ಭದ್ರ, ತುಳಸಿ, ಸಿಂಹ, ಲೆಜೆಂಡ್, ಸರೈನೋಡು, ಜಯಜಾನಕಿ ನಾಯಕ ಮತ್ತು ಇತ್ತೀಚೆಗಷ್ಟೇ ತೆರೆ ಕಂಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ʻಅಖಂಡʼ ಚಿತ್ರಗಳನ್ನು ನಿರ್ದೇಶಿಸಿದ 'ಬೋಯಪಾಟಿ ಶ್ರೀನು' ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ದೇಶಕರಲ್ಲೊಬ್ಬರು. ಇವರು ಇದೀಗ ಟಾಲಿವುಟ್ನ ಸ್ಟಾರ್ ನಟರಲ್ಲೊಬ್ಬರಾದ ರಾಮ್ ಪೋತಿನೇನಿ ಜೊತೆಗೂಡಿ ಪ್ಯಾನ್ ಇಂಡಿಯಾ ಚಿತ್ರವನ್ನು ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಇದೇ ಬ್ಯಾನರ್ (ಶ್ರೀನಿವಾಸ ಸಿಲ್ವರ್ ಸ್ಕ್ರೀನ್ಸ್) ನಡಿ ತಯಾರಾದ ʻದಿ ವಾರಿಯರ್ʼ ಚಿತ್ರೀಕರಣವನ್ನು ಮುಗಿಸಿದ ರಾಮ್ ಪೋತಿನೇನಿಗೆ ಇದು 20ನೇ ಚಿತ್ರವಾಗಿದೆ.
ಇದೀಗ ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ ರಾಮ್ ಪೋತಿನೇನಿ, ಬೋಯಪಾಟಿ ಮತ್ತು ಶ್ರೀನಿವಾಸ ಚಿತ್ತೂರಿ ಒಂದಾಗಿದ್ದು, ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಜೂನ್ 1ರ ಬುಧವಾರ ಹೈದರಾಬಾದ್ನಲ್ಲಿ ನೆರವೇರಿತು. ಚಿತ್ರರಂಗದಲ್ಲಿ ಇದೊಂದು ಬಿಗ್ ಬಜೆಟ್ ಸಿನಿಮಾ ಆಗಲಿದ್ದು, ಹಲವು ಭಾಷೆಗಳಲ್ಲಿ ತೆರೆಗೆ ತರುವ ತವಕ ಇಟ್ಟುಕೊಂಡಿದ್ದಾರೆ.
ಬೋಯಪಾಟಿ ಶ್ರೀನು ಅವರಿಗೆ ಇದು 10ನೇ ಚಿತ್ರವಾಗಿದೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಶ್ರೀನಿವಾಸ ಚಿತ್ತೂರಿ ಅವರ ಶ್ರೀನಿವಾಸ ಸಿಲ್ವರ್ ಸ್ಕ್ರೀನ್ಸ್ ಬ್ಯಾನರ್ ನಡಿ 'ಬೋಯಪಾತಿರಾಪೋ' (ತಾತ್ಕಾಲಿಕ ಹೆಸರು) ಎಂಬ ಹೆಸರಿನ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಶ್ರೀನಿವಾಸ ಸಿಲ್ವರ್ ಸ್ಕ್ರೀನ್ಸ್ನ 9ನೇ ಚಿತ್ರ ಇದಾಗಿದೆ. ಚಿತ್ರದ ನಾಯಕ ರಾಮ್ ಪೋತಿನೇನಿ ತೆಲುಗು ಚಿತ್ರರಂಗವಷ್ಟೇ ಅಲ್ಲದೆ ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟ. ಅವರ ಸಿನಿಮಾಗಳು ಹಿಂದಿ ಭಾಷೆಗೆ ಡಬ್ ಆಗಿ ಯೂಟ್ಯೂಬ್ನಲ್ಲಿ ಭಾರಿ ಜನಪ್ರಿಯತೆ ಗಳಿಸಿವೆ.