ಕರ್ನಾಟಕ

karnataka

ETV Bharat / sitara

ಪರಿಸರ ದಿನದ ವಿಶೇಷ.. ಇಲ್ಲಿವೆ ಅರಣ್ಯಕ್ಕೆ ಸಂಬಂಧಿಸಿದ ಕನ್ನಡದ ಸಿನಿಮಾಗಳು..

ಕನ್ನಡದಲ್ಲಿ ಕಾಡು ಇದ್ರೆ ನಾಡು ಎಂಬ ಸಂದೇಶ ಸಾರುವ ಸಾಕಷ್ಟು ಚಿತ್ರಗಳು ಬಂದಿವೆ. ಸಿನಿಮಾ ಮೂಲಕ ಜನರಿಗೆ ಕಾಡಿನ ಮಹತ್ವ ಸಾರುವ ಕೆಲಸವನ್ನು ಕನ್ನಡ ಚಿತ್ರರ‌ಂಗ ಮಾಡಿದೆ.

By

Published : Jun 5, 2020, 9:14 PM IST

Forest saving Related kannad Film
ಪರಿಸರ ದಿನದ ವಿಶೇಷ : ಇಲ್ಲಿವೆ ಅರಣ್ಯಕ್ಕೆ ಸಂಬಂಧಿಸಿದ ಕನ್ನಡದ ಸಿನಿಮಾಗಳು

ಇಂದು ವಿಶ್ವ ಪರಿಸರ ದಿನ. ಕಾಡಿದ್ರೆ ನಾಡು ಎಂಬುದು ಕೇವಲ ಮಾತಿಗಷ್ಟೇ ಸಿಮೀತವಾಗಿದೆ. ಸರ್ಕಾರ ಅರಣ್ಯ ಕಾಪಾಡುವ ನಿಟ್ಟಿನಲ್ಲಿ ಹಲವು ಯೋಜನೆ ಜಾರಿಗೊಳಿಸಿದೆ. ಅದೇ ರೀತಿ ಕನ್ನಡ ಚಿತ್ರರಂಗವೂ ಕೂಡ ಅರಣ್ಯ ಕಾಪಾಡುವ ನಿಟ್ಟಿನಲ್ಲಿ ತನ್ನದೇ ಆದ ಕೊಡುಗೆ ನೀಡಿದೆ.

ಕನ್ನಡದಲ್ಲಿ ಕಾಡು ಇದ್ರೆ ನಾಡು ಎಂಬ ಸಂದೇಶ ಸಾರುವ ಸಾಕಷ್ಟು ಚಿತ್ರಗಳು ಬಂದಿವೆ. ಸಿನಿಮಾ ಮೂಲಕ ಜನರಿಗೆ ಕಾಡಿನ ಮಹತ್ವ ಸಾರುವ ಕೆಲಸವನ್ನು ಕನ್ನಡ ಚಿತ್ರರ‌ಂಗ ಮಾಡಿದೆ. ಈ ನಿಟ್ಟಿನಲ್ಲಿ ಕಾಡಿದ್ರೆ ನಾಡು ಎಂಬ ಸಂದೇಶ ಸಾರುವ ಚಿತ್ರಗಳತ್ತ ಕಣ್ಣಾಡಿಸುವುದಾದರೆ, ಮೊದಲಿಗೆ..

ಗಂಧದ ಗುಡಿ
ಡಾ. ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ "ಗಂಧದ ಗುಡಿ" ಅರಣ್ಯದ ಮಹತ್ವ ಸಾರಿದ ಚಿತ್ರ.ಈ ಚಿತ್ರದಲ್ಲಿ ಅಣ್ಣಾವ್ರು ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ನಟಿಸಿದ್ರು. ಈ ಚಿತ್ರದಲ್ಲಿ ಮನುಷ್ಯ ತನ್ನ ದುರಾಸೆಯಿಂದ ಅರಣ್ಯವನ್ನು ಯಾವ ರೀತಿ ನಾಶ ಮಾಡ್ತಾನೆ ಹಾಗೂ ಅರಣ್ಯ ನಾಶದಿಂದ ಆಗುವ ಸಮಸ್ಯೆಗಳ ಬಗ್ಗೆ ಹೇಳಲಾಗಿದೆ.

