ಮೈಸೂರು :ಕೋವಿಡ್ ಹಿನ್ನೆಲೆ ಅಂಬಾರಿ ಬಸ್ ಸಂಚಾರಕ್ಕೆ ಪ್ರವಾಸಿಗರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಂಬಾರಿ ಡಬಲ್ ಡೆಕ್ಕರ್ ಬಸ್ನ ಟಿಕೆಟ್ ದರವನ್ನ ₹250 ರಿಂದ ₹150ಕ್ಕೆ ಇಳಿಕೆಮಾಡಲಾಗಿದೆ.
ಇದೇ ವೇಳೆ ಬಸ್ ಸಂಚಾರವನ್ನು ಮಯೂರ ಹೋಟೆಲ್ನಿಂದ ಅರಮನೆ ಸಮೀಪ ಸ್ಥಳಾಂತರಿಸಲಾಗಿದೆ ಎಂದು ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಜಗದೀಶ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ( KSTDC)ವು ಮೈಸೂರಿನಲ್ಲಿ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ 6 ಡಬಲ್ ಡೆಕ್ಕರ್ ಬಸ್ ಗಳನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿ, ಪ್ರವಾಸಿಗರ ಸೇವೆಗೆ ನೀಡಿತ್ತು.
ಈ ಡಬ್ಬಲ್ ಡೆಕ್ಕರ್ ಬಸ್ಗಳಲ್ಲಿ ಮೈಸೂರಿನಲ್ಲಿ 4 ಬಸ್ಗಳಿವೆ. ದಸರಾ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಆಗಮಿಸುವುದರಿಂದ ಈ ಡಬ್ಬಲ್ ಡೆಕ್ಕರ್ ಬಸ್ನಲ್ಲಿ ಮೈಸೂರಿನ ಸೊಬಗನ್ನು ಸವಿಯಲು ಸಹಕಾರಿಯಾಗುತ್ತಿತ್ತು. ಜೊತೆಗೆ ಇದಕ್ಕೆ ದಸರಾ ಸಂದರ್ಭದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು.
ಆದರೆ, ಕೋವಿಡ್ ಹಿನ್ನೆಲೆ ಪ್ರವಾಸೋದ್ಯಮ ಕುಂಠಿತವಾಗುತ್ತಿರುವುದರಿಂದ 4 ರಲ್ಲಿ ಕೇವಲ ಒಂದು ಬಸ್ ಮಾತ್ರ ಸಂಚಾರ ಮಾಡುತ್ತಿತ್ತು. ಈಗ ಕೋವಿಡ್ ಪ್ರಕರಣಗಳು ಕಡಿಮೆಯಾಗಿರುವುದರಿಂದ ಮತ್ತು ಪ್ರವಾಸೋದ್ಯಮ ಪುನಶ್ಚೇತನಗೊಳಿಸುವ ಉದ್ದೇಶದಿಂದ 250 ರೂ. ಇದ್ದ ಡಬಲ್ ಡೆಕ್ಕರ್ ಬಸ್ ಟಿಕೆಟ್ ದರವನ್ನು 150 ರೂ. ಇಳಿಕೆ ಮಾಡಲಾಗಿದೆ ಎಂದು ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಜಗದೀಶ್ ತಿಳಿಸಿದ್ದಾರೆ.
ಮಯೂರ ಹೋಟೆಲ್ನಿಂದ ಅರಮನೆ ಮುಂಭಾಗಕ್ಕೆ ಬಸ್ ಸ್ಥಳಾಂತರ :ಮೊದಲು ಜೆಎಲ್ಬಿ ರಸ್ತೆಯ ಮಯೂರ ಹೋಟೆಲ್ ಆವರಣದಿಂದ ಕಾರ್ಯಾಚರಿಸುತ್ತಿದ್ದ ಡಬ್ಬಲ್ ಡೆಕ್ಕರ್ ಬಸ್ಗಳನ್ನು ಅರಮನೆಯ ದಕ್ಷಿಣ ದ್ವಾರದ ( ಗನ್ ಹೌಸ್ ಬಳಿಯ ಕಾಡಾ ಕಚೇರಿ ಎದುರು) ವಾಹನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.
ಇಲ್ಲಿಂದಲೇ ಬಸ್ ಸಂಚಾರ ಆರಂಭಿಸಲು ತೀರ್ಮಾನಿಸಲಾಗಿದೆ. ಅರಮನೆಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿಂದಲೇ ಡಬ್ಬಲ್ ಡೆಕ್ಕರ್ ಬಸ್ನಲ್ಲಿ ಸಂಚಾರ ಮಾಡಲು ಅನುಕೂಲವಾಗಲಿದೆ. ಬಸ್ನಲ್ಲಿ ತೆರಳಿ ಮೈಸೂರಿನ ಐತಿಹಾಸಿಕ ಕಟ್ಟಡಗಳು, ಪಾರಂಪರಿಕ ಕಟ್ಟಡಗಳು ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಓದಿ :ಹಿಜಾಬ್: ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೂರ್ಣಪೀಠದಲ್ಲಿ 4ನೇ ದಿನದ ವಿಚಾರಣೆ ಆರಂಭ