ಕರ್ನಾಟಕ

karnataka

ಚುನಾವಣೆ ಮುಹೂರ್ತಕ್ಕೂ ಮುನ್ನವೇ ಅಭ್ಯರ್ಥಿಗಳನ್ನು ಘೋಷಿಸಿದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ರಾವ್​!

By

Published : Aug 21, 2023, 5:46 PM IST

Telangana Assembly elections: ತೆಲಂಗಾಣ ವಿಧಾನಸಭೆಗೆ ವರ್ಷಾಂತ್ಯದಲ್ಲಿ ಚುನಾವಣೆಯ ನಡೆಯಲಿದ್ದು, ಅದಕ್ಕೂ ಮೊದಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ರಾವ್​ ಅವರು ತಮ್ಮ ಹುರಿಯಾಳುಗಳನ್ನು ಪ್ರಕಟಿಸಿದರು.

ತೆಲಂಗಾಣ ವಿಧಾನಸಭೆ ಚುನಾವಣೆ
ತೆಲಂಗಾಣ ವಿಧಾನಸಭೆ ಚುನಾವಣೆ

ಹೈದರಾಬಾದ್:ತೆಲಂಗಾಣ ವಿಧಾನಸಭೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆಗೂ ಮೊದಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ರಾವ್​ ಅವರು ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಎಲ್ಲ 118 ಹುರಿಯಾಳುಗಳನ್ನು ಇಂದು (ಸೋಮವಾರ) ಘೋಷಿಸಿದರು. ಸ್ವತಃ ಅವರು ಗಜ್ವೆಲ್ ಮತ್ತು ಕಾಮರೆಡ್ಡಿಯ ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದರೆ, ಪುತ್ರ, ಸಚಿವ ಕೆ.ಟಿ.ರಾಮರಾವ್​ ಸಿರ್ಸಿಲ್ಲಾದಿಂದ ಕಣಕ್ಕಿಳಿಯಲಿದ್ದಾರೆ.

ಬಿಆರ್​ಎಸ್​ ಪಕ್ಷದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆಗೆ ಪೂರ್ವ ಸಿದ್ಧತೆ ನಡೆಸಿದ್ದು, 7 ಸ್ಥಾನಗಳಲ್ಲಿ ಬದಲಾವಣೆ ಮಾಡಿ ಉಳಿದಂತೆ ಹಾಲಿ ಶಾಸಕರನ್ನೇ ಅಖಾಡಕ್ಕಿಳಿಸಿದ್ದಾರೆ. ಪಕ್ಷದ ರಾಜ್ಯ ಪ್ರಧಾನ ಕಚೇರಿ ತೆಲಂಗಾಣ ಭವನದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಅಸಮಾಧಾನಿತರಿಗೆ ಬೇರೆ ಹುದ್ದೆ:ರಾಷ್ಟ್ರೀಯ ಪಕ್ಷಗಳು ಸೇರಿ ಇತರ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಹೆಣಗಾಡುತ್ತಿದ್ದರೆ, ತೆಲಂಗಾಣ ಸಿಎಂ ಚುನಾವಣೆ ಘೋಷಣೆಗೂ ಮೊದಲೇ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ. 119 ವಿಧಾನಸಭಾ ಸ್ಥಾನಗಳ ಪೈಕಿ ತಾವು ಎರಡು ಕ್ಷೇತ್ರ ಸೇರಿದಂತೆ 118 ಅಭ್ಯರ್ಥಿಗಳನ್ನು ಘೋಷಿಸಿದ್ದು, ಅಸಮಾಧಾನಿತರಿಗೆ ಬೇರೆ ಹುದ್ದೆ ನೀಡುವ ಭರವಸೆ ನೀಡಿದರು.

2018 ರ ಚುನಾವಣೆಯಲ್ಲಿ ಬಿಆರ್​ಎಸ್​ ಪಕ್ಷ 88 ಸ್ಥಾನಗಳಲ್ಲಿ ಏಕಮೇವವಾಗಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿತ್ತು. ಪ್ರತಿಸ್ಪರ್ಧಿ ಕಾಂಗ್ರೆಸ್​ ಬರೀ 19 ಸ್ಥಾನ ಗೆದ್ದಿತ್ತು. ಬಿಜೆಪಿ ಶೂನ್ಯ ಸಂಪಾದನೆ ಮಾಡಿತ್ತು. ಇನ್ನಷ್ಟೇ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಬೇಕಿದೆ.

ಕಾಂಗ್ರೆಸ್​ ವಿರುದ್ಧ ಟೀಕೆ:ಅಭ್ಯರ್ಥಿಗಳ ಘೋಷಣೆಯ ಬಳಿಕ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ ಕೆಸಿಆರ್​, 50 ವರ್ಷಗಳ ಅಧಿಕಾರ ನಡೆಸಿದರೂ ಅಭಿವೃದ್ಧಿ ರಾಜಕಾರಣ ಮಾಡದ ಕಾಂಗ್ರೆಸ್​ ಮತ್ತೆ ಅಧಿಕಾರ ನೀಡಿ ಎಂದು ಜನರಲ್ಲಿ ಅಂಗಲಾಚುತ್ತಿದೆ. ಪಿಂಚಣಿಯನ್ನು 4 ಸಾವಿರಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದೆ. ಅಧಿಕಾರದಲ್ಲಿರುವ ಬೇರೆ ರಾಜ್ಯಗಳಲ್ಲಿ ಯಾಕೆ ಈ ಪಿಂಚಣಿಯನ್ನು ಘೋಷಿಸಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ, ಸರ್ಕಾರ ಕಚೇರಿಗಳಲ್ಲಿ ಮಧ್ಯವರ್ತಿಗಳ ಯುಗ ಆರಂಭವಾಗಲಿದೆ. ರಾಜ್ಯದ ಅಭಿವೃದ್ಧಿಗೆ ಬಿಆರ್​ಎಸ್​ ಶ್ರಮಿಸಿದೆ. ಮತ್ತೊಮ್ಮೆ ಪಕ್ಷಕ್ಕೆ ಆಶೀರ್ವಾದ ನೀಡಬೇಕು. 200 ರೂಪಾಯಿ ಪಿಂಚಣಿ ಆರಂಭಿಸಿದ್ದ ಕಾಂಗ್ರೆಸ್​, 4 ಸಾವಿರ ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಅಕ್ಟೋಬರ್​ 16 ರಂದು ಪ್ರಣಾಳಿಕೆ:ಇನ್ನು ಅಭ್ಯರ್ಥಿಗಳೇನೋ ಘೋಷಣೆಯಾಗಿದೆ. ಅಕ್ಟೋಬರ್​ 16 ರಂದು ವಾರಂಗಲ್​ನಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು. ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದರೆ, ಅಂಥವರನ್ನು ಪಕ್ಷದಿಂದಕಲೇ ಉಚ್ಚಾಟಿಸಲಾಗುವುದು ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:'ತೆಲುಗು ಜನರು ರಾಮೋಜಿ ರಾವ್‌ ಜೊತೆಗಿದ್ದಾರೆ': ಹಗರಣ ಬಹಿರಂಗಗೊಳಿಸಿದ್ದಕ್ಕಾಗಿ ಈಟಿವಿ ನೆಟ್​​ವರ್ಕ್​ಗೆ ಸಿಎಂ ಜಗನ್ ಕಿರುಕುಳ- ಚಂದ್ರಬಾಬು ನಾಯ್ಡು

ABOUT THE AUTHOR

...view details