ವಿಶೇಷ ಅಂದರೆ ಈ ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿದ್ದರು. ಅಲ್ಲದೆ ಈ ಚಿತ್ರವನ್ನು ಪ್ರಾಣಿ ಪ್ರಿಯ ಎಂಪಿ ಶಂಕರ್ ಪ್ರಮುಖ ಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣ ಮಾಡಿದ್ರು. ಇನ್ನು ಚಿತ್ರದಲ್ಲಿ ಕಲ್ಪನಾ ನಾಯಕಿಯಾಗಿ ನಟಿಸಿದ್ದರು.

ಕಾಡಿನ ರಾಜ

ಇದಾದ ನಂತರ 1985 ರಲ್ಲಿ ಟೈಗರ್ ಪ್ರಭಾಕರ್ ಅಭಿನಯದ "ಕಾಡಿನ ರಾಜ" ಚಿತ್ರ ಕೂಡ ಜನರಲ್ಲಿ ಅರಣ್ಯ ಸಂರಕ್ಷಣೆಯ ಮಹತ್ವ ಸಾರಿತ್ತು. ಈ ಚಿತ್ರವನ್ನುಎ ಟಿ ರಘು, ನಿರ್ದೇಶನ ಮಾಡಿದ್ದರು. ನಾಯಕಿಯಾಗಿ ದೀಪಾ ನಟಿಸಿದ್ರೆ, ಸುದೀರ್ ಖಳನಟನ ಪಾತ್ರದಲ್ಲಿ ಮಿಂಚಿದ್ರು.

ಆಫ್ರಿಕಾದಲ್ಲಿ ಶೀಲಾ

ಇದಲ್ಲದೆ ಕನ್ನಡದಲ್ಲಿ ವಿಭಿನ್ನ ಪ್ರಯತ್ನದ ಚಿತ್ರಗಳ ಮಾಡಿ ಸೈ ಅನಿಸಿಕೊಂಡಿದ್ದ ಕರ್ನಾಟಕದ ಕುಳ್ಳ ದ್ವಾರಕೀಶ್ 1986ರಲ್ಲಿ ಆಫ್ರಿಕಾದಲ್ಲಿ ಶೀಲಾ ಎಂಬ ಚಿತ್ರವನ್ನು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಮಾಡಿದ್ರು. ಈ ಚಿತ್ರದಲ್ಲಿ ಚರಣ್ ರಾಜ್, ಶಕೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ರು. ಪುಟ್ಟ ಮಗುವೊಂದು ಕಳೆದು ಹೋಗಿ ಕಾಡಿನ ಪ್ರಾಣಿಗಳ ಕೈಗೆ ಸಿಕ್ಕಿ ಪ್ರಾಣಿಗಳು ಆ ಮಗುವನ್ನು ಹೇಗೆ ಪೋಷಿಸುತ್ತವೆ ಎಂಬುದನ್ನು ತೋರಿಸಲಾಗಿದೆ. ಪ್ರಾಣಿಗಳಲ್ಲಿ ಮಾನವರಿಗಿಂತಲೂ ಹೆಚ್ಚು ಮಾನವೀಯತೆ ಇರುತ್ತೆ ಎಂಬ ಅಂಶವನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು.

ಈ ಚಿತ್ರವನ್ನು ಆಫ್ರಿಕಾದ ಕಾಡಿನಲ್ಲಿ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ, ಈ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಸಕ್ಸಸ್ ಕಾಣಲಿಲ್ಲ ಎಂಬುದೇ ಬೇಸರದ ಸಂಗತಿ.

ಜಯಸಿಂಹ

1987 ಸಾಹಸ ಸಿಂಹ ವಿಷ್ಣುವರ್ಧನ್ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದ "ಜಯಸಿಂಹ" ಚಿತ್ರ ಕೂಡ ಕಾಡಿನ ಹಿನ್ನೆಲೆಯುಳ್ಳ ಕಥೆಯಲ್ಲಿ ಬಂದು, ಅರಣ್ಯ ಹಾಗೂ ಪ್ರಾಣಿ ಪಕ್ಷಿಗಳ ಮಹತ್ವ ಹಾಗೂ ಸ‌ಂರಕ್ಷಣೆ ‌ಬಗ್ಗೆ‌ ಸಿನಿಪ್ರಿಯರಿಗೆ ಮನವರಿಕೆ ಮಾಡಿಕೊಟ್ಟಿತ್ತು. ಚಿತ್ರದಲ್ಲಿ ಸಾಹಸ ಸಿಂಹನ ಜೊತೆ ವರಲಕ್ಷಿ ನಾಯಕಿಯಾಗಿ ಮಿಂಚಿದ್ರೆ, ಸಸ್ಪೆನ್ಸ್ ಥ್ರೀಲರ್ ಸ್ಪೆಷಲ್ ಡೈರೆಕ್ಟರ್ ಪಿ ವಾಸು ಆ್ಯಕ್ಷನ್-ಕಟ್ ಹೇಳಿದ್ರು.

