ಬೆಂಗಳೂರು: ವೈಯಕ್ತಿಕ ಸ್ನೇಹ, ರಾಜಕಾರಣ, ಆರ್ಎಸ್ಎಸ್ ಮತ್ತು ಸಿದ್ದಾಂತಗಳ ಕುರಿತು ವಿಧಾನಸಭೆಯಲ್ಲಿ ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು.
2022-23ನೇ ಸಾಲಿನ ಬಜೆಟ್ ಅಂದಾಜುಗಳ ಮೇಲೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಚರ್ಚೆ ಆರಂಭಿಸಿದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಒಳ್ಳೆಯ ಸ್ನೇಹಿತರು. ಅವರದು-ತಮ್ಮದು ಹಳೇ ಸ್ನೇಹ ಎಂದು ಹೇಳಿ, ಬಜೆಟ್ ಬಗ್ಗೆ ಟೀಕೆ ಮಾಡಿದಾಗ ಮಧ್ಯೆ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸ್ನೇಹಿತರು ಎಂದು ಹೇಳುತ್ತೀರಿ, ಹೀಗೆ ಮಾತನಾಡಿದರೆ ಹೇಗೆ ಎಂದಾಗ ಸಿದ್ದರಾಮಯ್ಯ ಸ್ನೇಹ ಬೇರೆ, ರಾಜಕಾರಣ ಬೇರೆ ಎಂದರು.
ನಾನು ನಿಮ್ಮನ್ನು ಪ್ರೀತಿಸುತ್ತೇನೆ, ಆದರೆ ನಿಮ್ಮದು ಆರ್ಎಸ್ಎಸ್ ಹಿನ್ನೆಲೆಯಲ್ಲಿ ನಿಮ್ಮೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯವಿದೆ. ರಾಜಕಾರಣ ಬೇರೆ, ಹೊರಗಡೆ ನಮ್ಮ ಸ್ನೇಹ ಇದ್ದೇ ಇರುತ್ತದೆ ಎಂದಾಗ, ಆಗ ಸ್ಪೀಕರ್ ಅವರು, ನಮ್ಮದು-ನಿಮ್ಮದು ಒಳ್ಳೆಯ ಸ್ನೇಹ, ನನಗೆ ಗೊತ್ತು ನನ್ನ ಮೇಲೆ ನಿಮಗೆ ಬಹಳ ಪ್ರೀತಿ ಇದೆ ಎಂದರು.
ಸ್ನೇಹವೇ ಬೇರೆ, ರಾಜಕೀಯವೇ ಬೇರೆ. ನೀವು ಆರ್ಎಸ್ಎಸ್ ಹಿನ್ನೆಲೆಯುಳ್ಳವರು. ನಾನು ಬೇರೆ ಹಿನ್ನೆಲೆಯವನು. ಮನುಷ್ಯತ್ವ ಮುಖ್ಯ. ನೀವು ನನ್ನನ್ನು, ನಾನು ನಿಮ್ಮನ್ನು ಗೌರವಿಸುವುದು ಬೇರೆ. ಆದರೆ, ಇಲ್ಲಿ ರಾಜಕೀಯವಾಗಿ ಮಾತನಾಡಬೇಕಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾದಿ ಬಿಟ್ಟು ಬೇರೆ ಹಾದಿಯಲ್ಲಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುತ್ತಾರೆ ಎಂದು ಅಂದುಕೊಂಡಿದ್ದೆ ಎಂದಾಗ, ಮಧ್ಯಪ್ರವೇಶಿಸಿದ ಸಚಿವ ಆರ್.ಅಶೋಕ್, ಮುಖ್ಯಮಂತ್ರಿ ಬೊಮ್ಮಾಯಿ ಅವರು ನಮಗಿಂತ ಹೆಚ್ಚಿನ ಆರ್ಎಸ್ಎಸ್ ಆಗಿದ್ದಾರೆ. ಆರ್ಎಸ್ಎಸ್ ಎಂದರೆ ಸಂಸ್ಕಾರ ನೀಡುವ ಸಂಸ್ಥೆ. ಅದರ ಪ್ರಭಾವದ ಮೇಲೆ ಒಳ್ಳೆಯ ಬಜೆಟ್ ನೀಡಿದ್ದಾರೆ. ಅವರು ನಮಗಿಂತ ದೊಡ್ಡ ಆರ್ಎಸ್ಎಸ್ ಎಂದು ಹೇಳಿ, ಮುಖ್ಯಮಂತ್ರಿಗಳ ಬಜೆಟ್ ಚೆನ್ನಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.
ಆಗ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ 2008ರಲ್ಲಿ ಬಿಜೆಪಿ ಸೇರಿದ್ದು, ಅವರ ತಂದೆ ಪ್ರಭಾವ ಇರುತ್ತದೆ ಎಂಬುದು ನನ್ನ ಅನಿಸಿಕೆ. ಆದರೆ ಆರ್ಎಸ್ಎಸ್ ಮುಂದೆ ಅವರ ತಂದೆಯ ಪ್ರಭಾವ ಸೋತಿದೆ. ಬಿಜೆಪಿ ಸೇರಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಮೂಲ ಬಿಜೆಪಿಯವರಾದ ನೀವಾಗಲೀ, ಈಶ್ವರಪ್ಪನವರಾಗಲೀ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ ಎಂದು ಅಶೋಕ್ ಅವರ ಕಾಲೆಳೆದರು.