ಕರ್ನಾಟಕ

karnataka

By

Published : Aug 22, 2019, 7:08 PM IST

ETV Bharat / city

ಪ್ರವಾಹಕ್ಕೆ ನೆಲಕಚ್ಚಿದ ಧಾರವಾಡ ಅಳ್ನಾವರದ ಟಿಂಬರ್ ಉದ್ಯಮ... ಪರಿಹಾರಕ್ಕೆ ಆಗ್ರಹ

ಕೆಲದಿನಗಳ ಹಿಂದೆ ರಣಭೀಕರತೆ ಸೃಷ್ಟಿಸಿದ್ದ ಪ್ರವಾಹಕ್ಕೆ ಧಾರವಾಡ ಜಿಲ್ಲೆಯ ಅಳ್ನಾವರದ ಪಿಠೋಪಕರಣ ಉದ್ಯಮವೇ ನೆಲಕಚ್ಚಿ ಹೋಗಿದೆ. ಬೀದಿಗೆ ಬಂದಿರುವ ಇಲ್ಲಿನ ಉದ್ಯಮಿಗಳು, ಸರ್ಕಾರ ಹಾಗೂ ಅರಣ್ಯ ಇಲಾಖೆ ನೀರು ಪಾಲಾಗಿ ಅನ್ಯರ ಮನೆ ಸೇರಿರುವ ಕಟ್ಟಗೆಗಳನ್ನು ಮರಳಿ ಕೊಡಿಸಬೇಕು ಹಾಗೂ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರವಾಹಕ್ಕೆ ನೆಲಕಚ್ಚಿದ ಧಾರವಾಡ ಅಳ್ನಾವರದ ಟಿಂಬರ್ ಉದ್ಯಮ

ಧಾರವಾಡ:ಕಳೆದ ಹದಿನೈದು ದಿನಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಎದುರಾಗಿದ್ದಾಗ ಪ್ರವಾಹ ಸಂತ್ರಸ್ಥರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಭಾರಿ ಪ್ರವಾಹಕ್ಕೆ ಇಲ್ಲಿನ ವ್ಯಾಪಾರಸ್ಥರು ಕೂಡಾ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ.

ಹೌದು, ಅಳ್ನಾವರದ ತಿಲಕ‌ನಗರದಲ್ಲಿರುವ ಟಿಂಬರ್ ವ್ಯಾಪಾರಸ್ಥರು, ಲಕ್ಷಗಟ್ಟಲೆ ಬೆಲೆಬಾಳುವ ಕಟ್ಟಿಗೆಗಳನ್ನು ಕಳೆದುಕೊಂಡಿದ್ದಾರೆ. ಇಲ್ಲಿನ ಹುಲಿಕೆರೆಯ ಪ್ರವಾಹ ನೀರು ನುಗ್ಗಿದ್ದರಿಂದ ಅಳ್ನಾವರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇಲ್ಲಿನ ಜನಜೀವನದ ಜೊತೆಗೆ ಹುಲಿಕೆರೆಯ ಪ್ರವಾಹಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಪೀಠೋಪಕರಣ ಉದ್ಯಮವೂ ಕೊಚ್ಚಿ ಹೋಗಿದೆ.

ಒಂದೇ ರಾತ್ರಿಯಲ್ಲಿ ರಣಭೀಕರತೆ ಸೃಷ್ಟಿಸಿದ ಇಲ್ಲಿನ ಹಳ್ಳದ ರಭಸಕ್ಕೆ 10ಕ್ಕೂ ಹೆಚ್ಚು ಕಟ್ಟಿಗೆ ಉದ್ಯಮಿಗಳು ಹಾಗೂ 20ಕ್ಕೂ ಹೆಚ್ಚು ಪಿಠೋಪಕರಣ ತಯಾರಕರು ಬೀದಿಗೆ ಬರುವಂತಾಗಿದೆ. ಸುಮಾರು 4 ಕೋಟಿ ರೂ. ಮೌಲ್ಯದಷ್ಟು ಸಾಗುವಾನಿ ಕಟ್ಟಿಗೆಯ ದಿನ್ನಿಗಳು, 300ಕ್ಕೂ ಹೆಚ್ಚು ಪೀಠೋಪಕರಣ ತಯಾರಿಕೆಯ ಮಷಿನ್​ಗಳು ನೀರುಪಾಲಾಗಿವೆ.

