ಕರ್ನಾಟಕ

karnataka

ಬಸ್​​ ಕೊರತೆ: ಸಾರಿಗೆ ಇಲಾಖೆ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಆಕ್ರೋಶ

By

Published : Jul 20, 2022, 12:55 PM IST

ಕಾಳಗಿ ಹಾಗೂ ಚಿಂಚೋಳಿ ಘಟಕದಿಂದ ಪ್ರತಿನಿತ್ಯ ಎರಡು ಬಸ್​​ಗಳು ಬರುತ್ತಿದ್ದವು. ಆದರೆ ಕೋವಿಡ್​​ ಕಾರಣದಿಂದ ಈ ಎರಡು ಬಸ್​​ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಮಕ್ಕಳು ಶಾಲೆಗೆ ಹೋಗಲಾಗದೆ ವಾಪಸ್​​ ಮನೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

Students protest in Kalaburagi
ಬಸ್​​ ಕೊರತೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಪಸ್ತಾಪುರ ಗ್ರಾಮದಲ್ಲಿ ಬಸ್ ಬಾರದ ಕಾರಣ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಬದಲು ಮರಳಿ ಮನೆಗೆ ಹೋಗಿದ್ದಾರೆ. ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ನಿಲ್ಲಿಸದ ಕಾರಣ ಪಸ್ತಾಪುರ ಗ್ರಾಮದ 30ಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಳೆದ ವಾರ ಸೇಡಂ ತಾಲೂಕಿನಲ್ಲಿ ಬಸ್ ಬಾರದ ಕಾರಣ ಮಕ್ಕಳು ಮಳೆಯಲ್ಲಿ ಕಿ.ಮೀ ಗಟ್ಟಲೆ ನಡೆದುಕೊಂಡು ಹೋದ ಘಟನೆ ವರದಿಯಾದ ಬೆನ್ನೆಲ್ಲೇ ಮತ್ತೊಂದು ಘಟನೆ ನಡೆದಿದೆ.


ಪ್ರತಿನಿತ್ಯ ಹುಮನಾಬಾದ್ ಘಟಕದ ಬಸ್ ಚಿಟಗುಪ್ಪ, ಐನಾಪುರ, ರುಮ್ಮನಗೂಡ, ಪಸ್ತಾಪರ ಮಾರ್ಗದಿಂದ ಹೊರಟು 9:30ಕ್ಕೆ ಸುಲೇಪೇಟ್ ತಲುಪುವ ಕೆಕೆಆರ್​​ಟಿಸಿ ಬಸ್​​ನ್ನು ಸುಲೇಪೇಟ್​​ಗೆ ಶಾಲೆಗೆ ಹೋಗುವ ಮಕ್ಕಳು ನಂಬಿಕೊಂಡಿದ್ದಾರೆ. ಆದರೆ ಈ ಬಸ್​ ಪಸ್ತಾಪುರದಲ್ಲಿ ನಿಲ್ಲದ ಕಾರಣ ಅನಿವಾರ್ಯವಾಗಿ ಮಕ್ಕಳು ಮನೆಗೆ ಹಿಂತಿರುಗಬೇಕಾಗಿದೆ. ಪ್ರತಿನಿತ್ಯ ಇದೆ ಗೋಳಾಗಿದೆ. ನಮ್ಮ ಗೋಳು ಕೇಳುವವರು ಯಾರು? ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಕಾಳಗಿ ಹಾಗೂ ಚಿಂಚೋಳಿ ಘಟಕದಿಂದ ಪ್ರತಿನಿತ್ಯ ಎರಡು ಬಸ್​​ಗಳು ಬರುತ್ತಿದ್ದವು. ಅದು ಶಾಲಾ ಮಕ್ಕಳಿಗೆ ತುಂಬಾ ಅನುಕೂಲವಾಗಿತ್ತು. ಆದರೆ ಕೋವಿಡ್​​ ಕಾರಣದಿಂದ ಈ ಎರಡು ಬಸ್​​ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಮಕ್ಕಳು ಶಾಲೆಗೆ ಹೋಗಲಾಗದೆ ವಾಪಸ್​​ ಮನೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ಕೊಡಲಿ ಪೆಟ್ಟು ಬೀಳಲಿದೆ ಎಂದು ಪೋಷಕರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details