ದಾವಣಗೆರೆ:ಜಿಲ್ಲೆಯ ನ್ಯಾಮತಿ ತಾಲೂಕು ಬೆಳಗುತ್ತಿ ಗ್ರಾಮದಲ್ಲಿನ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ತೀರ್ಥರಾಮೇಶ್ವರನು ತನ್ನ ಆಲಯದ ಕೊಳದಲ್ಲಿ ನೀರನ್ನು ಎಂದೂ ಬತ್ತಿ ಹೋಗಲು ಬಿಟ್ಟಿಲ್ಲ. ಇದನ್ನು ತೀರ್ಥವೆಂದು ಭಾವಿಸುವ ಸಾವಿರಾರು ಭಕ್ತರು ಕಾಶಿಯ ಗಂಗಾ ನದಿಯಂತೆ ನೀರನ್ನು ಪೂಜಿಸುವುದು ಇಲ್ಲಿನ ವೈಶಿಷ್ಟ್ಯ.
ಹೌದು. ತೀರ್ಥರಾಮೇಶ್ವರ ದೇವಾಲಯದಲ್ಲಿನ ಸಣ್ಣ ಕೊಳದಲ್ಲಿ ವರ್ಷದ 360 ದಿನಗಳೂ ಪುಣ್ಯ ತೀರ್ಥ ತುಂಬಿರುತ್ತದೆ. ಕೊಡದಿಂದ ಎಷ್ಟು ತೀರ್ಥ ತೆಗೆದ್ರೂ ಕೊಳ ಮತ್ತೆ ತುಂಬಿಕೊಳ್ಳುತ್ತೆ. ಇದೇ ನೀರಿನಲ್ಲಿ ಸ್ನಾನ ಮಾಡಿದ್ರೆ ಕಾಶಿಯ ಗಂಗಾ ನದಿಯಲ್ಲಿ ಸ್ನಾನ ಮಾಡಿದಂತೆ ಎಂಬ ನಂಬಿಕೆ ಇದೆ. ತೀರ್ಥರಾಮೇಶ್ವರನ ಪಕ್ಕದಲ್ಲೇ ಬ್ರಹ್ಮನ ದೇವಾಲಯವಿದ್ದು ಭೂಮಿ ಮೇಲೆ ಎಲ್ಲೂ ಪೂಜೆ ನಡೆಯದ ಬ್ರಹ್ಮನಿಗೆ ಇಲ್ಲಿ ನಿತ್ಯ ಪೂಜೆ ಸಲ್ಲಿಕೆಯಾಗುತ್ತದೆ.
ತೀರ್ಥರಾಮೇಶ್ವರ ಸ್ಥಳದ ಇತಿಹಾಸ
ರಾಮ, ಲಕ್ಷ್ಮಣ, ಸೀತೆ ವನವಾಸದಲ್ಲಿದ್ದಾಗ ಇದೇ ಮಾರ್ಗವಾಗಿ ಬಂದಿದ್ದರಂತೆ. ದಾಹ ನೀಗಿಸಲು ನೀರಿಲ್ಲದ ವೇಳೆ ರಾಮ ತನ್ನ ಬಾಣದಿಂದ ಭೂಮಿಗೆ ಹೊಡೆದ ಬೆನ್ನಲ್ಲೇ ನೀರು ಚಿಮ್ಮಿ ಬಂತಂತೆ. ಶ್ರೀರಾಮ ಬಿಟ್ಟ ಬಾಣದಿಂದ ಬಂದ ನೀರು ಕಾಶಿಯಿಂದ ಬಂದದ್ದು ಎನ್ನಲಾಗಿದ್ದು, ಮುಂದೆ ಅದು ಕಾಶಿತೀರ್ಥ ಎಂದಾಯಿತು. ತೀರ್ಥ ಉದ್ಭವವಾದ ಸ್ಥಳದ ಕೂಗಳತೆ ದೂರದಲ್ಲಿ ಲಿಂಗ ಉದ್ಭವಾಗಿದ್ದರಿಂದ ಈ ಧಾರ್ಮಿಕ ಕ್ಷೇತ್ರಕ್ಕೆ ತೀರ್ಥರಾಮೇಶ್ವರನ ಹೆಸರು ಬಂದಿದೆ ಎಂಬುದು ಸ್ಥಳೀಯರ ನಂಬಿಕೆ.