ಪ್ರವಾಹಕ್ಕೆ ನೆಲಕಚ್ಚಿದ ಧಾರವಾಡ ಅಳ್ನಾವರದ ಟಿಂಬರ್ ಉದ್ಯಮ

ಹೀಗಾಗಿ ಈ ಊರಿನ ಜನರೀಗ ಅಳಿದುಳಿದ ಮರದ ದಿನ್ನಿಗಳು ಮಾತ್ರವಲ್ಲ, ತಮ್ಮ ತಮ್ಮ ಸಾಮಿಲ್​ಗಳಲ್ಲಿರುವ ಕಟ್ಟಿಗೆಗಳನ್ನು ಲಾರಿಗೆ ಹಗ್ಗದಿಂದ ಕಟ್ಟಿಕೊಂಡು ಕೆಲವನ್ನು ಉಳಿಸಿಕೊಂಡಿದ್ದಾರೆ. ಅಳ್ನಾವರ ಪಟ್ಟಣದಲ್ಲಿ ಸುಮಾರು 30 ಸಾಮಿಲ್​ಗಳಿದ್ದರೆ, ನೂರಕ್ಕೂ ಹೆಚ್ಚು ಪೀಠೋಪಕರಣ ತಯಾರಕರಿದ್ದಾರೆ. ಮುಖ್ಯವಾಗಿ ಇಲ್ಲಿನ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಈ ನೀರಿನ ರಭಸ ಹೆಚ್ಚಾಗಿತ್ತು. ಈ ಭಾಗವೇ ಹೆಚ್ಚಾಗಿ ಜಲಾವೃತಗೊಂಡಿತ್ತು. ಇದರಿಂದಾಗಿ ಮ್ಯಾಕ್ ಕ್ರಿಯೇಷನ್ಸ್, ಭಗವಾನ್ ವುಡ್ಸ್, ವುಡ್ ವಲ್ಡ್, ಧನಲಕ್ಷ್ಮಿ ಸಾಮಿಲ್, ವಿಘ್ನೇಶ ಟಿಂಬರ್ ಯಾರ್ಡ್ ಹಾಗೂ ಸುತ್ತಮುತ್ತಲಿನ ಟಿಂಬರ್ ಯಾರ್ಡ್​ಗಳಲ್ಲಿನ ಕಟ್ಟಿಗೆ, ಮಷಿನ್, ಪೀಠೋಪಕರಣ ಹಾಗೂ ಬಿಡಿಭಾಗಗಳೆಲ್ಲವೂ ನೀರು ಪಾಲಾಗಿವೆ. ಮುಖ್ಯವಾಗಿ ಈ ಎಲ್ಲ ಸಾಮಿಲ್ ಹಾಗೂ ಟಿಂಬರ್ ಯಾರ್ಡ್​ಗಳಲ್ಲಿಯೂ ಬೆಲೆಬಾಳುವ ಸಾಗುವಾನಿಯ ದಿನ್ನಿಗಳನ್ನೇ ಹೆಚ್ಚಾಗಿ ದಾಸ್ತಾನು ಮಾಡಿ ಇಡಲಾಗಿತ್ತು.

ಒಟ್ಟಾರೆ ಒಂದೇ ಒಂದು ರಾತ್ರಿ ರಣಭೀಕರತೆ ಸೃಷ್ಟಿಸಿದ್ದ ಹಳ್ಳದ ಪ್ರವಾಹಕ್ಕೆ ಅಳ್ನಾವರದ ಪಿಠೋಪಕರಣ ಉದ್ಯಮವೇ ನೆಲಕಚ್ಚಿ ಹೋಗಿದೆ. ಬೀದಿಗೆ ಬಂದಿರುವ ಇಲ್ಲಿನ ಉದ್ಯಮಿಗಳು, ಸರ್ಕಾರ ಹಾಗೂ ಅರಣ್ಯ ಇಲಾಖೆ ನೀರು ಪಾಲಾಗಿ ಅನ್ಯರ ಮನೆ ಸೇರಿರುವ ಕಟ್ಟಗೆಗಳನ್ನು ಮರಳಿ ಕೊಡಿಸಬೇಕು ಹಾಗೂ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details