ಕರ್ನಾಟಕ

karnataka

By

Published : May 26, 2022, 4:02 PM IST

ETV Bharat / city

ಹುದ್ದೆ ಕಡಿತ ನಿರ್ಧಾರ ವಿರೋಧಿಸಿ ಸಚಿವಾಲಯ ನೌಕರರಿಂದ ನಾಳೆ 'ಸಚಿವಾಲಯ ಬಂದ್'

ಸಚಿವಾಲಯದಲ್ಲಿನ 542 ಕಿರಿಯ ಸಹಾಯಕರ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ಕೈಬಿಡಬೇಕು. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪಸಮಿತಿಯ ಅವೈಜ್ಞಾನಿಕವಾಗಿ ಶಿಫಾರಸು ಮಾಡಿರುವ ಅಂಶಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ನಾಳೆ ಪ್ರತಿಭಟನೆ.

Ministry employees protest
ಸಚಿವಾಲಯ ನೌಕರರಿಂದ ಪ್ರತಿಭಟನೆ

ಬೆಂಗಳೂರು: ವೆಚ್ಚ ಕಡಿತ ಮತ್ತು ಹುದ್ದೆ ಕಡಿತವನ್ನು ವಿರೋಧಿಸಿ ನಾಳೆ ಸಚಿವಾಲಯ ನೌಕರರ ಸಂಘ ಸಚಿವಾಲಯ 'ಬಂದ್' ಗೆ ಕರೆ ನೀಡಿದೆ. ಸರ್ಕಾರದ ನೌಕರರ ವಿರೋಧಿ ಧೋರಣೆ ವಿರೋಧಿಸಿ ನಾಳೆ ವಿಧಾನಸೌಧ, ವಿಕಾಸಸೌಧ ಸಚಿವಾಲಯದ ಅಧಿಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಕಚೇರಿಗೆ ರಜೆ ಹಾಕುವ ಮೂಲಕ ಗೈರು ಹಾಜರಾಗಿ ವಿಧಾನಸೌಧ, ವಿಕಾಸಸೌಧ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಆಡಳಿತ ಸುಧಾರಣೆ ಮತ್ತು ಆರ್ಥಿಕ ಮಿತವ್ಯಯದ ನೆಪವೊಡ್ಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಜನಸ್ಪಂದನ ಕೋಶ) ಶಾಖೆಯನ್ನು ರದ್ದುಗೊಳಿಸಿದೆ. ಕಾನೂನು ಕೋಶ ಶಾಖೆಯಲ್ಲಿನ ಅಧೀನ ಕಾರ್ಯದರ್ಶಿ ಹುದ್ದೆಗಳನ್ನು ರದ್ದುಪಡಿಸುವ ಕ್ರಮಕ್ಕೆ ಮುಂದಾಗಿದೆ. ವಿವಿಧ ಶಾಖೆಗಳನ್ನು ಸ್ಥಳಾಂತರಿಸುವ ಮೂಲಕ ಹುದ್ದೆಗಳನ್ನು ಕಡಿತಗೊಳಿಸುತ್ತಿದೆ.

ಯಾವುದೇ ಸರ್ಕಾರದ ತೀರ್ಮಾನ, ಶಿಫಾರಸು ಇಲ್ಲದಿದ್ದರೂ ಕೆಲವು ಇಲಾಖೆಗಳ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ/ಅಪರ ಮುಖ್ಯ ಕಾರ್ಯದರ್ಶಿಯವರೇ ಸಚಿವಾಲಯ ಕೈಪಿಡಿಗೆ ವಿರುದ್ಧವಾಗಿ ಇಲಾಖೆಯ ಕಾರ್ಯನಿರ್ವಹಣಾ ವ್ಯವಸ್ಥೆಯನ್ನೇ ಬದಲಾಯಿಸುತ್ತಿರುವ ಕ್ರಮದ ವಿರುದ್ಧ ನೌಕರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಚಿವಾಲಯದಲ್ಲಿನ 542 ಕಿರಿಯ ಸಹಾಯಕರ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪಸಮಿತಿಯ ಅವೈಜ್ಞಾನಿಕವಾಗಿ ಶಿಫಾರಸು ಮಾಡಿರುವ ಅಂಶಗಳನ್ನು ಕೈಬಿಡಬೇಕು. ಟಿ.ಎಂ.ವಿಜಯ ಭಾಸ್ಕರ್ ಅಧ್ಯಕ್ಷತೆಯಲ್ಲಿ ರಚಿಸಿರುವ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರಲ್ಲಿ ಸಚಿವಾಲಯದ ಕುರಿತು ನೀಡಿರುವ ಅವೈಜ್ಞಾನಿಕ ಶಿಫಾರಸುಗಳನ್ನು ಕೈಬಿಡುವಂತೆ ಸಚಿವಾಲಯ ನೌಕರರ ಸಂಘ ಆಗ್ರಹಿಸಿದೆ.

ಸಚಿವಾಲಯದ ಅಧಿಕಾರಿ/ನೌಕರರ ಸೇವೆಯನ್ನು ಸಚಿವರ ಆಪ್ತಶಾಖೆಗಳಲ್ಲಿ ಕಡ್ಡಾಯವಾಗಿ ಬಳಸಿಕೊಳ್ಳಲು ಆದೇಶಿಸುವುದರ ಜೊತೆಗೆ ಸಚಿವಾಲಯದ ಎಲ್ಲ ಇಲಾಖೆಗಳನ್ನು ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿಯೇ ಒಂದೆಡೆ ತರಬೇಕು. ಬಹುಮಹಡಿ ಕಟ್ಟಡದ ಆವರಣದಲ್ಲಿನ ರಸ್ತೆಯನ್ನು ಸಾರ್ವಜನಿಕ ರಸ್ತೆಯನ್ನಾಗಿ ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಬೇಡಿಕೆ ಇಟ್ಟಿದೆ.

ಇದನ್ನೂ ಓದಿ:ಭೂಕಬಳಿಕೆಗೆ ನಕಲಿ ದಾಖಲೆ ಸೃಷ್ಟಿ ಆರೋಪ: 17 ಜನರ ವಿರುದ್ಧ 4 ಪ್ರತ್ಯೇಕ ಪ್ರಕರಣ ದಾಖಲು

ABOUT THE AUTHOR

...view details