್ಲಿ ವೆಂಕಟೇಶ್ ಪ್ರಸಾದ್​ ಹೆಸರು ಸಹ ಇತ್ತು. ಆದರೆ ವೆಂಕಟೇಶ್ ಪ್ರಸಾದ್ ಅನುಭವಕ್ಕೆ ಬೆಲೆ ಹಾಕದ ಬಿಸಿಸಿಐ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿಲ್ಲ. ಇವರಿಗೂ ಮುನ್ನ ಟೀಂ ಇಂಡಿಯಾದ ಮಾಜಿ ವೇಗಿ ಅಜಿತ್​ ಅಗರ್ಕರ್ ಕೂಡ ಈ ಸ್ಥಾನದ ಆಕಾಂಕ್ಷಿಯಾಗಿದ್ದರು.

ಅರ್ಜಿ ಸಲ್ಲಿಸಲಿ ಇದ್ದ ಅರ್ಹತೆಗಳೇನು:ಭಾರತ ಪುರುಷರ ಕ್ರಿಕೆಟ್​ ತಂಡದ ಆಯ್ಕೆ ಸಮಿತಿಗೆ ನೇಮಕವಾಗಲು ಅಭ್ಯರ್ಥಿಗಳು ಬಿಸಿಸಿಐ ನಿಗದಿಪಡಿಸಿದ ಮಾನದಂಡದ ಪ್ರಕಾರ, ಕನಿಷ್ಠ 7 ಟೆಸ್ಟ್, 30 ಪ್ರಥಮ ದರ್ಜೆ, ಅಥವಾ 10 ಏಕದಿನ ಪಂದ್ಯಗಳನ್ನು ಆಡಿರಬೇಕು. ಕನಿಷ್ಠ ಐದು ವರ್ಷಗಳ ಹಿಂದೆಯೇ ಕ್ರಿಕೆಟ್​ನಿಂದ ನಿವೃತ್ತರಾಗಿರಬೇಕೆಂಬ ಷರತ್ತು ವಿಧಿಸಿತ್ತು. ಅರ್ಜಿ ಸಲ್ಲಿಸಲು ನ.28ಕ್ಕೆ ಕೊನೆಯ ದಿನವಾಗಿತ್ತು.

ಇದನ್ನೂ ಓದಿ:ಭಾರತ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ ವಿಚಾರ: ಮಾಜಿ ಅಧ್ಯಕ್ಷ ಚೇತನ್​ ಶರ್ಮಾಗೆ ಮತ್ತೊಂದು ಚಾನ್ಸ್​?

ABOUT THE AUTHOR

...view details