ನವದೆಹಲಿ : ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೀರೋ ಮೋಟೊಕಾರ್ಪ್ ಲಿಮಿಟೆಡ್ ಮತ್ತು ಹೀರೋ ಫಿನ್ ಕಾರ್ಪ್ ಲಿಮಿಟೆಡ್ ಸಿಎಂಡಿ ಪವನ್ ಮುಂಜಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ವಿಚಾರಣೆ ನಡೆಸಿದೆ. 2014-15 ರಿಂದ 2018-19ರ ಅವಧಿಯಲ್ಲಿ 54 ಕೋಟಿ ರೂ.ಗಳನ್ನು ವಿದೇಶಕ್ಕೆ ರವಾನೆ ಮಾಡಿದ್ದಕ್ಕಾಗಿ ಮುಂಜಾಲ್ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪ ಹೊರಿಸಿದೆ. ಇದಲ್ಲದೆ, ಮುಂಜಾಲ್ ಅವರ ನಿಕಟವರ್ತಿಗಳು 40 ಕೋಟಿ ರೂ.ಗಳಷ್ಟು ಮೊತ್ತದ ವಿದೇಶಿ ಕರೆನ್ಸಿಯನ್ನು ವಿದೇಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪಗಳಿವೆ.
ತನಿಖೆಯಲ್ಲಿ ಪಾಲ್ಗೊಳ್ಳಲು ಇಡಿಯಿಂದ ನೋಟಿಸ್ ಪಡೆದ ನಂತರ ಮುಂಜಾಲ್ ಸೋಮವಾರ ಬೆಳಗ್ಗೆ ಇಡಿ ಪ್ರಧಾನ ಕಚೇರಿಗೆ ಬಂದಿದ್ದರು. ಪಿಎಂಎಲ್ಎ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಆಗಸ್ಟ್ನಲ್ಲಿ ಮುಂಜಾಲ್ ಮತ್ತು ಸಾಲ್ಟ್ ಎಕ್ಸ್ಪೀರಿಯನ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ನ ಉದ್ಯೋಗಿಗಳಿಗೆ ಸೇರಿದ 12 ಸ್ಥಳಗಳ ಮೇಲೆ ದಾಳಿ ನಡೆಸಿ 25 ಕೋಟಿ ರೂ.ಮೌಲ್ಯದ ಆಭರಣಗಳು ಮತ್ತು ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿತ್ತು.
ನಿಷೇಧಿತ ವಸ್ತುಗಳನ್ನು ಸಾಗಿಸಲು ಮತ್ತು ಅಕ್ರಮವಾಗಿ ರಫ್ತು ಮಾಡಲು ಪ್ರಯತ್ನಿಸಿದ್ದಕ್ಕಾಗಿ ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 135 ರ ಅಡಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಮುಂಜಾಲ್, ಎಸ್ಇಎಂಪಿಎಲ್, ಅಮಿತ್ ಬಾಲಿ, ಹೇಮಂತ್ ದಹಿಯಾ, ಕೆ.ಆರ್.ರಾಮನ್ ಮತ್ತು ಇತರರ ವಿರುದ್ಧ ನವದೆಹಲಿಯ ಸಿಎಂಎಂಗೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಿತ್ತು. ಇದರ ಆಧಾರದ ಮೇಲೆ ಪಿಎಂಎಲ್ಎ ತನಿಖೆ ಪ್ರಾರಂಭಿಸಿದೆ.