ಕರ್ನಾಟಕ

karnataka

By ETV Bharat Karnataka Team

Published : Oct 21, 2023, 5:07 PM IST

Updated : Oct 21, 2023, 7:59 PM IST

ETV Bharat / international

4 ವರ್ಷಗಳ ಗಡೀಪಾರು ಶಿಕ್ಷೆ ಬಳಿಕ ಪಾಕಿಸ್ತಾನಕ್ಕೆ ಮರಳಿದ ಮಾಜಿ ಪ್ರಧಾನಿ ನವಾಜ್ ಷರೀಫ್​

ಮಾಜಿ ಪ್ರಧಾನಿ ನವಾಜ್​ ಷರೀಫ್​ ಅವರು 4 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಮರಳಿದ್ದಾರೆ. ಅವರ ವಿರುದ್ಧದ ಭ್ರಷ್ಟಾಚಾರ ಕೇಸ್​ನಲ್ಲಿ ಗಡೀಪಾರು ಮಾಡಲಾಗಿತ್ತು.

ಪಾಕಿಸ್ತಾನಕ್ಕೆ ಮರಳಿದ ಮಾಜಿ ಪ್ರಧಾನಿ ನವಾಜ್ ಷರೀಫ್​
ಪಾಕಿಸ್ತಾನಕ್ಕೆ ಮರಳಿದ ಮಾಜಿ ಪ್ರಧಾನಿ ನವಾಜ್ ಷರೀಫ್​

ಇಸ್ಲಾಮಾಬಾದ್(ಪಾಕಿಸ್ತಾನ) :ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಗಡೀಪಾರಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಲಂಡನ್‌ನಿಂದ 4 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಮರಳಿದ್ದಾರೆ. ಇಂದು ಅವರು ಇಸ್ಲಾಮಾಬಾದ್​ನ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮುಂದಿನ ಚುನಾವಣೆಯಲ್ಲಿ ಅವರು ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್​ - ನವಾಜ್​ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಕಾನೂನು ಸಚಿವ ಅಜಮ್ ತಾರಾರ್ ಮತ್ತು ಪಕ್ಷದ ಮುಖಂಡರು ಸೇರಿದಂತೆ ಪಕ್ಷದ ಕಾರ್ಯಕರ್ತಕರು, ಬೆಂಬಲಿಗರು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ಜೊತೆಗೆ ಪಕ್ಷದ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ರ್‍ಯಾಲಿ ಕೂಡ ನಡೆಸಿದ್ದರು.

ಈ ಬಗ್ಗೆ ತನ್ನ ಅಧಿಕೃತ ಎಕ್ಸ್​ನಲ್ಲಿ ಹಂಚಿಕೊಂಡಿರುವ ಪಿಎಂಎಲ್​-ಎನ್​ ಪಕ್ಷ, 'ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ತಾಯ್ನಾಡಿಗೆ ಮರಳಿದ್ದಾರೆ. ಇನ್ನು ಮುಂದೆ ರಾಜಕೀಯದಲ್ಲಿ ಹೊಸ ಮನ್ವಂತರ ಶುರುವಾಗಲಿದೆ' ಎಂದಿದೆ. 73 ವರ್ಷದ ಷರೀಫ್​ ವಿರುದ್ಧ ಕೇಳಿಬಂದಿದ್ದ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿ ಎಂದು ಕೋರ್ಟ್​ ಹೇಳಿತ್ತು. ಜೊತೆಗೆ 8 ಮಿಲಿಯನ್​ ಯುರೋ ದಂಡದ ಜೊತೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ನವಾಜ್, ಮರಿಯಮ್​ ಮತ್ತು ಕ್ಯಾಪ್ಟನ್ ಮುಹಮ್ಮದ್ ಸಫ್ದರ್ ಅವರನ್ನು ಬಂಧಿಸಲಾಗಿತ್ತು.

ಮುಂದಿನ ವಿಚಾರಣೆಯಲ್ಲಿ ಕೋರ್ಟ್​, ಮೂವರನ್ನೂ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಜೊತೆಗೆ ನೀಡಲಾಗಿದ್ದ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಯಿತು. ಇದಾದ ಬಳಿಕ ಅವರನ್ನು 2020 ರಲ್ಲಿ ಗಡೀಪಾರು ಮಾಡಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ನೋಡಿಕೊಳ್ಳಲು ಅವರು ಆ ಸಮಯದಲ್ಲಿ ಲಂಡನ್‌ಗೆ ತೆರಳಿದರು.

ಮುಂದಿನ ಪ್ರಧಾನಿ ಘೋಷಣೆ:ಷರೀಫ್​ ಅವರು ಪಾಕಿಸ್ತಾನಕ್ಕೆ ಹಿಂದಿರುಗುವ ಬಗ್ಗೆ ತಿಳಿದ ಪಕ್ಷದ ಕಾರ್ಯಕರ್ತರು ಮತ್ತವರ ಬೆಂಬಲಿಗರು ದೊಡ್ಡ ಮಟ್ಟದಲ್ಲಿ ವಿಮಾನ ನಿಲ್ದಾಣದ ಮುಂದೆ ಜಮಾಯಿಸಿದ್ದರು. ಅಲ್ಲದೇ, ಮುಂದಿನ ಪ್ರಧಾನಿ ಎಂಬ ಘೋಷಣೆಗಳನ್ನು ಕೂಗಿದರು.

ತೀವ್ರ ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಮುಂದಿನ ವರ್ಷಾರಂಭದಲ್ಲಿ (ಜನವರಿ) ಸಂಸತ್​ ಚುನಾವಣೆ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ಮತದಾರರ ಬೆಂಬಲ ಪಡೆಯಲು ಷರೀಫ್​ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಇಂದು ಇಸ್ಲಾಮಾಬಾದ್​ಗೆ ಆಗಮಿಸಿ ರ್‍ಯಾಲಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

'ನಾಲ್ಕು ವರ್ಷಗಳ ನಂತರ ನಾನು ದೇಶಕ್ಕೆ ವಾಪಸ್​ ಹೋಗುತ್ತಿದ್ದೇನೆ. ಅಲ್ಲಾನ ಕೃಪೆಯಿಂದ ನಾನು ತುಂಬಾ ಸಂತೋಷವಾಗಿದ್ದೇನೆ. ಮುಂದಿನ ಚುನಾವಣೆಯ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುವುದು' ಎಂದು ಷರೀಫ್​ ದುಬೈನಿಂದ ಇಸ್ಲಾಮಾಬಾದ್​ಗೆ ಹೊರಡುವ ಮುನ್ನ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ:ದೇಶದಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ, ಬಂಡಾಯ ಶೇ.65 ರಷ್ಟು ತಗ್ಗಿದೆ: ಅಮಿತ್​ ಶಾ

Last Updated : Oct 21, 2023, 7:59 PM IST

ABOUT THE AUTHOR

...view details