ಮೃಗಾಲಯ

ಇನ್ನು ಹಿರಿಯರ ಹಾದಿಯಲ್ಲೇ ಸಾಗಿದ ರೆಬೆಲ್ ಸ್ಟಾರ್ ಅಂಬರೀಶ್ ಕೂಡ 1986ರಲ್ಲಿ "ಮೃಗಾಲಯ" ಎಂಬ ಅರಣ್ಯ ಹಾಗೂ ಪ್ರಾಣಿ ಪಕ್ಷಿಗಳ ಮಹತ್ವ ಸಾರುವ ಚಿತ್ರದಲ್ಲಿ ಝೂ ಆಫೀಸರ್ ಪಾತ್ರದಲ್ಲಿ ಮಿಂಚಿದ್ರು. ಈ ಚಿತ್ರದಲ್ಲಿ ಮಾನವ ತನ್ನ ದುರಾಸೆಗೆ ಪ್ರಾಣಿ ಪಕ್ಷಿಗಳು ಹಾಗೂ ಅರಣ್ಯವನ್ನು ದುರುಪಯೋಗ ಮಾಡಿಕೊಳ್ತಾನೆ ಎಂಬುದರ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಚಿತ್ರಕ್ಕೆ ವಿ ಸೋಮಶೇಖರ್ ಆ್ಯಕ್ಷನ್-ಕಟ್​ ಹೇಳಿದ್ದಾರೆ. ಚಿತ್ರದಲ್ಲಿ ಅಂಬಿ ಜೊತೆ ಗೀತಾ ಡ್ಯುಯೆಟ್ ಆಡಿದ್ರು. ಚಿತ್ರದಲ್ಲಿ ಎಂಪಿ ಶಂಕರ್, ಸುಧೀರ್, ಸುಂದರ್ ಕೃಷ್ಣ ಪ್ರಮುಖ ಪಾತ್ರಗಳನ್ನ ನಿಭಾಯಿಸಿದ್ರು.

ಗಂಧದ ಗುಡಿ 2

ಇದೇ ಸಂಸ್ಕೃತಿ ಮುಂದುಮರೆದು 1994ರಲ್ಲಿ ಅಣ್ಣಾವ್ರು ನಟಿಸಿದ ಗಂಧದ ಗುಡಿ ಚಿತ್ರದ ಮುಂದುವರೆದ ಭಾಗವಾಗಿ "ಗಂಧದ ಗುಡಿ ಭಾಗ 2" ಚಿತ್ರವನ್ನು ಎಂಪಿ ಶಂಕರ್ ಅವರೇ ನಿರ್ಮಾಣಮಾಡಿದ್ರು. ಆದರೆ, ಚಿತ್ರದಲ್ಲಿ ನಾಯಕನಾಗಿ ಅಣ್ಣಾವ್ರ ಜಾಗದಲ್ಲಿ ಅವರ ಮಗ ಶಿವರಾಜ್​ಕುಮಾರ್​​ ನಟಿಸಿ ಸೈ ಅನಿಸಿಕೊಂಡಿದ್ರು. ಚಿತ್ರದಲ್ಲಿ ಟೈಗರ್ ಪ್ರಭಾಕರ್ ಕೂಡ ಪ್ರಮುಖಪಾತ್ರ ನಿಭಾಯಿಸಿದ್ರು. ಅಲ್ಲದೆ ಅಣ್ಣಾವ್ರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ರು.

ಇದೇ ರೀತಿ ಕನ್ನಡದಲ್ಲಿ ಅರಣ್ಯ ಸಂಪತ್ತಿನ ಮಹತ್ವ ಸಾರುವ ಚಿತ್ರಗಳು ಬಂದಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಅಂದ್ರೆ ತಪ್ಪಲ್ಲ.

ABOUT THE AUTHOR

...view details