ವಾಪಿ(ಗುಜರಾತ್) :ಬೈಕ್ನಲ್ಲಿ ಬಂದ ಅಪರಿಚಿತರು ಬಿಜೆಪಿ ತಾಲೂಕು ಉಪಾಧ್ಯಕ್ಷರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುಜರಾತ್ನ ವಲ್ಸಾದ್ ಎಂಬಲ್ಲಿ ನಡೆದಿದೆ. ಇಲ್ಲಿನ ರಾತಾ ಕೊಚರ್ವಾ ಗ್ರಾಮದಲ್ಲಿರುವ ಶಿವಮಂದಿರ ಬಳಿ ಘಟನೆ ನಡೆದಿದ್ದು, ವಾಪಿ ತಾಲೂಕು ಬಿಜೆಪಿ ಉಪಾಧ್ಯಕ್ಷ ಶೈಲೇಶ್ ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ ಸುಮಾರು 7.30ಕ್ಕೆ ಶೈಲೇಶ್ ಪಟೇಲ್ ಇಲ್ಲಿನ ರಾತಾ ಕೊಚರ್ವಾ ಗ್ರಾಮದಲ್ಲಿರುವ ಶಿವ ದೇವಾಲಯಕ್ಕೆ ತಮ್ಮ ಪತ್ನಿ ಸಮೇತ ಸ್ಕಾರ್ಪಿಯೋ ಕಾರಿನಲ್ಲಿ ಆಗಮಿಸಿದ್ದರು. ಈ ವೇಳೆ ಅವರ ಪತ್ನಿ ದೇವಾಲಯಕ್ಕೆ ತೆರಳಿದ್ದು, ಈ ವೇಳೆ ಶೈಲೇಶ್ ಕಾರಿನಲ್ಲೇ ಕುಳಿತು ಪತ್ನಿಯ ಆಗಮನಕ್ಕೆ ಕಾಯುತ್ತಿದ್ದರು. ಈ ವೇಳೆ, ಎರಡು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಶೈಲೇಶ್ ಪಟೇಲ್ ಮೇಲೆ ಗುಂಡಿನ ಸುರಿಮಳೆಯನ್ನೇ ಹರಿಸಿದ್ದಾರೆ. ಈ ವೇಳೆ ಮೂರು ಗುಂಡುಗಳು ಶೈಲೇಶ್ ಅವರಿಗೆ ತಗುಲಿದ್ದು, ತಕ್ಷಣದ ಅವರನ್ನು ವಾಪಿಯಲ್ಲಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾಗಿದೆ. ಆದರೆ, ಆದಾಗಲೇ ಶೈಲೇಶ್ ಪಟೇಲ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು, ಅಪರಿಚಿತರ ಪತ್ತೆಗೆ ಬಲೆ ಬೀಸಿದ್ದಾರೆ.
ಬಿಜೆಪಿ ಮುಖಂಡನ ಹತ್ಯೆ ಬಗ್ಗೆ ತಿಳಿಯುತ್ತಿದ್ದಂತೆ, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೇ ಬಿಜೆಪಿ ವಾಪಿ ತಾಲೂಕು ಅಧ್ಯಕ್ಷ ಸುರೇಶ್ ಪಟೇಲ್ ಸೇರಿದಂತೆ ಬಿಜೆಪಿ ಮುಖಂಡರು ಆಗಮಿಸಿ ಮೃತ ಶೈಲೇಶ್ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.