ಕರ್ನಾಟಕ

karnataka

ದಿ ಕೇರಳ ಸ್ಟೋರಿ ಚಿತ್ರದ ಮೇಲೆ ಪಶ್ಚಿಮ ಬಂಗಾಳ ಸರ್ಕಾರದ ನಿಷೇಧ ಆದೇಶಕ್ಕೆ ಸುಪ್ರೀಂ ತಡೆ

By

Published : May 18, 2023, 6:34 PM IST

'ದಿ ಕೇರಳ ಸ್ಟೋರಿ' ಚಲನಚಿತ್ರ ಪ್ರದರ್ಶನದ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ವಿಧಿಸಿದ್ದ ನಿಷೇಧ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

supreme-court-stays-bengal-govt-ban-on-the-kerala-story
ದಿ ಕೇರಳ ಸ್ಟೋರಿ ಚಿತ್ರದ ಮೇಲೆ ಪಶ್ಚಿಮ ಬಂಗಾಳ ಸರ್ಕಾರದ ನಿಷೇಧ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ: ವಿವಾದಿತ ಚಲನಚಿತ್ರ 'ದಿ ಕೇರಳ ಸ್ಟೋರಿ' ಪ್ರದರ್ಶನದ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ವಿಧಿಸಿದ್ದ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆವೊಡ್ಡಿದೆ. ಇದೇ ವೇಳೆ ಭದ್ರತೆಯ ಕಾರಣದಿಂದ ಚಿತ್ರ ಪ್ರದರ್ಶನವನ್ನು ಥಿಯೇಟರ್ ಮಾಲೀಕರು ನಿಲ್ಲಿಸಿರುವ ನಿರ್ಧಾರ ಕುರಿತಂತೆ ಪ್ರೇಕ್ಷಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡು ಸರ್ಕಾರಕ್ಕೆ ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ.

ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿರುವುದನ್ನು ಮತ್ತು ತಮಿಳುನಾಡಿನಲ್ಲಿ ಸಿನಿಮಾವನ್ನು ಪ್ರದರ್ಶಿಸದಂತೆ ಥಿಯೇಟರ್ ಮಾಲೀಕರು ತೆಗೆದುಕೊಂಡಿರುವ ನಿರ್ಧಾರವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಇಂದಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಬಂಗಾಳ ಸರ್ಕಾರ ವಿಧಿಸಿದ್ದ ನಿಷೇಧಕ್ಕೆ ತಡೆ ನೀಡಿದೆ.

ಇದೇ ವೇಳೆ, 32 ಸಾವಿರ ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಎಂಬ ಆರೋಪದ ಕುರಿತಂತೆ ಮೇ 20ರ ಸಂಜೆ 5 ಗಂಟೆಯೊಳಗೆ ಚಲನಚಿತ್ರದಲ್ಲಿ ಹಕ್ಕುತ್ಯಾಗದ ಸೂಚನೆ ಹಾಕುವಂತೆ ನಿರ್ಮಾಪಕರಿಗೆ ನಿರ್ದೇಶನ ನೀಡಿದೆ. ಅಂದರೆ, ಈ ಕುರಿತಾದ ಯಾವುದೇ ದೃಢೀಕೃತ ಮಾಹಿತಿ ಇಲ್ಲ ಮತ್ತು ಚಲನಚಿತ್ರವು ಕಾಲ್ಪನಿಕವಾಗಿದೆ ಎಂದು ಹೇಳಬೇಕು. ಮತ್ತೊಂದೆಡೆ, ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಪ್ರಮಾಣೀಕರಣವನ್ನು ಪ್ರಶ್ನಿಸುವ ಅರ್ಜಿಗಳನ್ನು ನಿರ್ಧರಿಸುವ ಮೊದಲು ಚಲನಚಿತ್ರವನ್ನು ವೀಕ್ಷಿಸಲು ಬಯಸುವುದಾಗಿ ನ್ಯಾಯಪೀಠ ಹೇಳಿದೆ. ಈ ಅರ್ಜಿಗಳ ವಿಚಾರಣೆಯು ಜುಲೈ ಎರಡನೇ ವಾರದಲ್ಲಿ ನಡೆಯಲಿದೆ ಎಂದೂ ತಿಳಿಸಿದೆ.

ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧದ ಬಗ್ಗೆ ಈ ಹಿಂದೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರದಿಂದ ಪ್ರತಿಕ್ರಿಯೆ ಹೇಳಿತ್ತು. ಇದಕ್ಕೆ ತನ್ನ ಉತ್ತರ ಸಲ್ಲಿಸಿರುವ ತಮಿಳುನಾಡು, ರಾಜ್ಯದಲ್ಲಿ ಚಲನಚಿತ್ರದ ಮೇಲೆ ಯಾವುದೇ ನಿಷೇಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಸಿನಿಮಾವನ್ನು ಪ್ರದರ್ಶಿಸದಂತೆ ಥಿಯೇಟರ್ ಮಾಲೀಕರು ತೆಗೆದುಕೊಂಡಿರುವ ನಿರ್ಧಾರವನ್ನು ಗಮನಿಸಿರುವ ನ್ಯಾಯ ಪೀಠ, ಸಿನಿಮಾ ಪ್ರೇಕ್ಷಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಅಲ್ಲದೇ, ವಿಚಾರಣೆಯ ಸಮಯದಲ್ಲಿ ಸಾರ್ವಜನಿಕ ಅಸಹಿಷ್ಣುತೆಯ ಮೇಲೆ ಶಾಸನಬದ್ಧ ನಿಬಂಧನೆಗಳನ್ನು ಬಳಸಲು ಆಗುವುದಿಲ್ಲ. ಸಿಬಿಎಫ್‌ಸಿ ಪ್ರಮಾಣಪತ್ರ ನೀಡಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಪೀಠ ಹೇಳಿದೆ. ಚಿತ್ರದ ನಿರ್ಮಾಪಕರ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ತಮ್ಮ ವಾದ ಮಂಡಿಸಿ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡುವ ಕುರಿತು ರಾಜ್ಯಗಳು ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನಟಿ ಅದಾ ಶರ್ಮಾ ನಟಿಸಿರುವ 'ದಿ ಕೇರಳ ಸ್ಟೋರಿ' ಮೇ 5ರಂದು ಬಿಡುಗಡೆಯಾಗಿದೆ. ಸುದಿಪ್ತೋ ಸೇನ್ ನಿರ್ದೇಶನದ ಈ ಚಲನಚಿತ್ರವು ಕೇರಳದಲ್ಲಿ ಮಹಿಳೆಯರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಗೊಳಿಸುವ ಮತ್ತು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್)ಗೆ ಸೇರ್ಪಡೆಗೊಳಿಸುವ ಕುರಿತಾಗಿದೆ. ಈ ಕುರಿತಂತೆ ಪರ ವಿರೋಧ ಚರ್ಚೆಗಳು ಜೋರಾಗಿವೆ.

ಇದನ್ನೂ ಓದಿ:2023 ಹಿಟ್ ಸಿನಿಮಾ ಪಟ್ಟಿಗೆ ಸೇರಿದ 'ದಿ ಕೇರಳ ಸ್ಟೋರಿ'.. ಕಲೆಕ್ಷನ್​​ ಎಷ್ಟು ಗೊತ್ತಾ?

ABOUT THE AUTHOR

...view details