ಕೃಷ್ಣಾ ( ಆಂಧ್ರಪ್ರದೇಶ): ಪ್ರೀತಿಸಿ ಮದುವೆಯಾದ ಯುವತಿ ಜೊತೆ ಸಂಸಾರಕ್ಕೆ ಹಿರಿಯರು ಬಿಡದ ಕಾರಣ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಪೆದ್ದವರಂ ಗ್ರಾಮದ ಪ್ರಸನ್ನ ಕುಮಾರ್ (25) ಪಾಲಿಟೆಕ್ನಿಕ್ ಡಿಪ್ಲೋಮಾ ಮುಗಿಸಿ ಬಿಹಾರದಲ್ಲಿ ಉದ್ಯೋಗ ಮಾಡುತ್ತಿದ್ದ. ಇನ್ನು ಯುವಕ ತನ್ನ ಗ್ರಾಮದ ಪಕ್ಕದ ಹಳ್ಳಿ ಕಾಂಡ್ರಪಾಡುವಿನ ಯವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.
ಯುವತಿ ಗುಂಡ್ಲಪಲ್ಲೆರು ಕಾಲೇಜಿನಲ್ಲಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಾರೆ. ಐದು ವರ್ಷದಿಂದ ಪ್ರೀತಿಸುತ್ತಿದ್ದ ಪ್ರಸನ್ನ ಕುಮಾರ 2015ರಲ್ಲಿ ಯುವತಿಯೊಂದಿಗೆ ರಹಸ್ಯವಾಗಿ ಮದುವೆಯಾಗಿದ್ದ. ಈ ವಿಷಯ ಎರಡು ತಿಂಗಳ ಹಿಂದೆಯೇ ಹಿರಿಯರಿಗೆ ಗೊತ್ತಾಗಿದ್ದು, ಇವರಿಬ್ಬರನ್ನು ದೂರ ಮಾಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಪ್ರಸನ್ನ ಕುಮಾರ ತಮ್ಮ ಪೋಷಕರೊಂದಿಗೆ ಯುವತಿ ಕುಟುಂಬಸ್ಥರೊಡನೆ ಪಂಚಾಯಿತಿ ನಡೆಸಿದ್ದರು. ಆದ್ರೆ ಯುವತಿ ಪೋಷಕರು ಪ್ರಸನ್ನಕುಮಾರ ಜೊತೆ ಮಗಳನ್ನು ಸಂಸಾರಕ್ಕೆ ಕಳುಹಿಸಲು ನಿರಾಕರಿಸಿದ್ದಾರೆ. ಇದರಿಂದ ಮನಸ್ತಾಪಗೊಂಡ ಪ್ರಸನ್ನಕುಮಾರ ಮದ್ಯದಲ್ಲಿ ಕೀಟನಾಶಕ ಮಿಕ್ಸ್ ಮಾಡಿ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಒಬ್ಬನೇ ಮಗನನ್ನು ಕಳೆದುಕೊಂಡ ಪ್ರಸನ್ನಕುಮಾರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.