ಕರ್ನಾಟಕ

karnataka

By ETV Bharat Karnataka Team

Published : Jan 3, 2024, 2:37 PM IST

ETV Bharat / bharat

'ಸತ್ಯಕ್ಕೆ ಸಂದ ಜಯ': ಸುಪ್ರೀಂ ಕೋರ್ಟ್​ ತೀರ್ಪಿನ ಬಳಿಕ ಗೌತಮ್​ ಅದಾನಿ ಫುಲ್​ ಖುಷ್​

ಅದಾನಿ ಸಮೂಹದ ವಿರುದ್ಧದ ಆರೋಪಗಳ ಕುರಿತು ಎಸ್‌ಐಟಿ ಅಥವಾ ಸಿಬಿಐ ತನಿಖೆಗೆ ಆದೇಶಿಸುವ ಅಗತ್ಯವಿಲ್ಲ ಎಂದ ಸುಪ್ರೀಂಕೋರ್ಟ್​ ತೀರ್ಪನ್ನು ಅದಾನಿ ಸಮೂಹದ ಅಧ್ಯಕ್ಷ ಗೌತಮ್​ ಅದಾನಿ ಸ್ವಾಗತಿಸಿದ್ದಾರೆ.

ಗೌತಮ್​ ಅದಾನಿ
ಗೌತಮ್​ ಅದಾನಿ

ನವದೆಹಲಿ:'ಸತ್ಯ ಮೇಲುಗೈ ಸಾಧಿಸಿದೆ. ಸತ್ಯಮೇವ ಜಯತೆ'.. ಇದು ಅದಾನಿ- ಹಿಂಡನ್‌ಬರ್ಗ್ ವಿವಾದದ ಕುರಿತು ಸುಪ್ರೀಂಕೋರ್ಟ್ ಬುಧವಾರ ನೀಡಿದ ತೀರ್ಪಿಗೆ ಅದಾನಿ ಸಮೂಹಗಳ ಅಧ್ಯಕ್ಷ ಗೌತಮ್​ ಅದಾನಿ ಸಂತಸ ವ್ಯಕ್ತಪಡಿಸಿದ ರೀತಿ.

ದೇಶದ ಸಿರಿವಂತ ಉದ್ಯಮಿ ಅದಾನಿ ಅವರು, 'ಸತ್ಯವು ಮೇಲುಗೈ ಸಾಧಿಸಿದೆ. ಭಾರತದ ಬೆಳವಣಿಗೆಗೆ ತಮ್ಮ ಕಂಪನಿಗಳ ಕೊಡುಗೆ ಮುಂದುವರಿಯುತ್ತದೆ. ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ತೀರ್ಪು ಅದನ್ನು ಸಾಬೀತು ಮಾಡಿದೆ. ಸತ್ಯಮೇವ ಜಯತೆ' ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸುಪ್ರೀಂ ನೀಡಿದ ತೀರ್ಪೇನು?:ಅದಾನಿ-ಹಿಂಡನ್‌ಬರ್ಗ್ ಪ್ರಕರಣಗಳಲ್ಲಿ ಬಾಕಿ ಉಳಿದಿರುವ 2 ಪ್ರಕರಣಗಳ ತನಿಖೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ. ಜೊತೆಗೆ ಸೆಬಿಯ ಎಫ್‌ಪಿಐ ನಿಯಮಾವಳಿಗಳನ್ನು ರದ್ದುಗೊಳಿಸಲು ಇದೇ ವೇಳೆ ನಿರಾಕರಿಸಿದೆ.

ನ್ಯಾಯಾಲಯಗಳು ಸೆಬಿಯ ತನಿಖೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ತನಿಖೆಯನ್ನು ಸೆಬಿಯಿಂದ ಎಸ್‌ಐಟಿಗೆ ವರ್ಗಾಯಿಸಲೂ ಯಾವುದೇ ಬಲವಾದ ಆಧಾರವಿಲ್ಲ. ಹಿಂಡನ್‌ಬರ್ಗ್ ಅಥವಾ ಬೇರೆ ಯಾವುದೇ ವರದಿಗಳು ಪ್ರತ್ಯೇಕ ತನಿಖೆಗೆ ಆದೇಶಿಸಲು ಸೂಕ್ತ ಕಾರಣಗಳಿಲ್ಲ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ಅದಾನಿ ಗ್ರೂಪ್​ ವಿರುದ್ಧ ಅಮೆರಿಕದ ಹಿಂಡನ್​ಬರ್ಗ್​ ಸಂಸ್ಥೆ ಮಾಡಿದ ಆರೋಪಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ, ಸೆಬಿಯ ತನಿಖೆಯಲ್ಲಿ ನ್ಯಾಯಾಲಯದ ಪ್ರವೇಶ ಅಧಿಕಾರವು ಸೀಮಿತವಾಗಿದೆ. ಎಫ್‌ಪಿಐ ಮತ್ತು ಎಲ್‌ಒಡಿಆರ್ ನಿಯಮಗಳ ಮೇಲಿನ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳುವಂತೆ ಸೆಬಿಗೆ ನಿರ್ದೇಶಿಸಲು ಯಾವುದೇ ಸೂಕ್ತ ಆಧಾರಗಳಿಲ್ಲ ಎಂದು ಹೇಳಿದೆ.

ಇನ್ನೆರಡು ಕೇಸ್​ ಬಾಕಿ:ಸೆಬಿಯು 22 ರ ಪೈಕಿ 20 ಪ್ರಕರಣಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿದೆ. ಬಾಕಿ ಉಳಿದಿರುವ ಇನ್ನೆರಡು ಕೇಸ್​ಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ವರದಿ ನೀಡಲು ನಿರ್ದೇಶಿಸಲಾಗುವುದು. ಭಾರತೀಯ ಹೂಡಿಕೆದಾರರ ಆಸಕ್ತಿಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಮತ್ತು ಸೆಬಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಕೋರ್ಟ್ ಹೇಳಿತು.

ಕಳೆದ ವರ್ಷ ನವೆಂಬರ್ 24 ರಂದು ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ್ದ ಕೋರ್ಟ್​, ಅದಾನಿ ಸಮೂಹದ ವಿರುದ್ಧದ ಹಿಂಡನ್‌ಬರ್ಗ್ ವರದಿಯನ್ನು 'ವಾಸ್ತವಿಕ ಸ್ಥಿತಿ' ಎಂದು ಪರಿಗಣಿಸಲು ಸಾಧ್ಯವಿಲ್ಲ. ಈಗಾಗಲೇ ಸೆಬಿಯು ತನಿಖೆ ನಡೆಸುತ್ತಿದೆ. ಮುಕ್ತಾಯದ ಹಂತದಲ್ಲಿರುವ ತನಿಖೆಯನ್ನು ಬೇರೊಂದು ತನಿಖಾ ಸಂಸ್ಥೆಗ ವಹಿಸಲು ಸಾಧ್ಯವಿಲ್ಲ. ಸೆಬಿಯ ತನಿಖೆ ಮತ್ತು ತಜ್ಞರ ಸಮಿತಿಯ ಸದಸ್ಯರ ನಿಷ್ಪಕ್ಷಪಾತವನ್ನು ಅನುಮಾನಿಸುವ ಯಾವುದೇ ಆಧಾರಗಳಿಲ್ಲ ಎಂದಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಗೋಧ್ರಾ ದುರಂತದ ರೀತಿ ಮತ್ತೊಂದು ಘಟನೆ ನಡೆಯಬಹುದು: ಬಿ.ಕೆ.ಹರಿಪ್ರಸಾದ್

ABOUT THE AUTHOR

...view details