ಬೆಂಗಳೂರು: ಮೈತ್ರಿ ಸರ್ಕಾರದ ನಾಯಕರಿಗೆ ಮರ್ಯಾದೆ ಇದ್ದರೆ, ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಸಿ.ಎಂ.ಕುಮಾರಸ್ವಾಮಿ ವಿರುದ್ಧ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಮರ್ಯಾದೆ ಇದ್ದರೆ ವಿಶ್ವಾಸಮತ ಸಾಬೀತು ಮಾಡಿ: ಎಸ್.ಆರ್.ವಿಶ್ವನಾಥ್ ವಾಗ್ದಾಳಿ
ಮೈತ್ರಿ ಸರ್ಕಾರದ ಶಾಸಕರು ಸ್ಪೀಕರ್ ಆದೇಶಕ್ಕೆ ಬದ್ದರಾಗಿ ಸಂಜೆ 6 ಗಂಟೆಯೊಳಗೆ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಅವರು ನುಡಿದಂತೆ ನಡೆದರೆ ಕಿಂಚಿತ್ತಾದರೂ ಗೌರವ ಇರುತ್ತದೆ ಎಂದು ಸಿಎಂಗೆ ಶಾಸಕ ಎಸ್.ಆರ್.ವಿಶ್ವನಾಥ್ ಸಲಹೆ ನೀಡಿದ್ದಾರೆ.
ಶಾಸಕ ಎಸ್.ಆರ್.ವಿಶ್ವನಾಥ್ ಜನುಮದಿನದ ಅಂಗವಾಗಿ ಯಲಹಂಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಹಾಗೂ ನಾರಾಯಣ ಹೃದಯಾಲಯ ವತಿಯಿಂದ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಶಾಸಕರು ಸ್ಪೀಕರ್ ಆದೇಶಕ್ಕೆ ಬದ್ದರಾಗಿ 6 ಗಂಟೆಯೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಅವರು ನುಡಿದಂತೆ ನಡೆದರೆ ಕಿಂಚಿತ್ತಾದರೂ ಗೌರವ ಇರುತ್ತದೆ ಎಂದು ಸಲಹೆ ನೀಡಿದರು.
ಸುರಪುರ ಶಾಸಕ ರಾಜುಗೌಡ ಮಾತನಾಡಿ, ಮೈತ್ರಿ ಸರ್ಕಾರದ ಶಾಸಕರು ಬಹುಮತ ಸಾಬೀತು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಧರಣಿ, ವಿಶ್ವಾಸಮತ ಯಾಚನೆ ಮಾಡಲು ಸಮಯ ಮುಂದೂಡಿಕೆ ಮಾಡುತ್ತಿದ್ದಾರೆ. ಇಂದು ವಿಶ್ವಾಸಮತ ಯಾಚನೆ ಮಾಡಬೇಕು. ಇಲ್ಲವಾದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗರಂ ಆದ್ರು.