ಬೆಂಗಳೂರು:ರಾಜ್ಯಸಭಾ ಚುನಾವಣೆ ಅಭ್ಯರ್ಥಿಯಾಗಿ ಮತ ಕೇಳುವುದಕ್ಕಷ್ಟೇ ಬಂದಿದ್ದೆ. ಆದ್ರೆ ರೆಸಾರ್ಟ್ ಪ್ರವೇಶಕ್ಕೆ ಪೊಲೀಸರು ನನಗೆ ನಿರ್ಬಂಧ ಹೇರಿದರು. ಆದರೆ, ಯಾವ ಕಾಯ್ದೆ, ಯಾವ ಹಕ್ಕಿನಡಿಯಲ್ಲಿ ಪೊಲೀಸರು ನನ್ನ ತಡೆದರು? ನನ್ನ ವಿರುದ್ಧ ದುರ್ವರ್ತನೆ ತೋರಿಸಿದರು? ಎಂದು ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಬೆಂಗಳೂರು ಪೊಲೀಸರಿಗೆ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ಶಾಸಕರನ್ನು ಭೇಟಿ ಮಾಡಿ ಮಾತನಾಡುವವನಿದ್ದೆ. ಆದರೆ, ಪೊಲೀಸರು ನನ್ನನ್ನು ಅನಾವಶ್ಯಕವಾಗಿ ತಡೆದು ವಶಕ್ಕೆ ಪಡೆದರು. ಕರ್ನಾಟಕ ಹೈಕೋರ್ಟ್ನಲ್ಲಿ ಪೊಲೀಸರ ವಿರುದ್ಧ ಅರ್ಜಿ ಸಲ್ಲಿಸಿದ್ದೇನೆ. ಅಲ್ಲದೆ, ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಕ್ಕೆ ಕಾಯುತ್ತೇನೆ ಎಂದರು.
ನಾನು ಉಪವಾಸ ಧರಣಿ ಕೈಗೊಳ್ಳಲು ನಿರ್ಧಾರ ಮಾಡಿದ್ದೇನೆ. ರಮಡಾ ರೆಸಾರ್ಟ್ನಲ್ಲಿರುವ ನಮ್ಮ ಶಾಸಕರು ಕಾಂಗ್ರೆಸ್ನಿಂದ ಗೆದ್ದು ಬಂದಿದ್ದಾರೆ. ಅವರನ್ನು ಶಾಸಕರನ್ನಾಗಿ ಮಾಡುವುದಕ್ಕೆ ಸಾವಿರಾರು ಮಂದಿ ಶ್ರಮಿಸಿದ್ದಾರೆ. ಆ ಶಾಸಕರಿಗೆ ಏನೇ ಸಮಸ್ಯೆಗಳಿದ್ದರೂ, ಕೂಡ ಅದನ್ನು ನಾವು ಬಗೆಹರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.
ಬೆಂಗಳೂರು ಪೊಲೀಸ್, ಬಿಜೆಪಿ ವಿರುದ್ಧ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕಿಡಿ ಬಿಜೆಪಿ ರಾಜ್ಯಸಭಾ ಚುನಾವಣೆಯಲ್ಲಿ ನಮ್ಮನ್ನು ಸೋಲಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ನಮ್ಮೊಂದಿಗೆ 122 ಶಾಸಕರಿದ್ದಾರೆ. ನಮಗೆ ರಾಜ್ಯಸಭಾ ಗೆಲ್ಲುವುದಕ್ಕೆ ಬೇಕಾಗಿರುವುದು ಕೇವಲ 58 ಸ್ಥಾನಗಳು ಮಾತ್ರ. ರಾಜ್ಯಸಭಾ ಸ್ಥಾನ, ಕಮಲನಾಥ್ ಸರ್ಕಾರ ಉಳಿಸುವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದೇನೆ ಎಂದು ತಿಳಿಸಿದರು.
ಮಧ್ಯಪ್ರದೇಶದಲ್ಲಿ ಬಹುದೊಡ್ಡ ಹಗರಣಗಳನ್ನು ಬಿಜೆಪಿ ಮಾಡಿದೆ. ಹನಿಟ್ರ್ಯಾಪ್ ಪ್ರಕರಣಗಳಲ್ಲೂ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಕಮಲನಾಥ್ ಅವರು ಬಿಜೆಪಿಯ ಲ್ಯಾಂಡ್ ಮಾಫಿಯಾ, ಮೈನಿಂಗ್ ಮಾಫಿಯಾ, ಸ್ಯಾಂಡ್ ಮಾಫಿಯಾ ವಿರುದ್ಧ ಹೋರಾಟ ನಡೆಸಿದ್ದರು. ಇದನ್ನು ಬಿಜೆಪಿ ನಾಯಕರು ಸಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ದಿಗ್ವಿಜಯ್ ಆರೋಪಿಸಿದ್ದಾರೆ.
ಶಾಸಕರನ್ನು ಖರೀದಿಸಲು ಇಲ್ಲಿ ಇಟ್ಟುಕೊಂಡಿರುವುದು ದುರಾದೃಷ್ಟ. ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಬಿಜೆಪಿಗೆ ವಾಜಪೇಯಿ ತರದ ಸಿದ್ಧಾಂತ, ನಾಯಕತ್ವ ಈಗಿಲ್ಲ. ಜ್ಯೋತಿರಾದಿತ್ಯ ಸಿಂಧಿಯಾಗೆ ಕಾಂಗ್ರೆಸ್ನಲ್ಲಿ ಉತ್ತಮ ಭವಿಷ್ಯ ಸಿಕ್ಕಿತ್ತು. ಆದರೆ, ಸಿಂಧಿಯಾರಿಂದ ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಇಲ್ಲಿಗೆ ಬಂದಿರುವ ಎಲ್ಲ ಶಾಸಕರ ವಿಶೇಷ ವಿಮಾನಕ್ಕೆ ಬಿಜೆಪಿ ನಾಯಕರೇ ಹಣ ಕೊಟ್ಟಿದ್ದಾರೆ. ಹೋಟೆಲ್ ಬುಕ್ ಮಾಡಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಬಿಜೆಪಿ ವಿರುದ್ಧ ನೇರ ಅರೋಪ ಮಾಡಿದರು.